ಆ್ಯಪ್ನಗರ

ಮುದ್ರಾಂಕ ಶುಲ್ಕ ಹೆಚ್ಚಿಸದಂತೆ ಕೃಷಿಕ ಸಮಾಜದಿಂದ ಮನವಿ

ಬೈಲಹೊಂಗಲ: ಬೈಲಹೊಂಗಲ ಹಿರಿಯ ನೋಂದಣಿ ಅಧಿಕಾರಿಗಳ ವ್ಯಾಪ್ತಿಗೆ ಬರುವ ಕೃಷಿ ಜಮೀನುಗಳ ಮೌಲ್ಯಮಾಪನ ದರ ಹೆಚ್ಚಿಸದೆ ಸದ್ಯದ ದರವನ್ನೇ ಮುಂದುವರಿಸುವಂತೆ ...

Vijaya Karnataka 6 Sep 2018, 5:00 am
ಬೈಲಹೊಂಗಲ: ಬೈಲಹೊಂಗಲ ಹಿರಿಯ ನೋಂದಣಿ ಅಧಿಕಾರಿಗಳ ವ್ಯಾಪ್ತಿಗೆ ಬರುವ ಕೃಷಿ ಜಮೀನುಗಳ ಮೌಲ್ಯಮಾಪನ ದರ ಹೆಚ್ಚಿಸದೆ ಸದ್ಯದ ದರವನ್ನೇ ಮುಂದುವರಿಸುವಂತೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದ ವತಿಯಿಂದ ಪಟ್ಟಣದ ಪ್ರಭಾರಿ ನೋಂದಣಿ ಅಧಿಕಾರಿ ಶೈಲಾ ಗೌಡರಗೆ ಮನವಿ ಸಲ್ಲಿಸಲಾಯಿತು.
Vijaya Karnataka Web BEL-5HTP6


ಬೆಂಗಳೂರಿನ ಮೌಲ್ಯಮಾಪನಾ ಸಮಿತಿ ಮತ್ತು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುಂದ್ರಾಂಕಗಳ ಆಯುಕ್ತರ ಆದೇಶದನ್ವಯ 2018-19ನೇ ಸಾಲಿಗೆ ಜಾರಿಗೆ ಬರುವಂತೆ ಈಗಿನ ಮಾರುಕಟ್ಟೆ ಬೆಲೆಗಿಂತ ಶೇ.15ರಿಂದ 20ರಷ್ಟು ಹೆಚ್ಚಿಸುವ ಸಂಬಂಧ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ತಿಳಿಸಲಾಗಿದೆ. ಅದರಂತೆ ಸಂಘದ ವತಿಯಿಂದ ಇರುವ ದರವನ್ನೇ ಮುಂದುವರಿಸಿಕೊಂಡು ಹೋಗುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಂತೇಶ ಕಮತ ಮಾತನಾಡಿ, ಕಳೆದ ಐದು ವರ್ಷಗಳಿಂದ ಬರಗಾಲದಿಂದ ಬೇಸತ್ತ ರೈತರು ಸಾಲದ ಸುಳಿಯಲ್ಲಿ ಸಿಲುಕಿ ತಮ್ಮ ಜಮೀನುಗಳನ್ನು ಮಾರಾಟ ಮಾಡಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ಆದೇಶದಿಂದ ತಮ್ಮ ಜಮೀನು ವ್ಯವಹಾರಗಳಿಗಾಗಿ ಹೆಚ್ಚಿನ ಮುದ್ರಾಂಕ ಶುಲ್ಕ ಪಾವತಿಸಬೇಕಾಗುತ್ತದೆ. ಇದರಿಂದ ರೈತರು ಕೃಷಿ ಭೂಮಿಯನ್ನು ಹಣಗಳಿಕೆಗೆಗಾಗಿ ಉದ್ಯಮಿಗಳಿಗೆ ಮಾರಾಟ ಮಾಡುವ ಸ್ಥಿತಿ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೀಗಾಗಿ ಹೊಸದಾಗಿ ಸ್ಥಾಪಿಸಿರುವ ಮಾರುಕಟ್ಟೆಯ ಮೌಲ್ಯದ ಪರಿಷ್ಕರಣೆ ಆದೇಶವನ್ನು ಕೈಬಿಡಬೇಕೆಂದು ಆಗ್ರಹಿಸಿದರು. ಇದಕ್ಕೆ ಒಪ್ಪದಿದ್ದರೆ ಮುಂದೆ ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಾರುತಿ ತಿಗಡಿ, ಬಸವರಾಜ ದುಗ್ಗಾಣಿ, ಎಫ್‌.ಎಸ್‌. ಸಿದ್ದನಗೌಡರ, ನಿಂಗಪ್ಪ ಕರಿಕಟ್ಟಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ