ಆ್ಯಪ್ನಗರ

7 ಲಕ್ಷ ಸಾಲಕ್ಕೆ 70 ಲಕ್ಷ ವಸೂಲಿ!

ಬೆಳಗಾವಿ: ಖಾಸಗಿ ಸಂಸ್ಥೆ ಮತ್ತು ...

Vijaya Karnataka 16 Sep 2018, 5:00 am
ಬೆಳಗಾವಿ: ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಕೆಲವರಿಗೆ ಏಳು ಲಕ್ಷ ರೂ. ಕೊಟ್ಟು 70 ಲಕ್ಷ ರೂ. ಸಾಲ ಎಂದು ಬರೆಸಿಕೊಂಡಿರುವುದು ಸಾರ್ವಜನಿಕರ ದೂರಿನಲ್ಲಿ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಇಲಾಖೆ ಇಂಥದ್ದಕ್ಕೆ ಅವಕಾಶ ಕೊಡಬಾರದು ಎಂದು ಸಿಎಂ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಸಿದರು.
Vijaya Karnataka Web rs 70 lakh for 7 lakh loan
7 ಲಕ್ಷ ಸಾಲಕ್ಕೆ 70 ಲಕ್ಷ ವಸೂಲಿ!


ಸುವರ್ಣ ವಿಧಾನಸೌಧದಲ್ಲಿ ಜನತಾ ದರ್ಶನದ ಬಳಿಕ ಮಾತನಾಡಿದ ಅವರು, ''ರೈತರು ಸಾಲ ಮರು ಪಾವತಿಸಿದರೂ ಇನ್ನೂ ಬಾಕಿ ಇದೆ ಎಂದು ಹಣ ಕಟ್ಟಿಸಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ಜನ ದೂರಿದ್ದಾರೆ. ಅಲ್ಲದೆ, ಸಾಲಕ್ಕೆ ಬದಲು ಜಮೀನು ಬರೆಸಿಕೊಂಡು ತೊಂದರೆ ಕೊಡುತ್ತಿರುವ ದೂರುಗಳೂ ಕೇಳಿಬಂದಿವೆ. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು'', ಎಂದು ಸೂಚಿಸಿದರು. ಅಲ್ಲದೆ, ''ಸಾಲ ಪಡೆದವರನ್ನು ಹಿಂಸಿಸಿದರೆ ಅಂಥವರಿಗೆ ಒಂದು ವರ್ಷ ಜೈಲು ಶಿಕ್ಷೆ ಕಾಯ್ದೆ ಜಾರಿಗೊಳಿಸಲಾಗಿದೆ'', ಎಂದು ಎಚ್ಚರಿಸಿದರು.

''ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಹಲವು ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಜನರು ಅಹವಾಲು ಹಿಡಿದು ಬಂದಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಮಾಡುವುದೇ ನಮ್ಮ ಮುಖ್ಯ ಉದ್ದೇಶ. ಇನ್ನೂ ಸಾಕಷ್ಟು ಜನರು ಅಹವಾಲು ಸಲ್ಲಿಸಲು ಬಾಕಿ ಉಳಿದಿರುವುದರಿಂದ ತಮ್ಮ ಮೇಲೆ ವಿಶ್ವಾಸವಿಟ್ಟು ಅಧಿಕಾರಿಗಳ ಬಳಿ ಅರ್ಜಿ ಸಲ್ಲಿಸಿದರೆ ಎಲ್ಲ ಅರ್ಜಿಗಳನ್ನು ಬೆಂಗಳೂರಿಗೆ ತರಿಸಿಕೊಂಡು ಸ್ವತಃ ಪರಿಶೀಲನೆ ಮಾಡುತ್ತೇನೆ'', ಎಂದು ಭರವಸೆ ನೀಡಿದರು. ಅಲ್ಲದೆ, ಪರಿಶೀಲನೆ ನಂತರ ಎಲ್ಲ ಅಹವಾಲುದಾರರ ಮನೆಗೆ ಪತ್ರ ಕೂಡ ಬರೆಸುವುದಾಗಿ ತಿಳಿಸಿದರು.

ಅಧಿಕಾರಿಗಳಿಗೆ ಕಿವಿಮಾತು: ''ವಸತಿ, ಅನಾರೋಗ್ಯ, ಆರ್ಥಿಕ ಸಮಸ್ಯೆ, ನಿರುದ್ಯೋಗ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ಜನರು ಬಂದಿದ್ದಾರೆ. ನನ್ನ ಪರಮಾಧಿಕಾರದಿಂದ 5 ಲಕ್ಷ ರೂ. ವರೆಗೂ ಪರಿಹಾರ ಕೊಡಲು ಅವಕಾಶವಿದೆ. ಆದರೆ, ಸಮಸ್ಯೆ ಹೇಳಿಕೊಂಡು ಬರುವ ಜನರಿಗೆ ನಮ್ಮ ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣದಿಂದಲೇ ಇಂತಹ ಸಮಸ್ಯೆಗಳು ಹೆಚ್ಚುತ್ತವೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು'', ಎಂದು ಕಿವಿಮಾತು ಹೇಳಿದರು.

ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಸಿಎಂ ಕಚೇರಿಗೆ ಕಳಿಸಿಕೊಟ್ಟು ಮುಖ್ಯಮಂತ್ರಿ ಪರಿಹಾರ ಧನದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್‌, ಅಂಜಲಿ ನಿಂಬಾಳ್ಕರ್‌ ಇನ್ನಿತರರು ಉಪಸ್ಥಿತರಿದ್ದರು.

ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆಗಳ ಬಗ್ಗೆ ಒಂದು ವಾರದೊಳಗೆ ಈ ಭಾಗದ ರೈತರು ಮತ್ತು ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ. ಮೈತ್ರಿ ಸರಕಾರ ರೈತರ ಪರವಾಗಿದೆ. ಸರಕಾರಕ್ಕೆ ಚ್ಯುತಿ ಬಾರದ ರೀತಿ ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸಬೇಕು.
- ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ