ಆ್ಯಪ್ನಗರ

ಅನ್ಯರಿಗೆ ಕಾಮಗಾರಿ ವಹಿಸಿದರೆ ಗುತ್ತಿಗೆದಾರ ಕಪ್ಪುಪಟ್ಟಿಗೆ

ಬೆಳಗಾವಿ: ''ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕಾಮಗಾರಿಯ ...

Vijaya Karnataka 6 Jul 2019, 5:00 am
ಬೆಳಗಾವಿ: ''ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕಾಮಗಾರಿಯ ಟೆಂಡರ್‌ ಪಡೆದುಕೊಂಡಿರುವ ಗುತ್ತಿಗೆದಾರರು ಮತ್ತೊಬ್ಬ ಗುತ್ತಿಗೆದಾರನಿಗೆ ಕಾಮಗಾರಿ ವಹಿಸಿದರೆ ಅಂಥವರನ್ನು ಕಪ್ಪುಪಟ್ಟಿಗೆ ಸೇರಿಸಿ, ಅವರ ಮೇಲೆ ಪ್ರಕರಣ ದಾಖಲಿಸಿ'' ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಸೂಚಿಸಿದ್ದಾರೆ.
Vijaya Karnataka Web BEL-5 LBS 1


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸ್ಮಾರ್ಟ್‌ಸಿಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

''ಸ್ಮಾರ್ಟ್‌ ಸಿಟಿ ಯೋಜನೆಯ ಬಹುತೇಕ ಕಾಮಗಾರಿಗಳನ್ನು ಪ್ಯಾಕೇಜ್‌ ಮಾಡಿಕೊಂಡು ನಾಲ್ಕೈದು ಕೆಲಸವನ್ನು ಒಬ್ಬರಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದವರನ್ನು ಸಂಪರ್ಕಿಸಿದರೆ ದೆಹಲಿ, ಚೆನ್ನೈ, ಹೈದ್ರಾಬಾದ್‌ನಲ್ಲಿ ಇರುವುದಾಗಿ ಹೇಳುತ್ತಾರೆ. ಗುತ್ತಿಗೆ ಪಡೆದ ಬಳಿಕ ಇಲ್ಲಿಯವರೆಗೆ ಗುತ್ತಿಗೆದಾರ ಬಂದಿಲ್ಲ. ಸಣ್ಣ ಗುತ್ತಿಗೆದಾರರಿಗೆ ಕಾಮಗಾರಿ ನೀಡಿದ್ದಾರೆ. ಇದರಿಂದ ಕಾಮಗಾರಿಗಳು ವಿಳಂಬವಾಗುತ್ತಿವೆ. ಕಾಮಗಾರಿಯ ನೆಪದಲ್ಲಿ ಅನೇಕ ರಸ್ತೆಗಳಲ್ಲಿ ಸಂಚಾರ ಬಂದ್‌ ಮಾಡಿ ತಿಂಗಳು ಕಳೆದಿವೆ. ಜತೆಗೆ ಕಾಮಗಾರಿಗಳೂ ಕಳಪೆಯಾಗಿವೆ'' ಎಂದು ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಾದರ್‌,'' ನಿಯಮಾನುಸಾರ ಗುತ್ತಿಗೆ ಪಡೆದವರೇ ಕಾಮಗಾರಿ ಮಾಡಬೇಕು. ಮತ್ತೊಬ್ಬ ಗುತ್ತಿಗೆದಾರನ ಕಡೆಯಿಂದ ಕಾಮಗಾರಿ ಮಾಡಿಸುವುದಾದರೆ ಅವರಿಗೆ ಏಕೆ ಕೆಲಸ ನೀಡಬೇಕು? ಈ ಬಗ್ಗೆ ಕೂಡಲೇ ಅಧಿಕಾರಿಗಳು ಪರಿಶೀಲಿಸಿ, ಬೇರೊಬ್ಬರಿಗೆ ಕಾಮಗಾರಿ ನೀಡಿದ್ದರೆ ಕ್ರಮ ಜರುಗಿಸಿ'' ಎಂದು ಆದೇಶಿಸಿದರು.

ಫ್ಯಾಷನ್‌ಗಾಗಿ ಬಸ್‌ ಶೆಲ್ಟರ್‌ ಬೇಡ: ''ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಅಧಿಕಾರಿಗಳಿಗೆ ಬೇಕಾದ ರೀತಿಯಲ್ಲಿ ಮತ್ತು ಕೇವಲ ಫ್ಯಾಷನ್‌ಗಾಗಿ ಬಸ್‌ ಶೆಲ್ಟರ್‌ ನಿರ್ಮಿಸುವುದಲ್ಲ. ಮಳೆಗಾಲದಲ್ಲಿ ಒದ್ದೆಯಾಗಬಾರದು. ಬೇಸಿಗೆಯಲ್ಲಿ ಬಿಸಿಲು ತಾಗದ ರೀತಿಯಲ್ಲಿ ಬಸ್‌ ಶೆಲ್ಟರ್‌ ನಿರ್ಮಿಸಬೇಕು. ಜತೆಗೆ ಪೊಲೀಸ್‌ ಇಲಾಖೆಯಿಂದ ಮಾಹಿತಿ ಪಡೆದು ಬಸ್‌ ನಿಲುಗಡೆಯಾಗುವ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಸ್‌ ನಿಲ್ದಾಣ ನಿರ್ಮಿಸಬೇಕು'' ಎಂದು ಸಚಿವರು ತಿಳಿಸಿದರು.

ನಿವೃತ್ತರಿಗೆ ಜವಾಬ್ದಾರಿ ಸರಿಯಲ್ಲ: ಶಾಸಕ ಅನಿಲ ಬೆನಕೆ ಮಾತನಾಡಿ, ''ನಿವೃತ್ತ ಅಧಿಕಾರಿಗಳಿಗೆ ಸ್ಮಾರ್ಟ್‌ಸಿಟಿ ಯೋಜನೆಯ ಜವಾಬ್ದಾರಿ ನೀಡಲಾಗಿದೆ. ಕಾಮಗಾರಿಯಲ್ಲಿ ಲೋಪಗಳಾದರೆ ಸಂಬಂಧಿಸಿದವರ ಮೇಲೆ ಕ್ರಮಕೈಗೊಳ್ಳಲು ಯಾವುದೇ ಅವಕಾಶವಿರುವುದಿಲ್ಲ. ನಿವೃತ್ತ ಹೊಂದಿರುವ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕೆಲಸ ಮಾಡಬಹುದು ಎಂಬುವುದನ್ನು ಯೋಚಿಸಬೇಕು. ಹುದ್ದೆಯಲ್ಲಿರುವ ಸೂಕ್ತ ಅಧಿಕಾರಿಗಳನ್ನು ನೇಮಿಸಬೇಕು'' ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಾದರ್‌, ''ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ಸಿಬ್ಬಂದಿ ಇಲ್ಲದಿದ್ದರೆ ಯೋಜನೆಗೆ ಹಿನ್ನಡೆಯಾಗುತ್ತದೆ. ಸ್ಮಾರ್ಟ್‌ ಸಿಟಿಯಲ್ಲಿ ನಿರ್ಮಿಸುತ್ತಿರುವ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಲಭ್ಯವಿರಬೇಕು. ಬೇಕಾದರೆ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಯೋಜನೆಯನ್ನು ಮತ್ತೊಮ್ಮೆ ರೂಪಿಸಬೇಕು. ಬೆಳಗಾವಿಯ ಸ್ಮಾರ್ಟ್‌ ಸಿಟಿ ಯೋಜನೆಯ ಆಸ್ಪತ್ರೆ ರಾಜ್ಯಕ್ಕೇ ಮಾದರಿಯಾಗಬೇಕು'' ಎಂದರು.

ಸಭೆಯಲ್ಲಿ ಶಾಸಕಿ ಲಕ್ಷಿ ್ಮ ಹೆಬ್ಬಾಳಕರ, ಪಾಲಿಕೆ ಆಯುಕ್ತ ಶಶಿಧರ ಕುರೇರ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಮತ್ತಿತರರು ಉಪಸ್ಥಿತರಿದ್ದರು.

ಬೆಳಗಾವಿ ನಗರ ಸ್ಮಾರ್ಟ್‌ ಸಿಟಿಯ ಜತೆಗೆ ಸೇಫ್‌ ಸಿಟಿಯಾಗಬೇಕು. ಈ ನಿಟ್ಟಿನಲ್ಲಿ ಯೋಜನೆಯಲ್ಲಿ ಅಳವಡಿಸಲಾಗುತ್ತಿರುವ ಸಿಸಿಟಿವಿ ಕ್ಯಾಮರಾಗಳು ಹಗಲಷ್ಟೇ ಅಲ್ಲ, ರಾತ್ರಿ ವೇಳೆಯಲ್ಲಿಯೂ ಸ್ಪಷ್ಟವಾಗಿ ಚಿತ್ರೀಕರಿಸುವಂತಾಗಬೇಕು. ಅಂದಾಗ ಮಾತ್ರ ನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಬಹುದು.
- ಯು.ಟಿ. ಖಾದರ್‌, ಸಚಿವ

ಕಾಮಗಾರಿ ಪರಿಶೀಲನೆ :
ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೈಗೊಳ್ಳುತ್ತಿರುವ ಶ್ರೀನಗರದ ಸಾಯಿ ಉದ್ಯಾನ, ಅಶೋಕ ನಗರದ ವ್ಯಾಯಾಮ ಶಾಲೆ, ಈಜುಕೊಳ, ಶಿವಬಸವ ನಗರದ ಸಿಸಿ ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವ ಖಾದರ್‌, ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಸಾರ್ವಜನಿಕರ ಅನುಕೂಲಕ್ಕೆ ಮುಕ್ತವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ