ಆ್ಯಪ್ನಗರ

ಜನರಿಗೆ ಹಣದ ಆಮಿಷ ಒಡ್ಡಿದ ಸರಕಾರ

- ವಿಭಾಗ ಮಟ್ಟದ ಸಮಾವೇಶಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ 200 ರೂ...

Vijaya Karnataka 16 Oct 2017, 1:00 am

ಸಲೀಮ ಬಳಬಟ್ಟಿ ಬೆಳಗಾವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ನಾಲ್ಕು ವರ್ಷ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸುತ್ತಿರುವ ಸಾಧನಾ ಸಮಾವೇಶಕ್ಕೆ ಜನರನ್ನು ಸೆಳೆಯಲು ಹಣದ ಆಮಿಷ ಒಡ್ಡಿದೆ.

Vijaya Karnataka Web the government has lent money to people
ಜನರಿಗೆ ಹಣದ ಆಮಿಷ ಒಡ್ಡಿದ ಸರಕಾರ

ಈಗಾಗಲೇ ಮೈಸೂರಿನಲ್ಲಿ ಸಮಾವೇಶ ಸಂಘಟಿಸಿರುವ ರಾಜ್ಯ ಸರಕಾರ ಎರಡನೇ ಸಮಾವೇಶವನ್ನು ಧಾರವಾಡದಲ್ಲಿ ನಡೆಸಲು ದಿನಾಂಕ ನಿಗದಿಗೊಳಿಸಿದೆ. ಇದಕ್ಕಾಗಿ ಬೆಳಗಾವಿ ವಿಭಾಗದ ಪ್ರತಿ ಜಿಲ್ಲೆಯಿಂದ ಕನಿಷ್ಠ 6ರಿಂದ 9 ಸಾವಿರ ಜನರನ್ನು ಕರೆದುಕೊಂಡು ಬರುವಂತೆ ಸರಕಾರ ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಧಾರವಾಡದಲ್ಲಿ ನಡೆಯಲಿರುವ ಸಮಾವೇಶಕ್ಕೆ ಆಗಮಿಸುವ ಜನರಿಗೆ ಪ್ರಯಾಣದ ವ್ಯವಸ್ಥೆ, ಉಪಹಾರ, ಕುಡಿಯುವ ನೀರು ಒದಗಿಸಲು ಸೂಚನೆ ನೀಡಿದೆ. ಇದರ ಜತೆಗೆ ಪ್ರತ್ಯೇಕವಾಗಿ 200 ರೂ. ಭತ್ಯೆ ನೀಡಲು ಮುಂದಾಗಿರುವುದು ತೀವ್ರ ಚರ್ಚೆಗೆ ಕಾರಣವಾಗದೆ.

ಸಮಾವೇಶ ಏಕೆ?: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದು ನಾಲ್ಕೂವರೆ ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳು ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಂಡಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ಸಮಾವೇಶ ನಡೆಸಲು ನಿರ್ಧರಿಸಿರುವ ರಾಜ್ಯ ಸರಕಾರ, ಈಗಾಗಲೇ ಮೈಸೂರಿನಲ್ಲಿ ಒಂದು ಸಮಾವೇಶ ನಡೆಸಿದೆ. ಎರಡನೇ ಸಮಾವೇಶ ಅ. 23ರಂದು ಧಾರವಾಡದಲ್ಲಿ ನಡೆಯಲಿದೆ.

ಸರಕಾರಿ ಪ್ರಾಯೋಜಿತ: ರಾಜ್ಯ ಸರಕಾರ ನಾಲ್ಕೂವರೆ ವರ್ಷದ ಆಡಳಿತದಲ್ಲಿ ಜನೋಪಯೋಗಿ ಯೋಜನೆಗಳನ್ನು ಜಾರಿ ಮಾಡಿದೆ ಎಂದು ಹೇಳಿಕೊಳ್ಳುತ್ತಿದೆ. ಯೋಜನೆಗಳು ನಿಜವಾಗಿಯೂ ಉತ್ತಮವಾಗಿದ್ದರೆ, ಅರ್ಹರಿಗೆ ಲಾಭವಾಗಿದ್ದರೆ ಸ್ವ ಪ್ರೇರಣೆಯಿಂದ ಜನ ಸಮಾವೇಶಕ್ಕೆ ಆಗಮಿಸುತ್ತಿದ್ದರು. ಹೀಗೆ ಪ್ರಯಾಣದ ಖರ್ಚು, ಊಟ, ಉಪಹಾರ ಹಾಗೂ 200 ರೂ. ಭತ್ಯೆ ನೀಡಿ ಕರೆದುಕೊಂಡು ಹೋಗುತ್ತಿರುವುದು ನೋಡಿದರೆ ಇದೊಂದು ಸರಕಾರಿ ಪ್ರಾಯೋಜಿತ ರಾಜಕೀಯ ಸಮಾವೇಶ ಎನ್ನುವಂತೆ ಭಾಸವಾಗುತ್ತಿದೆ ಎಂದು ಪ್ರಜ್ಞಾವಂತರು ಅಭಿಪ್ರಾಯಪಟ್ಟಿದ್ದಾರೆ. ಕೋಟ್ಯಾಂತರ ರೂ. ಖರ್ಚು: ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಸಮಾವೇಶ ನಡೆಸಲು ನಿರ್ಧರಿಸಿರುವ ರಾಜ್ಯ ಸರಕಾರ, ಪ್ರತಿ ಸಮಾವೇಶಕ್ಕೆ 1.28 ಕೋಟಿ ರೂ. ಖರ್ಚು ಮಾಡುತ್ತಿದೆ. ಧಾರವಾಡದಲ್ಲಿ ಮತ್ತು ಇನ್ನೂ ಎರಡು ಕಡೆ ನಡೆಯುವ ಸಮಾವೇಶಕ್ಕೆ ಖರ್ಚಿನ ಮೊತ್ತ ಹೆಚ್ಚಾಗಲಿದೆ.

ಪ್ರಯಾಣಿಕರಿಗೂ ತೊಂದರೆ: ಧಾರವಾಡದಲ್ಲಿ ನಡೆಯುವ ಸಮಾವೇಶಕ್ಕೆ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಿಂದ 80 ಸಾವಿರ ಫಲಾನುಭವಿಗಳು ಆಗಮಿಸುವ ಸಾಧ್ಯತೆಯಿದೆ. ಬೆಳಗಾವಿ ಜಿಲ್ಲೆಯಿಂದ 180 ಬಸ್ಸುಗಳು ಸೇರಿದಂತೆ ಸುಮಾರು 1200ಕ್ಕೂ ಹೆಚ್ಚು ವಾಹನಗಳು ಧಾರವಾಡ ಸಮಾವೇಶಕ್ಕೆ ತೆರಳಲಿವೆ. ಇದರಿಂದ ಅ. 23ರಂದು ದೂರದೂರುಗಳಿಗೆ ಹೋಗುವ ಪ್ರಯಾಣಿಕರಿಗೆ ಬಸ್‌ಗಳ ಕೊರತೆ ಆಗುವ ಸಾಧ್ಯತೆಯಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಧಾರವಾಡದಲ್ಲಿ ನಡೆಯುವ ವಿಭಾಗ ಮಟ್ಟದ ಸಾಧನಾ ಸಮಾವೇಶಕ್ಕೆ ಇಲಾಖಾವಾರು ಇಂತಿಷ್ಟು ಫಲಾನುಭವಿಗಳನ್ನು ಕರೆದುಕೊಂಡು ಬರಬೇಕು. ಫಲಾನುಭವಿಗಳ ತಾಲೂಕುವಾರು ಪಟ್ಟಿಯನ್ನು ಮುಂಚಿತವಾಗಿಯೂ ನೀಡಬೇಕು ಎಂದು ಆಯಾ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇಲಾಖಾವಾರು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವಾಗ ಕಾಂಗ್ರೆಸ್‌ ಕೆಲ ನಾಯಕರು ತಮ್ಮ ಪಕ್ಷ ದ ಕಾರ್ಯಕರ್ತರನ್ನೇ ಆಯ್ಕೆ ಮಾಡಿಕೊಳ್ಳುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಒತ್ತಡಕ್ಕೆ ಮಣಿದಿರುವ ಕೆಲ ಇಲಾಖೆಗಳ ಅಧಿಕಾರಿಗಳು ಪ್ರಭಾವಿಗಳು ಸೂಚಿಸಿದವರನ್ನೇ ಸಮಾವೇಶಕ್ಕೆ ಕರೆದುಕೊಂಡು ಹೋಗಲು ಸಿದ್ಧತೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ