ಬೈಲಹೊಂಗಲ:ಎಲ್ಲಿ ನೋಡಿದಲ್ಲಿ ಬಿಲ್ವಪತ್ರಿಯ ಸುವಾಸನೆ, ದಾಸವಾಳ ಮತ್ತತರೆ ಪುಷ್ಪಗಳ ಅಲಂಕಾರ, ಘಂಟೆ ನಿನಾದ, ಕೈಯಲ್ಲಿ ಕಾಯಿ, ಕರ್ಪೂರ, ಆರತಿ, ನೈವೇದ್ಯ ಹಿಡಿದು ಓಂ ನಮಃ ಶಿವಾಯ ಎನ್ನುತ್ತ ಶಿವನ ದೇವಸ್ಥಾನಗಳಿಗೆ ಭೇಟಿ ನೀಡಿದ ಭಕ್ತರು... ಮಂಗಳವಾರ ಶಿವರಾತ್ರಿ ನಿಮಿತ್ತ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಕಂಡು ಬಂದ ದೃಶ್ಯವಿದು.
ಶಿವರಾತ್ರಿ ಹಬ್ಬಕ್ಕಾಗಿಯೇ ಪೇಟೆಯಲ್ಲಿ ಶಿವನ ಪೂಜೆಗೆ ವಿಶೇಷವಾಗಿ ಬೇಕಾಗುವ ಸೇಬು, ದ್ರಾಕ್ಷಿ, ಬಾಳೆಹಣ್ಣು, ಬಳುವಲಕಾಯಿ, ಮೋಸಂಬಿ, ಕಿತ್ತಳೆ, ಖರ್ಜೂರ ಹಣ್ಣುಗಳ ವ್ಯಾಪಾರ ಭರಾಟೆಯಿಂದ ಸಾಗಿತ್ತು. ಸಾರ್ವಜನಿಕರು ಶಿವನಿಗಿಷ್ಟವಾದ ಹೂವು, ಹಣ್ಣುಗಳನ್ನು ಖರೀದಿಸಿ ದೇವಸ್ಥಾನಕ್ಕೆ ತೆರಳಿದರು. ಕೆಲವು ಭಕ್ತರು ಪೂರ್ಣ ನಿರಾಹಾರಿಗಳಾಗಿ ರಾತ್ರಿಯಿಡಿ ಶಿವನಾಮ ಜಪಿಸುತ್ತ ಜಾಗರಣೆ ಮಾಡಿ ಶಿವನಿಗೆ ತಮ್ಮ ಭಕ್ತಿ ಸಮರ್ಪಿಸಿದರು.
ಮಂತ್ರಘೋಷಗಳ ನಾದ:
ಪಟ್ಟಣದ ಇತಿಹಾಸ ಪ್ರಸಿದ್ಧ ಕಲ್ಲಗುಡಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಆಗಮಿಸಿ, ಬಿಲ್ವಪತ್ರೆ, ದಾಸವಾಳ ಮತ್ತಿತರೆ ಶಿವ ಸಂಕೇತಗಳಿರುವ ಪುಷ್ಪಗಳಿಂದ ಶಿವನನ್ನು ಪೂಜಿಸಿ ಕೃತಾರ್ಥರಾದರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದವರು ನಿರ್ಮಿಸಿದ ಸೌರಾಷ್ಟ್ರ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನ, ಗೊಂಬಿಗುಡಿ ಈಶ್ವರ ದೇವಸ್ಥಾನ, ಜವಳಿಕೂಟದ ಶಂಕರಲಿಂಗ ದೇವಸ್ಥಾನ, ಮೂರುಸಾವಿರ ಮಠದ ನೀಲಕಂಠೇಶ್ವರ ಗದ್ದುಗೆ, ಮುರಗೋಡ ರಸ್ತೆಯಲ್ಲಿರುವ ಪಂಚವಟಿ ದೇವಾಲಯ, ಮಲ್ಲಿಕಾರ್ಜುನ ಕಲ್ಯಾಣ ಮಂಟಪ, ಮರಡಿ ಬಸವೇಶ್ವರ ದೇವಸ್ಥಾನ, ಗುರು ಮಡಿವಾಳೇಶ್ವರ ದೇವಸ್ಥಾನ, ಮೈಲಾರ ಲಿಂಗೇಶ್ವರ ದೇವಸ್ಥಾನ, ಮಾರುತಿ ಮಂದಿರಗಳಿಗೆ ಭಕ್ತರು ಆಗಮಿಸಿ ಅಭಿಷೇಕ, ಅರ್ಚನೆ, ನೈವೇದ್ಯ ಅರ್ಪಿಸಿ ವಿಶೇಷ ಪೂಜೆಗಳನ್ನು ನೆರವೇರಿಸಿದರು.