ಅಳಿಯನ ಕೊಲೆ ಆರೋಪ: ಅತ್ತೆ, ಮಾವ ಬಂಧನ
ಹುಕ್ಕೇರಿ ತಾಲೂಕಿನ ದೊಣಗಟ್ಟಿ ಗ್ರಾಮದಲ್ಲಿ ಬುಧವಾರ ರಾತ್ರಿ ಮನೆಗೆ ಬಂದಿದ್ದ ಅಳಿಯನ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆಗೈದ ಆರೋಪದನ್ವಯ ಮೃತನ ಮಾವ ...
Vijaya Karnataka 21 Jun 2019, 5:00 am
ಯಮಕನಮರಡಿ: ಹುಕ್ಕೇರಿ ತಾಲೂಕಿನ ದೊಣಗಟ್ಟಿ ಗ್ರಾಮದಲ್ಲಿ ಬುಧವಾರ ರಾತ್ರಿ ಮನೆಗೆ ಬಂದಿದ್ದ ಅಳಿಯನ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆಗೈದ ಆರೋಪದನ್ವಯ ಮೃತನ ಮಾವ ಮತ್ತು ಅತ್ತೆಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಎಂಟು ತಿಂಗಳ ಹಿಂದಷ್ಟೇ ಭಾರತೀಯ ಸೇನಾಪಡೆಯಿಂದ ನಿವೃತ್ತಿ ಹೊಂದಿದ್ದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಆಜರಾ ತಾಲೂಕಿನ ಮುಗೊಂಡ ಗ್ರಾಮದ ಮಧುಕರ ದೋಂಡಿಬಾ ಪಾಟೀಲ (47) ಕೊಲೆಯಾದವರು. ರಾತ್ರಿ ಪಾನಮತ್ತರಾಗಿ ದೊಣಗಟ್ಟಿಯ ಮನೆಗೆ ಬಂದಿದ್ದ ಇವರನ್ನು ಮಾವ ಜಯರಾಮ ಕೃಷ್ಣ ದೇಸಾಯಿ (65) ಮತ್ತು ಅತ್ತೆ ಅಂಜನಾ ಜಯರಾಮ ದೇಸಾಯಿ(60) ಹಗ್ಗದಿಂದ ಕಟ್ಟಿಹಾಕಿ, ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಗೋಕಾಕ ಡಿಎಸ್ಪಿ ಡಿ.ಟಿ. ಪ್ರಭು, ಯಮಕನಮರಡಿ ಪಿಎಸ್ಐ ಸಂಗಮೇಶ ಡಿಂಗಿನಾಳ ಸ್ಥಳ ಪರಿಶೀಲನೆ ನಡೆಸಿದ್ದಾರೆ.