ಗಣೇಶ್ ಹುಕ್ಕೇರಿ ರಾಜೀನಾಮೆ ವದಂತಿ, ಗೊಂದಲ
ಸರಕಾರದ ಮುಖ್ಯ ಸಚೇತಕರೂ ಆಗಿರುವ ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ ...
Vijaya Karnataka 11 Jul 2019, 10:51 pm
ಬೆಳಗಾವಿ/ಯಕ್ಸಂಬಾ: ಸರಕಾರದ ಮುಖ್ಯ ಸಚೇತಕರೂ ಆಗಿರುವ ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ ಕೂಡ ರಾಜೀನಾಮೆ ನೀಡಲು ತೆರಳಿದ್ದಾರೆಂಬ ವದಂತಿ ಬುಧವಾರ ಅವರ ಸ್ವಗ್ರಾಮವಾದ ಯಕ್ಸಂಬಾ ಸೇರಿದಂತೆ ಜಿಲ್ಲೆಯಲ್ಲಿ ಕೆಲಕಾಲ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಿತು. ಗಣೇಶ್ ಹುಕ್ಕೇರಿ ವಿಧಾನಸಭೆ ಅಧಿವೇಶನ ವಿಚಾರವಾಗಿ ಸ್ಪೀಕರ್ ರಮೇಶ್ಕುಮಾರ್ ಅವರನ್ನು ಭೇಟಿಯಾಗಲು ಅವರ ಕಚೇರಿಗೆ ತೆರಳಿದ್ದರು. ಆದರೆ, ಈ ಕುರಿತಂತೆ ಮಾಧ್ಯಮಗಳಲ್ಲಿ ಗಣೇಶ್ ಹುಕ್ಕೇರಿ ಕೂಡ ರಾಜೀನಾಮೆ ನೀಡಲು ಮುಂದಾಗಿದ್ದಾರೆಯೇ ಎಂಬ ಊಹಾಪೋಹದ ವರದಿ ಬಿತ್ತರವಾದ್ದರಿಂದ ಕಾರ್ಯಕರ್ತರು ಆತಂಕಕ್ಕೊಳಗಾದರು. ನೈಜ ಕಾರಣ ಗೊತ್ತಾಗಿ, ಗಣೇಶ್ ಹುಕ್ಕೇರಿ ರಾಜೀನಾಮೆ ನೀಡುತ್ತಿಲ್ಲ ಎಂಬುದು ಖಚಿತವಾದ ನಂತರ ನಿರಾಳರಾದರು. ಈ ಹಿಂದೆಯೂ ಒಮ್ಮೆ ಗಣೇಶ್ ಹುಕ್ಕೇರಿ ಬಿಜೆಪಿ ಸೇರುತ್ತಾರೆಂಬ ವದಂತಿ ಹರಡಿತ್ತು.