ಆ್ಯಪ್ನಗರ

ನಿಯಮ ಉಲ್ಲಂಘಿಸಿ 426 ಎಕರೆ ಭೂಮಿ ಖರೀದಿ: ಸರಕಾರ,ಬೆಳಗಾವಿ ಸಕ್ಕರೆ ಕಾರ್ಖಾನೆಗೆ ಹೈಕೋರ್ಟ್‌ ನೋಟಿಸ್‌

ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಹಿರೇನಂದಿ ಗ್ರಾಮದಲ್ಲಿರುವ ಸೌಭಾಗ್ಯ ಸಕ್ಕರೆ ಕಾರ್ಖಾನೆ ನಿಯಮ ಉಲ್ಲಂಘಿಸಿ ಸುಮಾರು 426 ಎಕರೆ ಕೃಷಿ ಜಮೀನನ್ನು ನೇರವಾಗಿ ಖರೀದಿಸಿರುವ ಸಂಬಂಧ ಹೈಕೋರ್ಟ್‌ ಸರಕಾರ, ಸಕ್ಕರೆ ಕಾರ್ಖಾನೆಗೆ ನೋಟಿಸ್‌ ಜಾರಿಗೊಳಿಸಿದೆ.

Vijaya Karnataka Web 15 Jan 2020, 9:14 am
ಬೆಂಗಳೂರು: ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಹಿರೇನಂದಿ ಗ್ರಾಮದಲ್ಲಿರುವ ಸೌಭಾಗ್ಯ ಸಕ್ಕರೆ ಕಾರ್ಖಾನೆ ನಿಯಮ ಉಲ್ಲಂಘಿಸಿ ಸುಮಾರು 426 ಎಕರೆ ಕೃಷಿ ಜಮೀನನ್ನು ನೇರವಾಗಿ ಖರೀದಿಸಿರುವ ಸಂಬಂಧ ಹೈಕೋರ್ಟ್‌ ಮಂಗಳವಾರ ರಾಜ್ಯ ಸರಕಾರ ಹಾಗೂ ಸಕ್ಕರೆ ಕಾರ್ಖಾನೆಗೆ ನೋಟಿಸ್‌ ಜಾರಿ ಮಾಡಿದೆ.
Vijaya Karnataka Web sugar factories


ಗೋಕಾಕ್‌ ತಾಲೂಕಿನ ವಕೀಲ ಪ್ರಕಾಶ್‌ಕುಮಾರ್‌ ನಾಯ್ಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಬೆಳಗಾವಿ ಜಿಲ್ಲಾಧಿಕಾರಿ, ಗೋಕಾಕ್‌ ತಹಶೀಲ್ದಾರ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅಬಕಾರಿ ಇಲಾಖೆ ಆಯುಕ್ತರು ಮತ್ತು ಸೌಭಾಗ್ಯ ಲಕ್ಷ್ಮೇ ಸಕ್ಕರೆ ಕಾರ್ಖಾನೆ ನಿರ್ದೇಶಕ ವಸಂತ್‌ರಾವ್‌ ಪಾಟೀಲ್‌ಗೆ ನೋಟಿಸ್‌ ಜಾರಿ ಮಾಡಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಕ್ಷಯ, 'ಭೂ ಸುಧಾರಣಾ ಕಾಯಿದೆಯ ಸೆಕ್ಷನ್‌ 79(ಬಿ) ಪ್ರಕಾರ, ಯಾವುದೇ ವಾಣಿಜ್ಯ ಕಂಪನಿ ಕೃಷಿ ಜಮೀನನ್ನು ರೈತರಿಂದ ನೇರ ಖರೀದಿ ಮಾಡುವಂತಿಲ್ಲ. ಕೃಷಿ ಜಮೀನನ್ನು ವಾಣಿಜ್ಯ ಉದ್ದೇಶ ಬಳಕೆಗಾಗಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆಯಾದ ನಂತರ ಖರೀದಿ ಮಾಡಬಹುದು. ಆದರೆ, ಸೌಭಾಗ್ಯ ಸಕ್ಕರೆ ಕಾರ್ಖಾನೆಯು ಹಿರೇನಂದಿ ಗ್ರಾಮದಲ್ಲಿ ಸುಮಾರು 426 ಎಕರೆ ಕೃಷಿ ಜಮೀನನ್ನು 2010ರಿಂದ 2013ರ ಅವಧಿಯಲ್ಲಿ ನೇರವಾಗಿ ಖರೀದಿ ಮಾಡಿದೆ. ಇದು ಕರ್ನಾಟಕ ಭೂ ಸುಧಾರಣಾ ಕಾಯಿದೆಯ ಮತ್ತು ಭೂ ಕಂದಾಯ ನಿಯಮಗಳ ಉಲ್ಲಂಘನೆಯಾಗಿದೆ' ಎಂದರು.

ಅಲ್ಲದೆ, ವಿವಿಧ ಬ್ಯಾಂಕ್‌ಗಳಿಂದ ಈ ಕಾರ್ಖಾನೆಯು ಸುಮಾರು 400ಕ್ಕೂ ಹೆಚ್ಚು ಕೋಟಿ ರೂ. ಸಾಲ ಪಡೆದಿದೆ. ಸದ್ಯ ಅದು ಆರ್ಥಿಕ ಸಂಕಷ್ಟದಲ್ಲಿದ್ದು, ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡಿಲ್ಲ. ಆದ್ದರಿಂದ ಕಾರ್ಖಾನೆ ಖರೀದಿಸಿರುವ ಕೃಷಿ ಜಮೀನನ್ನು ಸ್ವಾಧೀನ ಮಾಡಿಕೊಳ್ಳುವಂತೆ ಸರಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಹಾಲಿ ಶಾಸಕ ರಮೇಶ್‌ ಜಾರಕಿಹೊಳಿ ಈ ಕಾರ್ಖಾನೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ