ಆ್ಯಪ್ನಗರ

ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಲು ತೆರಿಗೆ ಬಾಕಿ ಪಾವತಿ ಕಡ್ಡಾಯ

ಎದ್ದು ಬಿದ್ದು ಬರುತ್ತಿರುವ ಆಕಾಂಕ್ಷಿಗಳು, ಕಚೇರಿಗಳ ಮುಂದೆ ಸರತಿ ಸಾಲು ಕ್ಯಾರೇ ಎನ್ನದವರು 'ಕರ' ...

Vijaya Karnataka 5 Aug 2018, 5:00 am
ಪ್ರಮೋದ ಹರಿಕಾಂತ/ಬಸವರಾಜ ಕೊಂಡಿ ಬೆಳಗಾವಿ/ಹುಕ್ಕೇರಿ
Vijaya Karnataka Web BLG-0408-2-52-PRABHAT


ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಸ್ಪರ್ಧೆ ಆಕಾಂಕ್ಷಿಗಳಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಇಷ್ಟು ದಿನ ಬಾಕಿ ಉಳಿಸಿಕೊಂಡಿದ್ದ ಆಸ್ತಿ, ನೀರಿನ ತೆರಿಗೆ ತುಂಬಲು ನಗರಸಭೆ, ಪಟ್ಟಣ ಪಂಚಾಯಿತಿ ಕಚೇರಿಗಳಿಗೆ ಮುಗಿ ಬೀಳುತ್ತಿದ್ದಾರೆ!

ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ಪಾವತಿ ವಿಭಾಗದಲ್ಲಿ ಈಗ ಸ್ಥಳೀಯ ರಾಜಕೀಯ ನಾಯಕರ ದಂಡೇ ಕಾಣುತ್ತಿವೆ. ಆಕಾಂಕ್ಷಿಗಳು ತಾ ಮುಂದು, ನಾ ಮುಂದು ಎಂದು ಬಾಕಿ ತೆರಿಗೆಗಳ ಬಗ್ಗೆ ಮಾಹಿತಿ ಕೊಡುವಂತೆ ಸಿಬ್ಬಂದಿಯ ದುಂಬಾಲು ಬೀಳುತ್ತಿದ್ದಾರೆ. ಕೆಲವರು ನಾಲ್ಕೈದು ವರ್ಷಗಳಿಂದ ಪಾವತಿ ಮಾಡದೆ ಉಳಿಸಿಕೊಂಡಿದ್ದ ತೆರಿಗೆಗಳನ್ನು ಈಗ ಐದು, ಹತ್ತು ಸಾವಿರ ರೂ.ಗಳಂತೆ ಒಂದೇ ಕಂತಿನಲ್ಲಿ ಪಾವತಿಸುತ್ತಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಬೇಕಾದರೆ ಅಭ್ಯರ್ಥಿಗಳು ಸಂಸ್ಥೆಯೊಂದಿಗೆ ಯಾವುದೇ ತೆರಿಗೆ ಬಾಕಿ ಇಟ್ಟುಕೊಂಡಿರಬಾರದು. ನೀರು, ಆಸ್ತಿ ಸೇರಿದಂತೆ ಎಲ್ಲ ರೀತಿಯ ತೆರಿಗೆಗಳನ್ನು ಪಾವತಿ ಮಾಡಿ ನಿರಾಕ್ಷೇಪಣೆ ಪತ್ರ ಪಡೆದುಕೊಳ್ಳಬೇಕು. ಹೀಗಾಗಿ ಚುನಾವಣೆ ಆಕಾಂಕ್ಷಿಗಳೆಲ್ಲರೂ ಒಂದೇ ಸಮನೆ ತೆರಿಗೆ ಪಾವತಿಸಲು ಮುಗಿ ಬೀಳುತ್ತಿದ್ದಾರೆ. ಮನೆಗಳಿಗೆ ಅಲೆದಾಡಿದರೂ ತೆರಿಗೆ ಕೊಡದವರೆಲ್ಲ ಈಗ ವರ್ಷಗಳ ಬಾಕಿಯನ್ನೆಲ್ಲ ಒಟ್ಟಿಗೆ ಪಾವತಿ ಮಾಡುತ್ತಿರುವುದನ್ನು ಕಂಡು ಅಧಿಕಾರಿಗಳೇ ದಂಗಾಗುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ರಾಜ್ಯದ 56 ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿ, ಪುರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಜತೆಗೆ ಕೆಲ ಪಟ್ಟಣ ಪಂಚಾಯಿತಿ, ಪುರಸಭೆಗಳನ್ನೂ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದ ಬಹುತೇಕ ಕಡೆ ಸದಸ್ಯ ಸ್ಥಾನ ಹೆಚ್ಚಾಗಿವೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ, ಪುರಸಭೆಯಾಗಿರುವ ಕಡೆಗಳಲ್ಲಿ ಇದು ಮೊದಲ ಚುನಾವಣೆಯಾಗಿದ್ದರಿಂದ ಕುತೂಹಲವೂ ಹೆಚ್ಚಿದೆ. ಹಾಗಾಗಿ ಎಲ್ಲೆಡೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆದಿದ್ದು, ಅಧಿಕಾರಿಗಳ ತೆರಿಗೆ ವಸೂಲಿ ಹೊರೆ ಹಗುರವಾಗುತ್ತಿದೆ.

ಕ್ಯಾರೇ ಎನ್ನುತ್ತಿರಲಿಲ್ಲ!: ಇಷ್ಟು ದಿನ ನಗರ ಸ್ಥಳೀಯ ಸಂಸ್ಥೆ ಸಿಬ್ಬಂದಿ ಕರ ತುಂಬುವಂತೆ ಮನೆ ಬಾಗಿಲಿಗೆ ಅಲೆದರೆ, ಬಹುತೇಕ ರಾಜಕೀಯ ಕಾರ್ಯಕರ್ತರು ಕ್ಯಾರೇ ಎನ್ನುತ್ತಿರಲಿಲ್ಲ. ಸಾವಿರಾರು ರೂ. ಬಾಕಿ ಇದ್ದರೂ ತಲೆ ಕೆಡಿಸಿಕೊಳ್ಳದೆ ಇದ್ದರು. ಈಗ ಕೇಳದೆ ಇದ್ದರೂ, ಯುವಕರು, ಮಧ್ಯ ವಯಸ್ಕರು ಎನ್ನದೆ, ಎಲ್ಲರೂ ಸ್ವ ಇಚ್ಛೆಯಿಂದ ಬಂದು ತೆರಿಗೆ ಬಾಕಿ ಲೆಕ್ಕ ಪಡೆದು ಬಾಕಿ ಪಾವತಿಸುತ್ತಿದ್ದಾರೆ.

ಹುಕ್ಕೇರಿ ಪುರಸಭೆಯಲ್ಲಿ ಶನಿವಾರ ಒಂದೇ ದಿನ 35 ಸಾವಿರ ರೂ. ಮನೆ ಕರ ಹಾಗೂ 28 ಸಾವಿರ ರೂ. ನೀರಿನ ಕರ ಸಂಗ್ರಹವಾಗಿದೆ.
- ಡಾ. ಎಸ್‌.ಆರ್‌. ರೂಗಿ, ಪುರಸಭೆ ಮುಖ್ಯಾಧಿಕಾರಿ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಬೇಕಾದರೆ ಅಭ್ಯರ್ಥಿಗಳು ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿರಬಾರದು. ಆ ಬಗ್ಗೆ ನಿರಾಕ್ಷೇಪಣೆ ಪತ್ರ ಪಡೆದು, ಅದನ್ನು ನಾಮಪತ್ರದೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕು.
- ಎಚ್‌.ಬಿ. ಬೂದೆಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ