ಆ್ಯಪ್ನಗರ

ಬೆಳಗಾವಿಯಲ್ಲಿ ಇಂದಿನಿಂದ ರಾಷ್ಟ್ರಮಟ್ಟದ ಕುರಾಶ್‌ ಹಬ್ಬ

- ವಿಟಿಯು ಆವರಣದಲ್ಲಿ ಎರಡು ದಿನಗಳ ಕಾಲ ಟೂರ್ನಿ; ಸಾವಿರಕ್ಕೂ ಹೆಚ್ಚು ಕ್ರಿಡಾಪಟುಗಳು ಭಾಗಿ

Vijaya Karnataka 16 Oct 2018, 5:00 am
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಅ.16ರಿಂದ ಆರಂಭಗೊಳ್ಳುವ ರಾಷ್ಟ್ರಮಟ್ಟದ ಕೆಡೆಟ್‌, ಜ್ಯೂನಿಯರ್‌ 'ಕುರಾಶ್‌' ಟೂರ್ನಿಗೆ ವೇದಿಕೆ ಸಜ್ಜುಗೊಂಡಿದ್ದು, ನಗರದಲ್ಲಿ ಎರಡು ದಿನಗಳ ಕಾಲ 'ಕುರಾಶ್‌' ಹಬ್ಬ ಮೇಳೈಸಲಿದೆ.
Vijaya Karnataka Web today is the national kurash festival in belgaum
ಬೆಳಗಾವಿಯಲ್ಲಿ ಇಂದಿನಿಂದ ರಾಷ್ಟ್ರಮಟ್ಟದ ಕುರಾಶ್‌ ಹಬ್ಬ


ಭಾರತೀಯ ಕುರಾಶ್‌ ಅಸೋಸಿಯೇಶನ್‌, ಕರ್ನಾಟಕ ಕುರಾಶ್‌ ಅಸೋಸಿಯೇಶನ್‌ನಿಂದ ಜಿಲ್ಲೆಯಲ್ಲಿ ಮೊದಲ ಬಾರಿ ನಡೆಯುತ್ತಿರುವ ಈ ಟೂರ್ನಿಗೆ ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಹೆಸರು ನೋಂದಾಯಿಸಿದ್ದಾರೆ. 400 ಕ್ರೀಡಾಪಟುಗಳು ಭಾನುವಾರವೇ ನಗರಕ್ಕೆ ಬಂದಿದ್ದು, ಸೋಮವಾರ ಸಂಜೆ ಹೊತ್ತಿಗೆ ಒಟ್ಟು 900ಕ್ಕೂ ಹೆಚ್ಚು ಕುರಾಶ್‌ ಪಟುಗಳು ಬಂದಿದ್ದರು. ಅವರೆಲ್ಲರಿಗೂ ವಿಟಿಯು ಆವರಣದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ದೇಶದಲ್ಲಿ ಅಷ್ಟೊಂದು ಪ್ರಚಾರದಲ್ಲಿರದ ಕುರಾಶ್‌ ಕ್ರೀಡೆಯಲ್ಲಿ ಇಲ್ಲಿನ ಮಲಪ್ರಭಾ ಜಾಧವ್‌ ಅವರು ಏಷ್ಯನ್‌ ಗೇಮ್‌ ಕಂಚಿನ ಪದಕ ಗೆದ್ದ ಬಳಿಕ ವ್ಯಾಪಕ ಬೇಡಿಕೆ ಪಡೆದುಕೊಂಡಿದೆ. ಹಾಗಾಗಿ ರಾಷ್ಟ್ರಮಟ್ಟದ ಈ ಟೂರ್ನಿಗೆ ನಿರೀಕ್ಷೆಗೂ ಮೀರಿ ಸ್ಪರ್ಧಿಗಳ ನೋಂದಣಿಯಾಗಿದ್ದು, 'ಕುರಾಶ್‌' ರಾಷ್ಟ್ರಮಟ್ಟದ ಟೂರ್ನಿಗೆ ಇಷ್ಟೊಂದು ಕ್ರೀಡಾಪಟುಗಳು ಬರುತ್ತಿರುವುದು ಇದೇ ಮೊದಲು ಎನ್ನುತ್ತಾರೆ ಅಸೋಸಿಯೇಶನ್‌ನ ಅಧಿಕಾರಿಗಳು. ಅದಕ್ಕಾಗಿ ರೆಫರಿಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಮಲಪ್ರಭಾ ಜಾಧವ್‌ ಕೂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೂರು ಕ್ರೀಡಾಂಗಣ: ''ಟೂರ್ನಿಗಾಗಿ ಮೂರು ಕ್ರೀಡಾಂಗಣ ಸಿದ್ಧಪಡಿಸಲಾಗಿದೆ. ಪುರುಷ, ಮಹಿಳೆಯರ ವಿವಿಧ ವಯಸ್ಸಿನ 28 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಏಕ ಕಾಲಕ್ಕೆ ಮೂರು ಪಂದ್ಯಗಳು ನಡೆಯಲಿವೆ. ಒಟ್ಟು 45 ರೆಫರಿಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಕ್ರೀಡಾಪಟುಗಳು, ಕೋಚ್‌ಗಳು ಸೇರಿ ಸುಮಾರು 1200 ಜನರು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಮೊದಲ ದಿನ ಮಧ್ಯಾಹ್ನ 3ರಿಂದ ಸ್ಪರ್ಧೆ ಆರಂಭವಾಗಲಿದೆ. ಅಂದು ರಾತ್ರಿ 10ರವರೆಗೆ ಸ್ಪರ್ಧೆ ನಡೆಯಲಿದೆ. ಮಾರನೇ ದಿನ ಬೆಳಗ್ಗೆ 8ಕ್ಕೆ ಸ್ಪರ್ಧೆ ಶುರುವಾಗಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ'', ಎಂದು ಬೆಳಗಾವಿ ಜುಡೊ (ಕುರಾಶ್‌) ಹಿರಿಯ ಕೋಚ್‌ ಕೆ.ಎಂ. ತ್ರಿವೇಣಿ ತಿಳಿಸಿದರು.

ಉದ್ಘಾಟನೆ ಇಂದು: ಮಂಗಳವಾರ ಮಧ್ಯಾಹ್ನ 12.30ಕ್ಕೆ ಟೂರ್ನಿಯ ಉದ್ಘಾಟನೆ ಸಮಾರಂಭ ನಡೆಯಲಿದೆ. ಕೇಂದ್ರ ಮಾಜಿ ಸಚಿವ, ಭಾರತೀಯ ಕುರಾಶ್‌ ಅಸೋಸಿಯೇಶನ್‌ ಅಧ್ಯಕ್ಷ ಜಗದೀಶ ಟೈಟ್ಲರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯದರ್ಶಿ ರವಿ ಕಪೂರ್‌, ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ್‌, ಅನಿಲ ಬೆನಕೆ, ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಹಳ್ಳಿ, ನಗರ ಪೊಲೀಸ್‌ ಕಮಿಷನರ್‌ ಡಿ.ಸಿ. ರಾಜಪ್ಪ, ಜಿಪಂ ಸಿಇಒ ಆರ್‌. ರಾಮಚಂದ್ರನ್‌, ವಿಟಿಯು ಕುಲಪತಿ ಕರಿಸಿದ್ಧಪ್ಪ, ಜುಡೊ ತರಬೇತುದಾರ ಜೀವನ ಶರ್ಮಾ, ಏಷ್ಯನ್‌ ಗೇಮ್‌ ಪದಕ ವಿಜೇತರಾದ ಪಿಂಕಿ ಬಲ್ಹಾರಿಯಾ, ಮಲಪ್ರಭಾ ಜಾಧವ್‌ ಉಪಸ್ಥಿತರಿರಲಿದ್ದಾರೆ. ಬುಧವಾರ ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಸತೀಶ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ