ಆ್ಯಪ್ನಗರ

2 ಕೋಟಿ ರೂ. ವೆಚ್ಚದಲ್ಲಿ ಕಪಿಲೇಶ್ವರ ದೇವಸ್ಥಾನ ಜೀರ್ಣೋದ್ದಾರ

ಬೆಳಗಾವಿ: ಎರಡು ಕೋಟಿ ರೂ...

Vijaya Karnataka 3 Feb 2019, 5:00 am
ಬೆಳಗಾವಿ : ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡಿದ್ದು, ದಾನಿಗಳು ಮತ್ತು ಭಕ್ತರು ಈ ಪುಣ್ಯ ಕೆಲಸಕ್ಕೆ ಕೈಜೋಡಿಸಬೇಕೆಂದು ಶ್ರೀ ಕಪಿಲೇಶ್ವರ ಮಹಾದೇವ ಮಂದಿರ ಟ್ರಸ್ಟ್‌ನವರು ಮನವಿ ಮಾಡಿಕೊಂಡಿದ್ದಾರೆ.
Vijaya Karnataka Web BLG-0202-2-52-2RAJU-1


ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಟ್ರಸ್ಟ್‌ನ ಕಾರ್ಯದರ್ಶಿ ರಾಕೇಶ್‌ ಕಲಘಟಗಿ ಮತ್ತು ಅಧ್ಯಕ್ಷ ಸುನೀಲ ಬಾಳೇಕುಂದ್ರಿ, ಕೈಲಾಸ ಪರ್ವತ ಮತ್ತು ಕಾಶಿ ವಿಶ್ವನಾಥ ಮಂದಿರದಲ್ಲಿರುವ ಪ್ರಖರ ಶಿವತತ್ವ ಹಾಗೂ ಧನಾತ್ಮಕ ಶಕ್ತಿಯನ್ನು ಇಲ್ಲೂ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಮಂದಿರ ದಕ್ಷಿಣದ ಕಾಶಿಯಂದೇ ಪ್ರಸಿದ್ಧವಾಗಿದೆ. ದೇಶದ 12 ಜೋತಿರ್ಲಿಂಗ ಮತ್ತು 4 ಧಾಮಗಳ ದರ್ಶನ ಮಾಡಿದ ನಂತರ ಇಲ್ಲಿಗೆ ಬಂದು ಶ್ರೀ ಕಪಿಲೇಶ್ವರ ಪುಷ್ಕರಣಿಯಲ್ಲಿ ಮಿಂದಾಗಲೇ ಜೀವನಕ್ಕೆ ಸಾರ್ಥಕತೆ ಮೂಡುತ್ತದೆ. ಇಂದಿಗೂ ದೇಶದ ಸಾವಿರಾರು ಭಕ್ತರು ಬಂದು ಈ ಕಾರ್ಯಪೂರೈಸಿಕೊಂಡು ಹೋಗುತ್ತಾರೆ. ಅಭಿಷೇಕ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಇದಕ್ಕೆ ತಕ್ಕಂತೆ ದೇವಾಲಯ ಇದುವರೆಗೆ ಅಭಿವೃದ್ಧಿಯಾಗಿರಲಿಲ್ಲ. ಈಗ ಕೈಗೊಳ್ಳಲಾಗಿದೆ ಎಂದರು.

ಟ್ರಸ್ಟ್‌ ಕಳೆದ 8 ತಿಂಗಳಲ್ಲಿ 10 ಲಕ್ಷ ರೂ.ಗಳಿಗೂ ಅಧಿಕ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಗ್ರಾನೈಟ್‌ ನೆಲಹಾಸು, ಎಲ್‌ಇಡಿ ಬೋರ್ಡ್‌, ಸ್ಟೀಲ್‌ ಗೇಟ್‌, ಸ್ಟೀಲ್‌ ಗ್ರಿಲ್‌, ಶುದ್ಧ ಕುಡಿಯುವ ನೀರು, ಶೌಚಾಲಯ, ಸ್ನಾನಗೃಹ, ಪ್ರತಿ ಸೋಮವಾರ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ವಟಸಾವಿತ್ರಿ ವೃತದಂದು ಭಕ್ತರಿಗೆ ಅಲ್ಪೋಪಹಾರ, ಹಾಲು ವ್ಯರ್ಥ ಆಗುವುದನ್ನು ತಪ್ಪಿಸಲು ನಾಗಪಂಚಮಿಯಂದು ಹಾಲಿನ ಪ್ರಸಾದ ವಿತರಣೆ, ಹಾವುಗಳ ಕುರಿತು ಇರುವ ಭಯ ಹೋಗಲಾಡಿಸಲು ನಾನಾ ಜಾತಿಯ ಹಾವುಗಳನ್ನು ತಂದು ಗುಡಿ ಆವರಣದಲ್ಲಿ ಜನರಿಗೆ ತಿಳಿವಳಿಕೆ, ನವರಾತ್ರಿಯಂದು ವಿಶೇಷ ಅಲಂಕಾರ ಪೂಜೆ, ಹೋಮ, ಹವನ, ಯಾಗ, ಶ್ರಾವಣ ಸೋಮವಾರ ಹಾಗೂ ಪ್ರತಿದಿನ ರುದ್ರಾಭಿಷೇಕ, ಇತರೆ ಪೂಜಾಕಾರ್ಯಗಳನ್ನು ನಿಯಮಿತವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ದೇವಸ್ಥಾನದ ಪೂರ್ಣ ಜೀರ್ಣೋದ್ಧಾರ ಕೆಲಸಕ್ಕೆ ಈಗಾಗಲೇ ಸಾಕಷ್ಟು ಜನ ಕೈಜೋಡಿಸಿದ್ದಾರೆ. ಜಿಐಟಿಯವರು ತಾಂತ್ರಿಕ ನೆರವು ನೀಡುತ್ತಿದ್ದರೆ, ಸರಕಾರಿ ಗುತ್ತಿಗೆದಾರ ನಾರಾಯಣ ಚೌಗಲೆ ಆವರಣದ ತಡೆಗೋಡೆ ನಿರ್ಮಿಸಿಕೊಡುತ್ತಿದ್ದಾರೆ. ಧ್ಯಾನಮಂದಿರದ ಗೋಡೆಯಲ್ಲಿ ಶಿವನ ಜೀವನಕ್ಕೆ ಸಂಬಂಧಿಸಿದ 15 ಪ್ರಸಂಗಳನ್ನು ಚಿತ್ರಿಸಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ, ರಾಕೇಶ ಕಲಘಟಗಿ ಮೊ:9845020995, ಸುನೀಲ ಬಾಳೇಕುಂದ್ರಿ ಮೊ:9844283007, ಶಿವಶಂಕರ ಮಳಗಲಿ ಮೊ:9448136299 ಅವರನ್ನು ಸಂಪರ್ಕಿಸಬಹುದು ಎಂದು ತಿಳಿದರು.

ಶಿವಶಂಕರ ಮಳಗಲಿ, ಸತೀಶ್‌ ನಿಲಜಕರ್‌, ರಾಜು ಬಾತಕಾಂಡೆ, ಅಜಿತ ಜಾಧವ, ಅಭಿಜಿತ ಚವಾಣ, ಅನಿಲ ಮುತಗೇಕರ್‌, ವಿವೇಕ ಕೊಸನದಲ, ದೌಲತ್‌ ಸಾಳುಂಕೆ, ನಾಗರಾಜ ಕಟ್ಟಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ