ಆ್ಯಪ್ನಗರ

ದುರಸ್ತಿ ಭಾಗ್ಯ ಬಯಸುತ್ತಿದೆ ಹದಗೆಟ್ಟ ರಸ್ತೆ

ರುದ್ರೇಶ ಸಂಪಗಾವಿ ಇಟಗಿ ಗಂದಿಗವಾಡ ಗ್ರಾಮದ ಶ್ರೀ ರುದ್ರಸ್ವಾಮಿ ...

Vijaya Karnataka 21 Aug 2018, 5:00 am
ರುದ್ರೇಶ ಸಂಪಗಾವಿ ಇಟಗಿ
Vijaya Karnataka Web BEL-20 ITAGI 1


ಗಂದಿಗವಾಡ ಗ್ರಾಮದ ಶ್ರೀ ರುದ್ರಸ್ವಾಮಿ ದೇವಸ್ಥಾನದಿಂದ ಇಟಗಿ-ತೋಲಗಿ ಕ್ರಾಸ್‌ ವರೆಗಿನ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಚಾಲಕರು ಮತ್ತು ನಾಗರಿಕರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ.

ಸುಮಾರು 2 ಕಿಮೀ ರಸ್ತೆಯಲ್ಲಿ ಎಲ್ಲಿ ನೋಡಿದರೂ ತಗ್ಗು-ಗುಂಡಿಗಳೇ ಕಾಣುತ್ತವೆ. ಹೀಗಾಗಿ ಇಲ್ಲಿ ವಾಹನಗಳನ್ನು ಅನಿವಾರ್ಯವಾಗಿ ನಿಧಾನವಾಗಿ ಚಾಲನೆ ಮಾಡಬೇಕು. ದ್ವಿಚಕ್ರ ವಾಹನ ಸವಾರರು ಒಂದು ತಗ್ಗು ತಪ್ಪಿಸಲು ಹೋಗಿ ಇನ್ನೊಂದು ತಗ್ಗಿಗೆ ಇಳಿದು ಆಯ ತಪ್ಪಿ ಅಪಘಾತಗಳು ಸಂಭವಿಸಿದ ಉದಾಹರಣೆಗಳಿವೆ. ಇದು ಜಿಲ್ಲಾ ಮುಖ್ಯ ರಸ್ತೆಯಾಗಿದ್ದರೂ ಕಳೆದ ಎರಡು ವರ್ಷಗಳಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ರಸ್ತೆ ದುರಸ್ತಿಗೆ ಮನಸ್ಸು ಮಾಡಿಲ್ಲ.

ಗಂದಿಗವಾಡ ಗ್ರಾಮದಿಂದ ಇಟಗಿ, ಖಾನಾಪುರ, ಬೆಳಗಾವಿ, ಬೈಲಹೊಂಗಲ, ಕಿತ್ತೂರಿಗೆ ತೆರಳುವವರು, ಶಾಲಾ-ಕಾಲೇಜುಗಳಿಗೆ ತೆರಳುವವರು ಇದೇ ರಸ್ತೆಯಲ್ಲಿ ಸಂಚರಿಸಬೇಕು. ಈ ರಸ್ತೆಯಲ್ಲಿ ಹಗಲು - ರಾತ್ರಿ ವಾಹನ ಸಂಚಾರ ಇರುತ್ತದೆ. ವಿದ್ಯುತ್‌ ವಿತರಣಾ ಕೇಂದ್ರದ ಮುಂದಿನ ರಸ್ತೆ ಮಾತ್ರ ಕಳೆದ ವರ್ಷ ರೀಪೇರಿ ಭಾಗ್ಯ ಕಂಡಿದೆ. ಉಳಿದ ರಸ್ತೆಯನ್ನು ಕಡೆಗಣಿಸಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ರಸ್ತೆ ಹದಗೆಟ್ಟಿದ್ದರಿಂದ ಪ್ರಯಾಣಿಕರು ಮತ್ತು ವಾಹನ ಚಾಲಕರ ಗೋಳು ದೇವರಿಗೇ ಪ್ರೀತಿ ಎನ್ನುವಂತೆ ಆಗಿದೆ. ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚರಿಸುವಾಗ ಸಾಕಷ್ಟು ಭಾರಿ ಚಕ್ರ ಪಂಚರ್‌ ಆಗಿ ಕೆಟ್ಟು ನಿಂತ ಉದಾಹರಣೆಗಳಿವೆ. ಪ್ರಯಾಣಿಕರು ಮಳೆಗಾಲದಲ್ಲಿ ಈ ರಸ್ತೆ ಬದಿಯಲ್ಲಿ ಸಾಗುವಾಗ ಕೆಸರಿನ ಮಜ್ಜನ ಮಾಡಿಕೊಂಡೇ ಸಾಗಬೇಕಾಗಿದೆ. ರಸ್ತೆ ಬದಿಯ ಗಟಾರುಗಳು ಮಾಯವಾಗಿವೆ. ಗಟಾರು ಇಲ್ಲದ್ದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ.

''ಮರಾಠಿ ಭಾಷಾ ಪ್ರೇಮದ ಶಾಸಕರು ಪೂರ್ವ ಭಾಗವನ್ನು ನಿರ್ಲಕ್ಷ ್ಯ ಮಾಡುತ್ತಿದ್ದಾರೆ. ಇಲ್ಲಿಯ ವರೆಗೆ ಆಳಿದ ಶಾಸಕರು ಪಶ್ಚಿಮ ಭಾಗವನ್ನು ಮಾತ್ರ ಅಭಿವೃದ್ಧಿ ಮಾಡುತ್ತ ಬಂದಿದ್ದಾರೆ. ಅಧಿಕಾರಿಗಳು ಶಾಸಕರ ತಾಳಕ್ಕೆ ಕುಣಿಯುತ್ತಿದ್ದಾರೆ. ರಸ್ತೆ ಮತ್ತು ಇನ್ನಿತರ ಅಭಿವೃದ್ಧಿ ಕಾರ್ಯಗಳ ಕಡೆಗೆ ಗಮನ ಹರಿಸುತ್ತಿಲ್ಲ'' ಎಂದು ಗಡಿನಾಡು ಹಿತರಕ್ಷ ಣಾ ವೇದಿಕೆ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಎಂ.ರಾಜೀಬಾಯಿ ಆರೋಪಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ