ಆ್ಯಪ್ನಗರ

ಬಟ್ಟೆ ಹೊಲಿದು ಶೇ.91 ಅಂಕಗಳಿಸಿದ ತನುಜಾ

ಅಥಣಿ: ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ತನುಜಾ ಭೀಮಾಶಂಕರ ಬೆಳ್ಳಂಕಿ, ಬೇರೆಯವರ ಹೊಲಿಗೆ ಯಂತ್ರದ ಸಹಾಯದಿಂದ ಬಟ್ಟೆ ಹೊಲಿದು ಗಳಿಸಿದ ಹಣದ ಸಹಾಯದಿಂದ ದ್ವಿತೀಯ ...

Vijaya Karnataka 19 Apr 2019, 5:00 am
ಅಥಣಿ : ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ತನುಜಾ ಭೀಮಾಶಂಕರ ಬೆಳ್ಳಂಕಿ, ಬೇರೆಯವರ ಹೊಲಿಗೆ ಯಂತ್ರದ ಸಹಾಯದಿಂದ ಬಟ್ಟೆ ಹೊಲಿದು ಗಳಿಸಿದ ಹಣದ ಸಹಾಯದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 91.67ರಷ್ಟು ಅಂಕ ಗಳಿಸಿದ್ದಾರೆ.
Vijaya Karnataka Web BEL-18 ATHANI-01 A


ಗ್ರಾಮದ ಎನ್‌.ಬಿ.ಸಾವಂತ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ತನುಜಾ ಕಲಾ ವಿಭಾಗದಲ್ಲಿ ಈ ಸಾಧನೆ ಮಾಡಿ ಕಾಲೇಜು, ಗ್ರಾಮ ಹಾಗೂ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ.

ತನುಜಾಳ ತಂದೆ ಭೀಮಾಶಂಕರ ಬೆಳ್ಳಂಕಿ ಸಮೀಪದ ಸಕ್ಕರೆ ಕಾರ್ಖಾನೆಯಲ್ಲಿ ಗುಮಾಸ್ತರಾಗಿದ್ದು, ತಿಂಗಳಿಗೆ ಕೇವಲ 8000 ರೂ. ಆದಾಯವಿದೆ. ಅಷ್ಟರಲ್ಲಿಯೇ ಐದು ಜನರಿರುವ ಸಂಸಾರ ನಡೆಸಬೇಕಾದ ಪರಿಸ್ಥಿತಿ. ತನುಜಾಳ ಅಣ್ಣ ಕೂಡ ಬಿಎಸ್‌ಸಿ ಓದುತ್ತಿರುವುದರಿಂದ ಇಬ್ಬರ ವಿದ್ಯಾಭ್ಯಾಸದ ಖರ್ಚು ನಿರ್ವಹಣೆ ಕಷ್ಟವಾಗಿತ್ತು. ಕುಟುಂಬದ ಪರಿಸ್ಥಿತಿಯ ಅರಿವಿದ್ದ ತನುಜಾ, ಇಂತಹ ಬಡತನದ ನಡುವೆಯೂ ಓದಬೇಕೆನ್ನುವ ಹಂಬಲದಿಂದ ಬೇರೆಯವರ ಹೊಲಿಗೆ ಯಂತ್ರ ಪಡೆದು, ಬಟ್ಟೆ ಹೊಲಿದು ಗಳಿಸಿದ ಹಣದಲ್ಲಿ ಪಿಯುಸಿ ಓದಿದ್ದಾರೆ.

ಎಸ್‌ಎಸ್‌ಎಲ್‌ಸಿಯಲ್ಲಿ ಶೇ.88ರಷ್ಟು ಅಂಕ ಗಳಿಸಿದ್ದ ತನುಜಾರ ಸಾಧನೆ ಹಾಗೂ ಬಡತನ ಗಮನಿಸಿದ ಸಾವಂತ ಕಾಲೇಜಿನ ಚೇರ್ಮನ್‌ ರಾಜು ಚನ್ನಾಪುರ ಹಾಗೂ ಪ್ರಾಚಾರ್ಯ ಯುವರಾಜ ಹಳೇಮನಿ ತಮ್ಮ ಕಾಲೇಜಿಗೆ ಉಚಿತ ಪ್ರವೇಶ ನೀಡಿ ಪ್ರೋತ್ಸಾಹಿಸಿದ್ದಾರೆ.

ತನುಜಾ ಪಡೆದಿರುವ ಅಂಕಗಳು ಹೀಗಿವೆ- ಕನ್ನಡ 91, ಇಂಗ್ಲಿಷ್‌ 78, ಇತಿಹಾಸ 97, ಸಮಾಜ ಶಾಸ್ತ್ರ 97, ಅರ್ಥಶಾಸ್ತ್ರ 91, ರಾಜ್ಯಶಾಸ್ತ್ರ 96. ಮುಂದೆ ಕೆಎಎಸ್‌ ವ್ಯಾಸಂಗ ಮಾಡಿ, ಕುಟುಂಬದ ಕಷ್ಟಗಳನ್ನೆಲ್ಲ ಪಾರು ಮಾಡಿ, ಸಮಾಜ ಸೇವೆ ಮಾಡಬೇಕೆಂಬ ಹಂಬಲ ತನುಜಾ ಅವರದ್ದು.

ಇನ್ನು ಮುಂದೆ ಕೂಡ ನಾನು ಮತ್ತು ನಮ್ಮ ಕಾಲೇಜಿನ ಉಳಿದ ಸಿಬ್ಬಂದಿ ತನುಜಾರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಾ ಸದಾಕಾಲ ಬೆಂಗಾವಲಾಗಿರುತ್ತೇವೆ.
- ರಾಜು ಚನ್ನಾಪುರ, ಚೇರ್ಮನ್‌, ಎನ್‌.ಬಿ. ಸಾವಂತ ಕಾಲೇಜು, ರಡ್ಡೇರಹಟ್ಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ