ಆ್ಯಪ್ನಗರ

ಸಾಂಪ್ರಾದಾಯಿಕ ಕೃಷಿ, ವ್ಯವಸ್ಥಿತ ಜೀವನ: ಕೋರೆ ಸಲಹೆ

ಕೇವಲ ಕಾರ್ಖಾನೆಗಳು ಹೆಚ್ಚಿನ ದರ ಕೊಡಬೇಕೆನ್ನುವ ನಿರೀಕ್ಷೆಯನ್ನು ಮಾತ್ರ ಇಟ್ಟುಕೊಳ್ಳದೆ ಕಡಿಮೆ ಖರ್ಚಿನಲ್ಲಿ ಕಬ್ಬು ಬೆಳೆಯುವ ಸಾಂಪ್ರದಾಯಿಕ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ವಯಕ್ತಿಕ ಆರೋಗ್ಯ ಮತ್ತು ಮಕ್ಕಳ ಶಿಕ್ಷ ಣದ ಕಡೆಗೂ ರೈತರು ಗಮನ ಕೊಡಬೇಕು'

Vijaya Karnataka 29 Sep 2018, 5:00 am
ಚಿಕ್ಕೋಡಿ: ''ಕೇವಲ ಕಾರ್ಖಾನೆಗಳು ಹೆಚ್ಚಿನ ದರ ಕೊಡಬೇಕೆನ್ನುವ ನಿರೀಕ್ಷೆಯನ್ನು ಮಾತ್ರ ಇಟ್ಟುಕೊಳ್ಳದೆ ಕಡಿಮೆ ಖರ್ಚಿನಲ್ಲಿ ಕಬ್ಬು ಬೆಳೆಯುವ ಸಾಂಪ್ರದಾಯಿಕ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ವಯಕ್ತಿಕ ಆರೋಗ್ಯ ಮತ್ತು ಮಕ್ಕಳ ಶಿಕ್ಷ ಣದ ಕಡೆಗೂ ರೈತರು ಗಮನ ಕೊಡಬೇಕು''
Vijaya Karnataka Web BEL-28CKD1


ಇದು ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಸಭಾಭವನದಲ್ಲಿ ಶುಕ್ರವಾರ ನಡೆದ ಕಾರ್ಖಾನೆಯ 50ನೇ ವಾರ್ಷಿಕ ಸರ್ವ ಸಾಧಾರಣೆ ಸಭೆಯಲ್ಲಿ ಕಾರ್ಖಾನೆಯ ಮಾರ್ಗದರ್ಶಕರೂ, ರಾಜ್ಯಸಭಾ ಸದಸ್ಯರೂ ಆಗಿರುವ ಡಾ.ಪ್ರಭಾಕರ ಕೋರೆ ರೈತರಿಗೆ ನೀಡಿರುವ ಜೀವನ ಶಿಕ್ಷ ಣ ಪಾಠ.

ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಬರುವ ಹೊಸ ಹೊಸ ತಳಿಯ ಕಬ್ಬಿನ ಬೀಜ ಆಯ್ಕೆ ಮಾಡಿಕೊಂಡು ಹನಿ ನೀರಾವರಿ ಅಳವಡಿಸಿಕೊಂಡಾಗ ಮಾತ್ರ ರೈತ ಆರ್ಥಿಕ ಸಬಲತೆ ಸಾಧಿಸಲು ಸಾಧ್ಯ. ಆದ್ದರಿಂದ ರೈತರು ಕೃಷಿ ಪದ್ಧತಿಯಲ್ಲಿ ಬದಲಾವಣೆ ಹೊಂದಬೇಕು. ಅತಿಯಾದ ನೀರು ಮತ್ತು ಗೊಬ್ಬರ ಬಳಕೆ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ನಾವೇ ಹಾಳು ಮಾಡುತ್ತಿದ್ದೇವೆ. ಆದ್ದರಿಂದ ಮಿತವಾದ ನೀರು ಮತ್ತು ಗೊಬ್ಬರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಸಹಕಾರಿ ಸಕ್ಕರೆ ಕಾರ್ಖಾನೆಗಳ ಪೈಕಿ ದೂಧಗಂಗಾ ಕಾರ್ಖಾನೆ ರೈತರು ಮತ್ತು ಕಾರ್ಮಿಕರ ಹಿತ ಕಾಪಾಡಿಕೊಂಡು ಬರುವ ಮೂಲಕ ರಾಜ್ಯದಲ್ಲೇ ಮಾದರಿ ಸಕ್ಕರೆ ಕಾರ್ಖಾನೆಯಾಗಿ ಹೊಮ್ಮಿದೆ. ಇದಕ್ಕೆ ಕಬ್ಬು ಬೆಳೆಗಾರರ ಸಹಕಾರವೇ ಮುಖ್ಯ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ನ ಮುಖ್ಯ ಸಚೇತಕ, ಕಾರ್ಖಾನೆ ನಿರ್ದೇಶಕ ಮಹಾಂತೇಶ ಕವಟಗಿಮಠ, ನಮ್ಮ ದೇಶಕ್ಕೆ 26 ಮಿಲಿಯನ್‌ ಟನ್‌ ಸಕ್ಕರೆ ಬೇಕು. ಆದರೆ 2017-18ನೇ ಸಾಲಿನಲ್ಲಿ 35 ಮಿಲಿಯನ್‌ ಟನ್‌ ಸಕ್ಕರೆ ಉತ್ಪಾದನೆಯಾಗಿದೆ. ಹೀಗಾಗಿ ಇಡೀ ದೇಶದಲ್ಲಿಯೇ ಸಕ್ಕರೆ ಬೆಲೆ ಕುಸಿದಿದೆ ಎಂದರು. ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತ ಬಂದಿದ್ದು, ಕೆಎಲ್‌ಇ ಸಂಸ್ಥೆಯ ಆರೋಗ್ಯ ಕಾರ್ಡ್‌ ಯೋಜನೆಯಡಿಯಲ್ಲಿ ಕಾರ್ಖಾನೆಯ 17 ಸಾವಿರ ರೈತ ಸದಸ್ಯರು ಮತ್ತು ಅವರ ಕುಟುಂಬದವರು ಆರೋಗ್ಯ ಸೇವೆಯ ಲಾಭ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.

ಬಿಡಿಸಿಸಿ ಬ್ಯಾಂಕ್‌ ಮತ್ತು ಕಾರ್ಕಾನೆಯ ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ, ಕಾರ್ಖಾನೆ ರೈತರಿಗೆ ವಿವಿಧ ಸೇವೆ ಒದಗಿಸುವ ಮೂಲಕ ಸದಸ್ಯರ ಉನ್ನತಿಗೆ ಶ್ರಮಿಸುತ್ತಿದ್ದು, ಸದಸ್ಯರು ಬೆಳೆದ ಸಂಪೂರ್ಣ ಕಬ್ಬನ್ನು ಕಾರ್ಖಾನೆಗೆ ಕಳುಹಿಸಬೇಕೆಂದು ವಿನಂತಿಸಿದರು.

ಕಾರ್ಖಾನೆಯ ನಿರ್ದೇಶಕರಾದ ಅಜೀತ ದೇಸಾಯಿ, ಭರತೇಶ ಬನವಣೆ, ಮಲ್ಲಿಕಾರ್ಜುನ ಕೋರೆ, ಪರಸಗೌಡ ಪಾಟೀಲ, ತಾತ್ಯಾಸಾಹೇಬ ಕಾಟೆ, ಸಂದೀಪ ಪಾಟೀಲ, ಮಹಾವೀರ ಮಿರ್ಜಿ, ಬಾಳಗೌಡ ರೇಂದಾಳೆ, ರಾಮಚಂದ್ರ ನಿಶಾನದಾರ, ಮಲ್ಲಪ್ಪಾ ಮೈಶಾಳೆ, ಚೇತನ ಪಾಟೀಲ, ನಂದಕುಮಾರ ನಾಶಿಪುಡಿ ಉಪಸ್ಥಿತರಿದ್ದರು. ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಟ್ಟಣಶೆಟ್ಟಿ ವರದಿ ಮಂಡಿಸಿದರು. ಶಿವಾನಂದ ಹಕಾರೆ ನಿರೂಪಿಸಿದರು. ಆನಂದ ಕೊಟಬಾಗಿ ವಂದಿಸಿದರು. ವಿಧಾನ ಪರಿಷತ್‌ನ ಮುಖ್ಯ ಸಚೇತಕರಾಗಿ ಆಯ್ಕೆಯಾದ ಮಹಾಂತೇಶ ಕವಟಗಿಮಠ ಅವರನ್ನು ಸನ್ಮಾನಿಸಲಾಯಿತು.

ಕೇಂದ್ರ ಸರಕಾರ ಈಗ ಇಥೆನಾಲ್‌ ಉತ್ಪಾದನೆ ಬಗ್ಗೆ ಹೇಳುತ್ತಿದೆ. ಆದರೆ ಇಡೀ ದೇಶದಲ್ಲಿಯೇ ಮೊಟ್ಟ ಮೊದಲು ಇಥೆನಾಲ್‌ ಉತ್ಪಾದನೆ ಆರಂಭಿಸಿದ್ದು ನಮ್ಮ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ.
- ಮಹಾಂತೇಶ ಕವಟಗಿಮಠ, ವಿಧಾನಪರಿಷತ್‌ ಮುಖ್ಯಸಚೇತಕ

ಇಥೆನಾಲ್‌ ಸಾಮರ್ಥ್ಯ‌ ಹೆಚ್ಚಳ

ಸಭೆಯ ಅಧ್ಯಕ್ಷ ತೆ ವಹಿಸಿದ್ದ ಕಾರ್ಖಾನೆಯ ಅಧ್ಯಕ್ಷ ಅಮಿತ ಕೋರೆ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ಪರ್ಯಾಯ ಉತ್ಪನ್ನವಾಗಿ ಇಥೆನಾಲ್‌ ಹಾಗೂ ಬಯೋ ಗ್ಯಾಸ್‌ ತಯಾರಿಸುವುದು ಅನಿವಾರ್ಯವಾಗಿದೆ. ಸಕ್ಕರೆ ದರ ಕುಸಿತ ಕಂಡಾಗ ಇಥೆನಾಲ್‌ ತಯಾರಿಸುವುದರಿಂದ ರೈತರಿಗೆ ಹೆಚ್ಚಿನ ದರ ನೀಡಲು ಸಾಧ್ಯ. ಆದ್ದರಿಂದ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಇಥೆನಾಲ್‌ ಸಾಮಥ್ಯವನ್ನು 25 ಸಾವಿರ ಲೀಟರ್‌ನಿಂದ 50 ಸಾವಿರ ಲೀಟರ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ