ಬೈಲಹೊಂಗಲ: ಪಟ್ಟಣದಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಸಂಗೀತ ಸುಧೆ, ಟ್ರ್ಯಾಕ್ ಸಿಂಗಿಂಗ್ ಜೆಸಿಎಂ ಅವಾರ್ಡ್ಸ್ 2018 ಗ್ರ್ಯಾಂಡ್ ಫಿನಾಲೆ ಸ್ಪರ್ಧೆ ಭಾನುವಾರ ಸಂಜೆ 6ಕ್ಕೆ ಶೂರ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅಭಿಮಾನಿ ಬಳಗದ ಆಶ್ರಯದಲ್ಲಿ ನಡೆಯಲಿದೆ.
ಯುವ ಧುರೀಣ ಸಂತೋಷ ಹಡಪದ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸಂಗೀತದೊಂದಿಗೆ ಹಾಡುವ ಲೈವ್ ಶೋ ಇದಾಗಿದ್ದು, ಅಂತಿಮ ಹಂತ ಪ್ರವೇಶಿಸಿರುವ ಹತ್ತು ಗಾಯಕರ ನಡುವೆ ಈ ಸ್ಪರ್ಧೆ ಜರುಗಲಿದೆ. ಉತ್ತಮ ಗಾಯಕರಾಗಿ ಹೊರಹೊಮ್ಮಿದ ಮೂವರು ಅನುಕ್ರಮವಾಗಿ 20, 15, 10 ಸಾವಿರ ರೂ. ಬಹುಮಾನ ಹಾಗೂ ಟ್ರೋಫಿ ಪಡೆಯಲಿದ್ದಾರೆ ಎಂದರು.
ನಿವೃತ್ತ ಮುಖ್ಯಾಧ್ಯಾಪಕ ಎಂ.ಎ.ನಾಯಿಕ ಮಾತನಾಡಿ, ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಟ್ಟಣದ ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ಬೈಲೂರ ತೋಂಟದಾರ್ಯ ನಿಜಗುಣಾನಂದ ಸ್ವಾಮೀಜಿ, ಆರಾದ್ರಿಮಠದ ಮಹಾಂತೇಶ ಶಾಸ್ತ್ರಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹಾಗೂ ಗಣ್ಯರು ಉಪಸ್ಥಿತರಿರುವರು. 10 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸಂಗೀತ ಪ್ರೇಮಿಗಳಿಗೆ ಅಗತ್ಯ ಎಲ್ಲ ಅನುಕೂಲ ಕಲ್ಪಿಸಲಾಗಿದೆ. ಕಿರುತೆರೆ ಕಲಾವಿದೆ ರಂಜನಿ ರಾಘವನ್, ಸರಿಗಮಪ ಖ್ಯಾತಿಯ ಚನ್ನಪ್ಪ ಹುದ್ದಾರ, ಸುಹಾನಾ ಸಯ್ಯದ್, ಇಂಪನಾ, ಸುಪ್ರೀತ ಫಾಲ್ಗುಣ, ವಿಶ್ವಪ್ರಸಾದ ಗಾಣಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಯುವ ಧುರೀಣ ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ, ಕಲಾವಿದ ಕುಮಾರ ಬೋರಕನವರ, ಚಂದ್ರಶೇಖರ ಸವದತ್ತಿ ಮತ್ತಿತರರು ಉಪಸ್ಥಿತರಿದ್ದರು.