ಆ್ಯಪ್ನಗರ

ತುರ್ತು ಅಧಿವೇಶನಕ್ಕೆ ಸಿದ್ದರಾಮಯ್ಯ ಆಗ್ರಹ

ಯಕ್ಸಂಬಾ : ನೆರೆ ಸಂತ್ರಸ್ತರಿಗೆ ಪರಿಹಾರ ...

Vijaya Karnataka 28 Aug 2019, 5:00 am
ಯಕ್ಸಂಬಾ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧದ ಚರ್ಚೆಗಾಗಿ ತುರ್ತು ವಿಧಾನ ಮಂಡಲ ಅಧಿವೇಶನ ಕರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
Vijaya Karnataka Web BEL-27CKD1


ಜಿಲ್ಲೆಯ ಅಥಣಿ, ಕಾಗವಾಡ ತಾಲೂಕುಗಳಲ್ಲಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ನಂತರ ಚಿಕ್ಕೋಡಿ ತಾಲೂಕಿನ ಕಲ್ಲೋಳ, ಯಡೂರ ಗ್ರಾಮಗಳಲ್ಲಿ ಮಂಗಳವಾರ ಪರಿಶೀಲನೆ ನಡೆಸಿದ ಅವರು, ಯಡೂರದಲ್ಲಿ ಸಂತ್ರಸ್ತರನ್ನುದ್ದೇಶಿಸಿ ಮಾತನಾಡಿದರು.

''ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಸರಕಾರ ಘೋಷಣೆ ಮಾಡಿದ್ದಕ್ಕಿಂತ ದುಪ್ಪಟ್ಟು ಪರಿಹಾರ, ಬೆಳೆ ಪರಿಹಾರವಾಗಿ ಎಕರೆಗೆ ಕನಿಷ್ಠ 50 ಸಾವಿರರಂತೆ ಹೆಕ್ಟೇರ್‌ಗೆ 1.25 ಲಕ್ಷ ರೂ. ಪರಿಹಾರ ನೀಡಬೇಕು'', ಎಂದು ಅವರು ಆಗ್ರಹಿಸಿದರು. ಒಂದು ವೇಳೆ ಸರಕಾರ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸದೇ ಇದ್ದಲ್ಲಿ ಕಾಂಗ್ರೆಸ್‌ ಪಕ್ಷ ದಿಂದ ಎಲ್ಲ ಮುಖಂಡರು ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಿರುವುದಾಗಿ ಎಚ್ಚರಿಸಿದರು. ''ನಾನು ಮುಖ್ಯಮಂತ್ರಿಯಾಗಿದ್ದಾಗ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡುವಂತೆ ಅಂದಿನ ಸಕ್ಕರೆ ಸಚಿವರಾಗಿದ್ದ ಪ್ರಕಾಶ ಹುಕ್ಕೇರಿ ಒತ್ತಾಯಿಸಿದಾಗ 1800 ಕೋಟಿ ರೂ. ನೀಡಲಾಗಿದೆ'', ಎಂದು ನೆನಪಿಸಿಕೊಂಡರು.

ಶಾಸಕ ಗಣೇಶ ಹುಕ್ಕೇರಿ, ರಾಜ್ಯ ದ್ರಾಕ್ಷಾರಸ ಮಂಡಳಿ ಮಾಜಿ ಅಧ್ಯಕ್ಷ ರವೀಂದ್ರ ಮಿರ್ಜೆ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ ್ಮಣರಾವ್‌ ಚಿಂಗಳೆ, ಅನೀಲ ಪಾಟೀಲ, ರವಿ ಮಾಳಿ ಸೇರಿದಂತೆ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ರು, ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಸಂತ್ರಸ್ತರು ಪಾಲ್ಗೊಂಡಿದ್ದರು.

ಇಲಾಖೆ ವಿರುದ್ಧ ಪ್ರಕರಣ: ಹುಕ್ಕೇರಿ:
ವೇದಿಕೆ ಮೇಲಿದ್ದ ಮಾಜಿ ಸಂಸದ ಪ್ರಕಾಶ್‌ ಹುಕ್ಕೇರಿ, ''ಪ್ರವಾಹದಿಂದ ತತ್ತರಿಸಿದ ಸಂತ್ರಸ್ತರ ಸಮಸ್ಯೆಯನ್ನು ಸರಕಾರ ಕೂಡಲೇ ಆಲಿಸಬೇಕು. ಗಡಿಭಾಗದ ಕಬ್ಬು ಬೆಳೆಗಳಿಗೆ ಹಾಗೂ ಅನ್ಯ ಬೆಳೆಗಳ ಸಂತ್ರಸ್ತ ರೈತರಿಗೆ ಎಕರೆಗೆ 1 ಲಕ್ಷ ರೂ. ಪರಿಹಾರ ನೀಡುವುದಲ್ಲದೇ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ನೆರೆಪೀಡಿತ ಗ್ರಾಮಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು'', ಎಂದು ಒತ್ತಾಯಿಸಿದರು. ಅಲ್ಲದೆ, ''ಜುಗೂಳ-ಖಿದ್ರಾಪುರ, ಕಲ್ಲೋಳ-ಯಡೂರ, ಮೊಳವಾಡ, ಕುಡಚಿ ಸೇತುವೆಗಳಿಗೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಮಂಜೂರಾತಿ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ, ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯದಿಂದ ಸೇತುವೆ ನಿರ್ಮಾಣವಾಗದೆ ನದಿ ತೀರದಲ್ಲಿ ಪ್ರವಾಹ ಹಾನಿ ಹೆಚ್ಚಾಗಿದೆ. ಇಲಾಖೆಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು'', ಎಂದು ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ