ಆ್ಯಪ್ನಗರ

ಜಾರಕಿಹೊಳಿ ಸಾಮ್ರಾಜ್ಯದಲ್ಲಿ ಯಾವುದೇ ಒಡಕಿಲ್ಲ; ಶಾಸಕ ಬಾಲಚಂದ್ರ ಸ್ಪಷ್ಟನೆ

ಗೋಕಾಕ : ''ದೇವರು ಹಾಗೂ ಜನರ ...

Vijaya Karnataka 29 Apr 2019, 5:00 am
ಗೋಕಾಕ : ''ದೇವರು ಹಾಗೂ ಜನರ ಆಶೀರ್ವಾದದಿಂದ ನಾವು ಎಲ್ಲ ಸಹೋದರರು ಒಗ್ಗಟ್ಟಾಗಿದ್ದೇವೆ. ವಿರೋಧಿಗಳು ನಮ್ಮ ಕುಟುಂಬದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ'' ಎಂದು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
Vijaya Karnataka Web BEL-28GOK2A


ಸಮೀಪದ ಕೊಣ್ಣೂರ ಹನುಮಂತ ದೇವಸ್ಥಾನಕ್ಕೆ ಶನಿವಾರ ರಾತ್ರಿ ಭೇಟಿ ನೀಡಿದ್ದ ಅವರು ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ''ನಾನು ಹಾಗೂ ಸಹೋದರರಾದ ರಮೇಶ, ಸತೀಶ, ಭೀಮಶಿ, ಲಖನ್‌ ಜಾರಕಿಹೊಳಿ ಎಲ್ಲರೂ ಒಂದಾಗಿ ಇದ್ದೇವೆ. ಮೂರು ದಶಕಗಳ ಹಿಂದೆ ಜನರ ಆಶೀರ್ವಾದದಿಂದ ಕಟ್ಟಿದ ನಮ್ಮ ಸಾಮ್ರಾಜ್ಯದಲ್ಲಿ ಯಾವುದೇ ಬಿರುಕಿಲ್ಲ. ಆದರೆ, ವಿರೋಧಿಗಳು ನಮ್ಮ ಕುಟುಂಬದ ಏಳ್ಗೆ ಸಹಿಸದೇ ಒಡೆಯಲು ಯತ್ನಿಸುತ್ತಿದ್ದಾರೆ. ಕುಟುಂಬ ಎಂದ ಮೇಲೆ ಭಿನ್ನಾಭಿಪ್ರಾಯಗಳು ಇರುವುದು ಸ್ವಾಭಾವಿಕ. ನಮ್ಮ ಕುಟುಂಬದ ಸಮಸ್ಯೆಗಳನ್ನು ನಾವೇ ಕುಳಿತು ಪರಿಹರಿಸಿಕೊಳ್ಳುತ್ತೇವೆ'' ಎಂದರು.

''ಜಾರಕಿಹೊಳಿ ಕುಟುಂಬ ಯಾವಾಗ ಒಡೆದೀತು ಎಂದು ಕೆಲವರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಅವರ ಬಯಕೆ ಎಂದಿಗೂ ಈಡೇರುವುದಿಲ್ಲ. ನಾವೆಲ್ಲ ಸಹೋದರರು ಜನರ ಸೇವೆಗೆ ಸದಾ ಬದ್ಧರಿದ್ದೇವೆ. ಜನರ ಆಶೀರ್ವಾದವೇ ನಮ್ಮ ಕುಟುಂಬಕ್ಕೆ ಶ್ರೀರಕ್ಷೆಯಾಗಿದೆ. ನಮ್ಮ ತಂದೆ ದಿ. ಲಕ್ಷ ್ಮಣರಾವ್‌ ಜಾರಕಿಹೊಳಿ ಅವರು ಕಷ್ಟಪಟ್ಟು ಕಟ್ಟಿದ ಸಾಮ್ರಾಜ್ಯದಲ್ಲಿ ಯಾವುದೇ ಒಡಕಿಲ್ಲವೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ಅವರು, ಎಲ್ಲಿಯವರೆಗೆ ದೇವರು ಹಾಗೂ ಜನರ ಆಶೀರ್ವಾದ ನಮ್ಮ ಕುಟುಂಬದ ಮೇಲಿರುತ್ತದೆಯೋ ಅಲ್ಲಿಯವರೆಗೆ ನಮ್ಮನ್ನು ಯಾರೂ ಏನೂ ಮಾಡಲು ಆಗುವುದಿಲ್ಲ'' ಎಂದು ಬಾಲಚಂದ್ರ ತಿಳಿಸಿದರು.

ಮುಖಂಡರಾದ ವಿನೋದ ಕರನಿಂಗ, ಅಪ್ಪಾಸಾಬ ಪಾಟೀಲ, ಕಲ್ಲಪ್ಪ ಚೌಗಲಾ, ಗೋಕಾಕ ಗ್ರಾಮೀಣ ಬಿಜೆಪಿ ಅಧ್ಯಕ್ಷ ವಿರೂಪಾಕ್ಷಿ ಯಲಿಗಾರ, ಭುಜಪ್ಪ ಖನಗಾಂವಿ, ನೇಮಿನಾಥ ಚೌಗಲಾ ಮತ್ತಿತರರು ಉಪಸ್ಥಿತರಿದ್ದರು.

ಒಂದೇ ಮನೆಯಲ್ಲಿ ಮೂವರು ಶಾಸಕರು ಇರುವುದು ರಾಜ್ಯದಲ್ಲಿಯೇ ಅಪರೂಪದ ಸಂಗತಿ. ರಾಜಕೀಯ ಬೇರೆ ಬೇರೆಯಾದರೂ ಕೌಟುಂಬಿಕವಾಗಿ ನಾವು ಐವರು ಸಹೋದರರು ಒಗ್ಗಟ್ಟಾಗಿಯೇ ಇದ್ದೇವೆ.
- ಬಾಲಚಂದ್ರ ಜಾರಕಿಹೊಳಿ, ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ