ಆ್ಯಪ್ನಗರ

ಸಂಪಗಾಂವ ಕೆರೆ ನೆಚ್ಚಿಕೊಂಡವರಿಗೆ ಬಾಯಾರಿಕೆಯೇ ಭಾಗ್ಯ!

ಸಂಪಗಾಂವ ಕೆರೆ ನೆಚ್ಚಿಕೊಂಡವರಿಗೆ ಬಾಯಾರಿಕೆಯೇ ಭಾಗ್ಯ! ...

Vijaya Karnataka 29 Jan 2019, 5:00 am
ಸುರೇಶ ಮುರಡಿಮಠ ಚನ್ನಮ್ಮನ ಕಿತ್ತೂರು
Vijaya Karnataka Web BEL-28 KITTUR PHOTO 1

ಕಾಲುವೆ ಕಾಮಗಾರಿ ಮುಗಿದು ದಶಕ ಕಳೆದರೂ ನೀರು ಹರಿಯದ ಚನ್ನಮ್ಮನ ಕಿತ್ತೂರು ಕ್ಷೇತ್ರದ ನೀರಾವರಿ ಯೋಜನೆಯೊಂದರ ವಿರುದ್ಧ ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿದೆ. ನೂರಾರು ಕೋಟಿ ರೂ. ವೆಚ್ಚದ ಕೆರೆ ತುಂಬಿಸುವ ಕಾಮಗಾರಿ ಆರಂಭಿಸುವ ಮಾತು ಬಿಟ್ಟು, ಕಾಮಗಾರಿ ಪೂರ್ಣಗೊಂಡಿರುವ ತಿಗಡಿ ಹರಿನಾಲಾದಿಂದ ಸಂಪಗಾಂವ ಕೆರೆ ತುಂಬಿಸುವ ಯೋಜನೆ ಕಾರ್ಯಗತಗೊಳಿಸಿ ಎಂದು ಸಂಪಗಾಂವ ಸುತ್ತಮತ್ತಲಿನ ಗ್ರಾಮಸ್ತರು ಕಿಡಿಕಾರುತ್ತಿದ್ದಾರೆ.

ತಿಗಡಿ ಹರಿನಾಲಾ ನೀರಾವರಿ ಯೋಜನೆಯಲ್ಲಿ ಕಾಲುವೆ ನಿರ್ಮಾಣಕ್ಕಾಗಿ ಸಂಪಗಾಂವ ವ್ಯಾಪ್ತಿಯ 60ರಿಂದ 70 ಎಕರೆ ಭೂಮಿಯನ್ನು ಗ್ರಾಮಸ್ಥರಿಂದ ಇಲಾಖೆ ವಶಪಡಿಸಿಕೊಂಡಾಗಿದೆ. ವಶಪಡಿಸಿಕೊಂಡ ಭೂಮಿಗೆ ಪ್ರತಿಯಾಗಿ ಪರಿಹಾರವೂ ಇಲ್ಲ, ನಾಲೆಗೆ ನೀರೂ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಬೇಸಿಗೆ ಮುನ್ನವೇ ಕೆರೆ ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆಗೆ ಒತ್ತು ನೀಡಿರುವ ಗ್ರಾಮಸ್ಥರು ಜಾನುವಾರುಗಳಿಗೆ ನೀರು ಪೂರೈಸಲು ನಿತ್ಯ ಪರದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಸಂಪಗಾಂವ ಹಾಗೂ ಗದ್ದಿಕರವಿನಕೊಪ್ಪ ಗ್ರಾಮಗಳಿಗೆ ಆಧಾರ ಸ್ತಂಭವಾಗಿದ್ದ ಈ ಕೆರೆ ಈಗ ಒಣಗಿ ಬತ್ತಿಹೋಗಿದೆ. ಈ ಗ್ರಾಮಗಳಲ್ಲಿನ ಅನೇಕ ಕುರಿಗಾರರು ತಮ್ಮ ಸಾವಿರಾರು ಕುರಿ ಹಿಂಡಿನ ಜತೆ ನೀರಿಗಾಗಿ ಊರೂರು ಅಲೆಯುವಂತಾಗಿದೆ. ಬಸ್‌ ನಿಲ್ದಾಣ ಪಕ್ಕದಲ್ಲಿರುವ ಈ ಕೆರೆ ತುಂಬಿದರೆ ಇಡೀ ಊರಿಗೆ ನೀರಿನ ಕೊರತೆ ಇರುವುದಿಲ್ಲ. ಅಲ್ಲದೆ, ರೈತರ ಜಮೀನುಗಳಲ್ಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಈಗಾಗಲೇ ಅಂತರ್ಜಲ ಕಡಿಮೆಯಾಗಿ ಕೊಳವೆ ಬಾವಿಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೀರು ಹೊರ ಚೆಲ್ಲುತ್ತಿವೆ. ಕೆರೆಯಲ್ಲಿ ನೀರು ಖಾಲಿಯಾಗಿದ್ದರಿಂದ ರೈತರೂ ಗೋಳಾಡುವಂತಾಗಿದೆ.

ಚನ್ನಮ್ಮನ ಕಿತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆ ತುಂಬಿಸಲು ಈ ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಬಿಡುಗಡೆಯಾಗಿರುವ 238 ಕೋಟಿ ರೂ.ವೆಚ್ಚದ ಕಾಮಗಾರಿ ಆರಂಭಿಸುವ ಕುರಿತು ಮಾತನಾಡುವ ಜನಪ್ರತಿನಿಧಿಗಳು, ಈಗಾಗಲೇ ಕಾಮಗಾರಿ ಮುಗಿದಿರುವ ಯೋಜನೆಗೆ ನೀರು ಹರಿಸುವ ಕುರಿತು ಚಕಾರ ಎತ್ತುತ್ತಿಲ್ಲ. ಸಂಪಗಾಂವ ಸುತ್ತಲಿನ ಗ್ರಾಮಗಳಿಗೆಂದೇ ನಿರ್ಮಿತವಾದ ತಿಗಡಿ ಹರಿನಾಲಾ ಯೋಜನೆಯ ನೀರು ಉದ್ದೇಶ ವ್ಯಾಪ್ತಿಯಲ್ಲಿ ಹರಿಯುವ ಬದಲು ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ ಹರಿದು ಹಸಿರು ಮಾಡುತ್ತಿದೆ. ಯೋಜನೆಗಾಗಿ ಭೂಮಿ ತ್ಯಾಗ ಮಾಡಿರುವ ಸ್ಥಳೀಯರಿಗೆ ಬಾಯಾರಿಕೆಯೇ ಭಾಗ್ಯವಾಗುತ್ತಿದೆ. ಜನಪ್ರತಿನಿಧಿಗಳ ರಾಜಕೀಯ ತಿಕ್ಕಾಟಕ್ಕೆ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ ಹೊರತು ತಿಗಡಿ ಹರಿನಾಲಾ ನೀರು ಕಾಲುವೆಗೆ ಹರಿಯುತ್ತಿಲ್ಲ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೀರು ಹರಿದಿದ್ದು ವಿರಳ :
2002ರಲ್ಲಿ ನಿರ್ಮಾಣಗೊಂಡ ತಿಗಡಿ ಹರಿನಾಲಾ ಯೋಜನೆಯಲ್ಲಿ ಕೆರೆಗಳಿಗೆ ನೀರು ಹರಿದಿದ್ದೇ ವಿರಳ. ಮಾಜಿ ಶಾಸಕ ಸುರೇಶ ಮಾರಿಹಾಳ ಅವಧಿಯಲ್ಲಿ ಎರಡು ಸಲ ಕೆರೆಗೆ ನೀರು ಬಿಡಲಾಗಿತ್ತು. ನಂತರ ಡಿ.ಬಿ. ಇನಾಮದಾರರ ಅವಧಿಗಳಲ್ಲಿ ಒಮ್ಮೆ ಮಾತ್ರ ಕೆರೆಗೆ ನೀರು ಬಂದಿದೆ. ಈ ಮಧ್ಯೆ ಭೀಕರ ಬರಗಾಲದ ಸಂದರ್ಭಗಳಲ್ಲಿ ಗ್ರಾಮಸ್ಥರು ಜನಪ್ರತಿನಿಧಿಗಳಲ್ಲಿ ಅನೇಕ ಸಲ ವಿನಂತಿಸಿದರೂ ನೀರಾವರಿ ಇಲಾಖೆ ಮೇಲೆ ಒತ್ತಡ ಹೇರಿ ನೀರು ಹರಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎನ್ನುವ ಆರೋಪಗಳಿವೆ.

ಕಾಮಗಾರಿ ಪೂರ್ಣಗೊಂಡಿರುವ ಕಾಲುವೆಗೆ ನೀರು ಹರಿಸುವಲ್ಲಿ ನೀರಾವರಿ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿದ್ದಾರೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಗ್ರಾಮಸ್ಥರು ಉಗ್ರ ಹೋರಾಟಕ್ಕೆ ಸಿದ್ಧರಾಗಬೇಕಾಗುತ್ತದೆ.
-ಮಂಜುನಾಥ ಉಳವಿ, ಅಧ್ಯಕ್ಷ, ಕರ್ನಾಟಕ ನವ ನಿರ್ಮಾಣ ಪಡೆ, ಸಂಪಗಾಂವ

ಕೆರೆ ಕಾಲುವೆಗಳು ಪಾಚಿ ಕಸಗಳಿಂದ ತುಂಬಿ ಹೋಗಿದ್ದವು. ಅದನ್ನೆಲ್ಲ ಸ್ವಚ್ಛಗೊಳಿಸಲಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿದೆ. ಎರಡು ದಿನಗಳಲ್ಲಿ ನೀರು ಹರಿಸಲಾಗುವುದು.
- ಮಹಾಂತೇಶ ದೊಡಗೌಡರ, ಶಾಸಕರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ