ಆ್ಯಪ್ನಗರ

ಬೆಳಗಾವಿ ಮಹಾನಗರದ ದಾಹ ನೀಗಿಸಲು ತಿಲಾರಿ ಡ್ಯಾಂ ನೀರು

ಬೆಳಗಾವಿ : ನಗರದ ಕುಡಿಯುವ ನೀರಿನ ಬೇಡಿಕೆ ಗಮನದಲ್ಲಿಟ್ಟುಕೊಂಡು ...

Vijaya Karnataka 2 Aug 2019, 5:00 am
ಬೆಳಗಾವಿ : ನಗರದ ಕುಡಿಯುವ ನೀರಿನ ಬೇಡಿಕೆ ಗಮನದಲ್ಲಿಟ್ಟುಕೊಂಡು ತಿಲಾರಿ ಡ್ಯಾಂನಿಂದ ನೀರು ತರಬಹುದಾದ ಸಾಧ್ಯತೆ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಸೂಚಿಸಿದ್ದಾರೆ.
Vijaya Karnataka Web BLG-0108-2-52-TILARI DAM


ಗುರುವಾರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಜಲ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು ಈ ಕುರಿತು ಚರ್ಚಿಸಿದರು.

''ನಗರಕ್ಕೆ ಕುಡಿಯುವ ನೀರು ಪೂರೈಸುವ ಕುರಿತು ಮುಂದಿನ 20 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ಮಹಾರಾಷ್ಟ್ರದ ತಿಲಾರಿ ಡ್ಯಾಂ ಬೆಳಗಾವಿ ಸಮೀಪದಲ್ಲಿದೆ. ಆ ಡ್ಯಾಂನಿಂದ ಹರಿದು ಹೋಗುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಮುಂದಿನವಾರ ಮಹಾರಾಷ್ಟ್ರದ ನೀರಾವರಿ ಇಲಾಖೆಯ ಕಾರ್ಯಕಾರಿ ಅಭಿಯಂತರನ್ನು ಡ್ಯಾಂ ಪ್ರದೇಶಕ್ಕೆ ಆಹ್ವಾನಿಸಿ ಚರ್ಚಿಸಲಾಗುವುದು'', ಎಂದು ಅವರು ಹೇಳಿದರು.

''ತಿಲಾರಿ ಡ್ಯಾಂಗೆ ಕರ್ನಾಟಕದ ಮಾರ್ಕಂಡೇಯ ನದಿ 2 ಕಿಮೀ ದೂರದಲ್ಲಿದೆ. ಅಲ್ಲಿಂದ ನದಿಗೆ ನೀರು ಹರಿಸಿದರೆ ವರ್ಷವಿಡೀ ನೀರು ಸಿಗುತ್ತದೆ. ತಿಲಾರಿ ಡ್ಯಾಂ ಪ್ರದೇಶದ ಸರ್ವೆ ಮಾಡಿದರೆ ಅನೇಕ ಸಂಭಾವ್ಯತೆಗಳು ಸಿಗುತ್ತವೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಇದು ಸಾಧ್ಯವಿದೆ'', ಎಂದು ತಿಳಿಸಿದರು.

''ಹಿಡಕಲ್‌ ಜಲಾಶಯದಿಂದ ಹೆಚ್ಚುವರಿಯಾಗಿ ನೀರು ಪಡೆಯಲು ಉದ್ದೇಶಿಸಿದ 20 ಕೋಟಿ ರೂ. ವೆಚ್ಚದ ಮಶಿನ್‌ ಅಳವಡಿಸುವ ಕೆಲಸವೂ ತ್ವರಿತವಾಗಿ ನಡೆಯಬೇಕು. ಬರುವ ಡಿಸೆಂಬರ್‌ ಅಥವಾ ಜನವರಿ ತಿಂಗಳಿನಲ್ಲಿ ಹೆಚ್ಚುವರಿ ನೀರು ಸಿಗುವಂತಾಗಬೇಕು'', ಎಂದು ಶಾಸಕರು ತಾಕೀತು ಮಾಡಿದರು.

ಬೆಳಗಾವಿ ನಗರಕ್ಕೆ ಕೇವಲ 15 ಕಿಮೀ ದೂರದಲ್ಲಿರುವ ಶಿರೂರ ಡ್ಯಾಂನಲ್ಲೂ ನೀರಿದೆ. ಅಲ್ಲಿಂದ ನೀರು ಪಡೆದುಕೊಳ್ಳುವ ವಿಚಾರವಾಗಿ ಆ ಕ್ಷೇತ್ರದ ಶಾಸಕ ಉಮೇಶ್‌ ಕತ್ತಿ ಅವರೊಂದಿಗೆ ಮಾತನಾಡಿದ್ದೇನೆ.
-ಅನಿಲ ಬೆನಕೆ, ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ