ಆ್ಯಪ್ನಗರ

ಕ್ಯಾಂಪ್‌ ಪ್ರದೇಶದ ನಿರ್ಬಂಧಿತ ರಸ್ತೆಗಳು ಸಂಚಾರಕ್ಕೆ ಮುಕ್ತ

ಬೆಳಗಾವಿ: ಇಲ್ಲಿನ ಕ್ಯಾಂಪ್‌ ...

Vijaya Karnataka 7 Jun 2018, 5:00 am
ಬೆಳಗಾವಿ: ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿ ಮಿಲಿಟರಿ ವ್ಯವಸ್ಥೆಯಿಂದ ನಿರ್ಬಂಧಿಸಲ್ಪಟ್ಟಿದ್ದ 8 ರಸ್ತೆಗಳು ಇನ್ನು ಮುಂದೆ ನಾಗರಿಕ ಸಂಚಾರಕ್ಕೆ ಮುಕ್ತವಾಗಲಿವೆ.
Vijaya Karnataka Web BLG-0606-2-52-6RAJU-8


ಬುಧವಾರ ಜರುಗಿದ ಕ್ಯಾಂಟೋನ್ಮೆಂಟ್‌ ಬೋರ್ಡ್‌ನ ಸಾಮಾನ್ಯ ಸಭೆಯಲ್ಲಿ ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ಧ್ವನಿ ಎತ್ತಿದ್ದ ನಾಗರಿಕರೆಲ್ಲರಿಗೂ ಖುಷಿ ತರಿಸಿದೆ. 'ವಿಜಯ ಕರ್ನಾಟಕ' ಈ ಕುರಿತು ವಿಸ್ತೃತ ವರದಿ ಪ್ರಕಟಿಸಿ ಸಾರ್ವಜನಿಕ ಗಮನ ಸೆಳೆದಿತ್ತು.

ಬೋರ್ಡ್‌ನ ಚುನಾಯಿತ ಸದಸ್ಯ ಸಾಜೀದ್‌ ಶೇಖ್‌ ಸಭೆ ಆರಂಭದಲ್ಲೇ ಈ ವಿಷಯ ಪ್ರಸ್ತಾಪ ಮಾಡಿದರು. ಸ್ಮಾರ್ಟ್‌ ರೋಡ್‌, ಸ್ಟೆವ್‌ಲ್ಲೇ ರೋಡ್‌, ಚೌಧರಿ ರೋಡ್‌, ಸಿಮಿಟರಿ ರೋಡ್‌, ಅಲ್ಬರ್ಟ್‌ ಎಕ್ಕಾ, ಫಿಡರ್‌ ರೋಡ್‌, ಲಕ್ಷ್ಮೇಮಂದಿರ ರೋಡ್‌, ರಾಜೇಂದ್ರ ಸಿಂಗ್‌ಜಿ ರೋಡ್‌, ಅರ್ಸೇನಲ್‌ ರೋಡ್‌, ಗುರುದ್ವಾರ ರೋಡ್‌ಗಳಲ್ಲಿ ಸಾರ್ವಜನಿಕ ಸಂಚಾರ ನಿರ್ಬಂಧಿಸಿದ್ದರಿಂದ ಜನಸಾಮಾನ್ಯರಿಗೆ ಆಗುತ್ತಿರುವ ತಾಪತ್ರಯಗಳನ್ನು ವಿವರಿಸಿದರು.

ಇದಕ್ಕೆ ಧ್ವನಿ ಸೇರಿಸಿದ ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರು ನಿರ್ಬಂಧಿತ ರಸ್ತೆಗಳು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲೇಬೇಕೆಂದು ಒತ್ತಿ ಹೇಳಿದರು. ಆದರೆ, ಕ್ಯಾಂಟೋನ್ಮೆಂಟ್‌ ಬೋರ್ಡ್‌ನ ಅಧ್ಯಕ್ಷರೂ ಆಗಿರುವ ಎಂಎಲ್‌ಐಆರ್‌ಸಿಯ ಬ್ರಿಗೇಡಿಯರ್‌ ಗೋವಿಂದ ಕಲವಾಡ, ಇಲ್ಲಿನ ಎಲ್ಲ ರಸ್ತೆಗಳು ಸಾರ್ವಜನಿಕ ಸಂಚಾರಕ್ಕೆ ಅಲ್ಲ. ಅವರಿಗಾಗಿ ಬೇರೆ ರಸ್ತೆಗಳನ್ನು ನೀಡಲಾಗಿದೆ ಎಂದು ವಾದಿಸಿದರು. ಸಭೆ ಇದಕ್ಕೆ ಸಮ್ಮತಿಸಲಿಲ್ಲ. ವಿಷಯ ದೀರ್ಘ ಮತ್ತು ಬಿರುಸಿನ ಚರ್ಚೆಗೆ ಕಾರಣವಾಯಿತು.

ಸ್ವತಃ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ದೇಶದ 6 ಕಮಾಂಡ್‌ಗಳ ಎಲ್ಲ ಕ್ಯಾಂಟೋನ್ಮೆಂಟ್‌ ವ್ಯಾಪ್ತಿಯಲ್ಲಿ ನಿರ್ಬಂಧಿಸಲ್ಪಟ್ಟಿರುವ ಎಲ್ಲ ರಸ್ತೆಗಳನ್ನು ನಾಗರಿಕ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಮೇ ತಿಂಗಳಿನಲ್ಲೇ ಆದೇಶಿಸಿದೆ. ಮಿಲಿಟರಿ ವ್ಯವಸ್ಥೆ ಆದೇಶ ಪಾಲನೆ ಮಾಡಿಲ್ಲ. ನೀವು ಮಾಡುತ್ತಿರೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸಂಸದ ಸುರೇಶ ಅಂಗಡಿ ಮತ್ತು ಸದಸ್ಯರು ಗರಂ ಆದರು. ಇದರಿಂದ ಬ್ರಿಗೇಡಿಯರ್‌ ಬಂದ್‌ ಮಾಡಲಾಗಿರುವ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲು ಸಮ್ಮತಿಸಿದರು. ಸದ್ಯಕ್ಕೆ 6 ರಸ್ತೆಗಳಲ್ಲಿ ಅವಕಾಶ ನೀಡಲಾಗುತ್ತದೆ. ಇನ್ನುಳಿದ ಎರಡರ ಕುರಿತು ಮೇಲಾಧಿಕಾರಿಗಳ ಜತೆಗೆ ಸಮಾಲೋಚಿಸಿದ ನಂತರ ಕ್ರಮ ಜರುಗಿಸಲಾಗುವುದು ಎಂದರು.

ನಾಗರಿಕ ಸೌಕರ್ಯ, ಅಭಿವೃದ್ಧಿ ಸಂಗತಿಗಳೂ ಸಭೆಯಲ್ಲಿ ಚರ್ಚೆಗೊಂಡವು. ಶಾಸಕ ಅನಿಲ ಬೆನಕೆ, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಎಚ್‌.ಬಿ., ರಿಜ್ವಾನ್‌ ಬೇಪಾರಿ, ಕ್ಯಾಂಟೋನ್ಮೆಂಟ್‌ ಸಿಇಒ ದಿವ್ಯಾ ಶಿವರಾಮ್‌, ಸದಸ್ಯರಾದ ವಿಕ್ರಮ ಪುರೋಹಿತ, ಡಾ.ಮದನ್‌ ಡೊಂಗರೆ, ಅಲ್ಲೇದೀನ್‌ ಕಿಲ್ಲೇದಾರ, ಆರ್ಬಿಯಾ ಧಾರವಾಡಕರ್‌, ನಿರಂಜನ ಅಷ್ಟೇಕರ್‌, ಬೋರ್ಡ್‌ ಆರೋಗ್ಯಾಧಿಕಾರಿ ಹಿಮಾಂಷು ದೀಕ್ಷಿತ, ಕರ್ನಲ್‌ ಜಾನಿ ಜೋಜೋ, ಆ್ಯಡಂ ಕಮಾಂಡೆಂಟ್‌ ವಿಜಯ ಭಟ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ