ಆ್ಯಪ್ನಗರ

ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸದಿದ್ದರೆ ಕ್ರಮ

ರಾಮದುರ್ಗ : ಬರಪೀಡಿತ ಪ್ರದೇಶವೆಂದು ಘೋಷಣೆಯಾದ ರಾಮದುರ್ಗ ತಾಲೂಕಿಗೆ ಕಂದಾಯ ಸಚಿವ ಆರ್‌.ವಿ. ...

Vijaya Karnataka 19 May 2019, 5:00 am
ರಾಮದುರ್ಗ : ಬರಪೀಡಿತ ಪ್ರದೇಶವೆಂದು ಘೋಷಣೆಯಾದ ರಾಮದುರ್ಗ ತಾಲೂಕಿಗೆ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಶನಿವಾರ ಆಗಮಿಸಿ ತಾಲೂಕಿನ ಎಂ.ಚಂದರಗಿ ಗ್ರಾಮದಲ್ಲಿ ಬೆಳೆ ಹಾನಿ ಹಾಗೂ ಮೇವು ಬ್ಯಾಂಕಿಗೆ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web BLG-1805-2-52-BEL-18RD1A


ಎಂ.ಚಂದರಗಿ ಗ್ರಾಮದ ಕೆಂಚಪ್ಪ ಕೌಜಲಗಿ ಹಾಗೂ ಸಿದ್ದರಾಯಪ್ಪ ಕೌಜಲಗಿ ಎಂಬುವರ ತಲಾ ನಾಲ್ಕು ಎಕರೆ ಕಬ್ಬು ನೀರಿನ ಅಭಾವದಿಂದ ಸಂಪೂರ್ಣ ಒಣಗಿರುವುದನ್ನು ಸಚಿವರು ವೀಕ್ಷಿಸಿದರು. ನಂತರ ಚಂದರಗಿಯಲ್ಲಿ ಸ್ಥಾಪಿಸಿದ ಮೇವು ಬ್ಯಾಂಕಿಗೆ ಭೇಟಿ ನೀಡಿ ರೈತರಿಗೆ ಮೇವು ವಿತರಿಸಿ ಅಧಿಕಾರಿಗಳು ಹಾಗೂ ರೈತರೊಂದಿಗೆ ಚರ್ಚಿಸಿದರು.

''ಚಂದರಗಿ ಭಾಗದಲ್ಲಿ ಕುಡಿಯುವ ನೀರಿನ ಅಭಾವವಿದೆ. ಶಾಶ್ವತವಾಗಿ ನೀರಿನ ಸಮಸ್ಯೆ ನೀಗಿಸಲು ಸುತ್ತಮುತ್ತಲಿರುವ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರಬೇಕು'' ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದೇಶಪಾಂಡೆ, ಕುಡಿಯುವ ನೀರಿನ ವ್ಯವಸ್ಥೆಗೆ ಏನು ಮಾಡಿದ್ದೀರಿ ಎಂದು ಸ್ಥಳದಲ್ಲಿ ತಹಸೀಲ್ದಾರರನ್ನು ಕೇಳಿದಾಗ, ಈಗಾಗಲೇ ಏಳು ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ ಎಂದು ಉತ್ತರಿಸಿದರು. ಅಷ್ಟು ನೀರು ಯಾವುದಕ್ಕೂ ಸಾಲದು ಎಂದು ಗ್ರಾಮಸ್ಥರು ಹೇಳಿದರು.

ಸಚಿವರು ಮಾತನಾಡಿ, ''ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಬೇಕು. ನೀರಿಗಾಗಿ ಪ್ರತಿಯೊಂದು ತಾಲೂಕಿಗೆ ಸಾಕಷ್ಟು ಅನುದಾನ ನೀಡಲಾಗಿದೆ. ನಾಳೆಯಿಂದ ಚಂದರಗಿ ಗ್ರಾಮದಲ್ಲಿ ಇನ್ನೂ ಹೆಚ್ಚಿನ ನೀರಿನ ವ್ಯವಸ್ಥೆ ಮಾಡಬೇಕು. ಹಣ ನಿಮ್ಮ ಜೇಬಿನಿಂದ ಖರ್ಚು ಮಾಡುವುದಿಲ್ಲ. ಸರಕಾರ ನೀಡುತ್ತದೆ. ನೀರಿನ ವಿಷಯದಲ್ಲಿ ಯಾವುದಕ್ಕೂ ಹಿಂದೇಟು ಹಾಕಬಾರದು. ನೀರಿನ ಸಮಸ್ಯೆಯಾದರೆ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು'' ಎಂದು ಎಚ್ಚರಿಸಿದರು.

''ಜಾನುವಾರು, ಮೇಕೆಗಳಿಗೆ ಮೇವು, ನೀರು ಪೂರೈಸಬೇಕು. ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಜನ ಗುಳೆ ಹೋಗಬಾರದು. ಅವರಿಗೆ ಕೆಲಸ ನೀಡಲು ನರೇಗಾದಲ್ಲಿ ಅವಕಾಶ ಕಲ್ಪಿಸಬೇಕು. ಹೆಚ್ಚಿನ ಹಣದ ಬೇಕಾದರೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಬೆಳೆಹಾನಿ ಬಗ್ಗೆ ವರದಿ ಸರಕಾರಕ್ಕೆ ಸಲ್ಲಿಸಿ'' ಎಂದು ಅಧಿಕಾರಿಗಳಿಗೆ ಸಚಿವ ದೇಶಪಾಂಡೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಆರ್‌. ವಿಶಾಲರಾಜ್‌, ಬೈಲಹೊಂಗಲ ಉಪವಿಭಾಗಾಧಿಕಾರಿ ಮಾರುತಿ ಪಂಚಾಕ್ಷ ರಿ, ಸಹಾಯಕ ಕೃಷಿ ಜಿಲ್ಲಾ ನಿರ್ದೇಶಕ ಚಂದ್ರಕಾಂತ ಪವಾರ, ತೋಟಗಾರಿಕೆ ಜಿಲ್ಲಾ ನಿರ್ದೇಶಕ ರವೀಂದ್ರ ಹಕಾಟಿ, ಸಹಾಯಕ ಕೃಷಿ ನಿರ್ದೇಶಕ ಎಸ್‌.ಎಫ್‌. ಬೆಳವಟಗಿ, ಪಶುಸಂಗೋಪನೆ ಇಲಾಖೆಯ ಡಾ.ಗಿರೀಶ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ