ಆ್ಯಪ್ನಗರ

ಏಕಾಏಕಿ ಸ್ಥಳಾಂತರ ವಿರೋಧಿಸಿ ಇಂದು ಪ್ರತಿಭಟನೆ

ಬೆಳಗಾವಿ: ಈಗಿರುವ ಸ್ಥಳದಲ್ಲೇ ವ್ಯಾಪಾರ ವಹಿವಾಟು ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ಇಲ್ಲಿನ ಫೋರ್ಟ್‌ ರಸ್ತೆಯ ಹಳೆ ಭಾಜಿ ಮಾರುಕಟ್ಟೆ ...

Vijaya Karnataka 13 May 2019, 5:00 am
ಬೆಳಗಾವಿ : ಈಗಿರುವ ಸ್ಥಳದಲ್ಲೇ ವ್ಯಾಪಾರ ವಹಿವಾಟು ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ಇಲ್ಲಿನ ಫೋರ್ಟ್‌ ರಸ್ತೆಯ ಹಳೆ ಭಾಜಿ ಮಾರುಕಟ್ಟೆ ವ್ಯಾಪಾರಸ್ಥರು ಸೋಮವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಿದ್ದಾರೆ.
Vijaya Karnataka Web BLG-1205-2-52-12RAJU-7


ವ್ಯಾಪಾರಿ ಮುಖಂಡರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೂರ್ವಸೂಚನೆ ಇಲ್ಲದೆ ಏಕಾಏಕಿಯಾಗಿ ಎಪಿಎಂಸಿಯವರು ಬಲವಂತವಾಗಿ ನಮ್ಮನ್ನು ಇಲ್ಲಿಂದ ಸ್ಥಳಾಂತರಿಸುತ್ತೇವೆ ಎಂದು ಹೇಳುವುದು ನ್ಯಾಯಸಮ್ಮತವಲ್ಲ. ಇದರಿಂದ ಆಶ್ರಿತ ಸಾವಿರಾರು ಕುಟುಂಬದವರು ಬೀದಿಗೆ ಬೀಳುತ್ತಾರೆ. ಇದರಿಂದ ಏನೇ ಅನಾಹುತಗಳು ಆದರೆ ಅದಕ್ಕೆ ಆಡಳಿತವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಎಪಿಎಂಸಿಯಲ್ಲಿ ನೂತನ ತರಕಾರಿ ಸಗಟು ಮಾರುಕಟ್ಟೆ ಆರಂಭವಾಗುವುದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆದರೆ ಇಲ್ಲಿರುವ ತರಕಾರಿ ಮಾರುಕಟ್ಟೆಯನ್ನು ನಡೆಸಿಕೊಂಡು ಹೋಗಲು ನಮಗೆ ಅವಕಾಶ ಮಾಡಿಕೊಡಬೇಕು. ನಾವು ಗಾಂಧಿನಗರದ ಬಳಿ ನಿರ್ಮಿಸುತ್ತಿರುವ ಮಾರುಕಟ್ಟೆ ಪೂರ್ಣಗೊಂಡ ನಂತರ ಅಲ್ಲಿಗೆ ಹೋಗುತ್ತೇವೆ. ನಾವು ಒಟ್ಟು 230 ಜನ ವ್ಯಾಪಾರಿಗಳು ಇದ್ದೇವೆ. ನಮ್ಮೆಲ್ಲರಿಗೂ ಏಕಕಾಲಕ್ಕೆ ಎಪಿಎಂಸಿಯಲ್ಲಿ ಸ್ಥಳಾವಕಾಶ ಮಾಡಿಕೊಟ್ಟರೆ ಹೋಗಲು ಸಿದ್ಧರಿದ್ದೇವೆ. ನಮಗೆ ಪರಾರ‍ಯಯ ಕಲ್ಪಿಸದೇ ಖಾಲಿ ಮಾಡಿಸುವುದನ್ನು ನಾವು ಒಪ್ಪುವುದಿಲ್ಲವೆಂದು ಸ್ಪಷ್ಟಪಡಿಸಿದರು.

ನೂತನ ತರಕಾರಿ ಸಗಟು ಮಾರುಕಟ್ಟೆ ನಿರ್ಮಾಣಕ್ಕೆಂದೇ ನಾವು 10 ವರ್ಷಗಳ ಹಿಂದೆ 20 ಎಕರೆ ಜಾಗ ಕೋರಿ ಎಪಿಎಂಸಿ ಮತ್ತು ಪಾಲಿಕೆ ಬಳಿಗೆ ಹೋಗಿದ್ದೆವು. ಆದರೆ ಅವರು ಇಲ್ಲವೆಂದು ಸ್ಪಷ್ಟಪಡಿಸಿದರು. ಅನಿವಾರ್ಯಕ್ಕಾಗಿ ನಾವು ಸ್ವಂತದ ಹಣ ಹೂಡಿ ಜಮೀನು ಖರೀದಿ ಮಾಡಿ ಖಾಸಗಿ ತರಕಾರಿ ಸಗಟು ಮಾರುಕಟ್ಟೆ ನಿರ್ಮಾಣ ಮಾಡುತ್ತಿದ್ದೇವೆ. ಇದಕ್ಕೆ ಕಾನೂನಿನಲ್ಲೂ ಅವಕಾಶವಿದೆ. ಆದರೂ ನಮಗೆ ಅನೇಕ ತಾಪತ್ರಯಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸೋಮವಾರದ ಹೋರಾಟದಲ್ಲಿ ವ್ಯಾಪಾರಿಗಳ ಜತೆಗೆ ತರಕಾರಿ ಬೆಳೆಗಾರರು ದೊಡ್ಡ ಸಂಖ್ಯೆಯಲ್ಲಿ ಪಾಳ್ಗೊಳ್ಳುತ್ತಾರೆ. ಆಡಳಿತಕ್ಕೆ ನಮ್ಮ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದೇವೆ. ಇದಕ್ಕೆ ಸ್ಪಂದಿಸದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.

ದಿವಾಕರ್‌ ಪಾಟೀಲ, ಕೆ.ಕೆ. ಬಾಗವಾನ, ಮೋಹನ ಮನೋಳಕರ್‌, ರಾಮ ಹವಳ, ಇಕ್ಬಾಲ ಡೋಣಿ, ಸುನೀಲ ಭೋಸಲೆ, ಸುರೇಶ ಹವಳ, ಸಂಜಯ ಬಾವಿ, ವಿಶ್ವನಾಥ ಪಾಟೀಲ, ರಾಜು ಡೋಣಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ