ಬೆಳಗಾವಿ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ರಚನೆ ಸಮರ್ಪಕವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನುವ ವದಂತಿಯನ್ನು ಅಲ್ಲಗಳೆದಿರುವ ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ್ ಜಾರಕಿಹೊಳಿ, ''ಪರಮೇಶ್ವರ್ಗೆ ಅಧಿಕಾರವೇ ಇಲ್ಲ, ಪಾಪ ಅವರ ವಿರುದ್ಧ ನಾನ್ಯಾಕೆ ಮುನಿಸಿಕೊಳ್ಳಲಿ'', ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. 'ವಿಜಯ ಕರ್ನಾಟಕ'ದೊಂದಿಗೆ ಮಾತನಾಡಿದ ಅವರು, ''ಪ್ರಚಾರ ಸಮಿತಿಗೆ ಡಿ.ಕೆ.ಶಿವಕುಮಾರ ಅವರು ತಮಗೆ ತಿಳಿದವರನ್ನು ಹಾಕಿಕೊಂಡಿದ್ದಾರೆ. ಅದರಲ್ಲಿ ನನ್ನನ್ನು ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಾನು ಎಐಸಿಸಿ ಕಾರ್ಯದರ್ಶಿಯಾಗಿ ಕಾಯಂ ಆಹ್ವಾನಿತನಿದ್ದೇನೆ'', ಎಂದರು. ''ಮಾಧ್ಯಮದಲ್ಲಿ ದಿನಕ್ಕೊಂದು ರೀತಿ ಬರುತ್ತಿದೆ. ಅದು ಅವರವರೇ ಸೃಷ್ಟಿ ಮಾಡಿಕೊಳ್ಳುತ್ತಿರುವುದು. ನಾನು ಅಸಮಾಧಾನಗೊಂಡಿದ್ದರೆ ಮುಖ್ಯಮಂತ್ರಿಗಳ ವಿರುದ್ಧವೇ ಮಾತನಾಡುತ್ತೇನೆ. ಯಾರ ವಿರುದ್ಧವೂ ಮಾತನಾಡಲು ಹೆದರುವ ಪ್ರಶ್ನೆಯೇ ಇಲ್ಲ. ಈಗ ಅಂತಹ ಯಾವ ಬೆಳವಣಿಗೆಯೂ ನಡೆದಿಲ್ಲ'', ಎಂದು ಅವರು ಹೇಳಿದರು. ಮಂಗಳವಾರ ನಡೆಯಲಿರುವ ಕೆಪಿಸಿಸಿ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸತೀಶ್ ಸೋಮವಾರ ಸಂಜೆ ಬೆಳಗಾವಿಯಿಂದ ಬೆಂಗಳೂರಿಗೆ ತೆರಳಿದರು.
ಯಾರ ವಿರುದ್ಧವೂ ಅಸಮಾಧಾನಗೊಂಡಿಲ್ಲ: ಸತೀಶ್ ಜಾರಕಿಹೊಳಿ
Vijaya Karnataka 30 Jan 2018, 5:00 am