ಆ್ಯಪ್ನಗರ

ವಿಮಾನ ನಿಲ್ದಾಣ ದಾರಿಗೆ ಲಾರಿ ಕಾಟ

ಪ್ರಮೋದ ಹರಿಕಾಂತ ಬೆಳಗಾವಿ ಹತ್ತಾರು ಸಂಘಟನೆಗಳ ಹೋರಾಟದ ...

Vijaya Karnataka 22 Jul 2019, 5:00 am
ಪ್ರಮೋದ ಹರಿಕಾಂತ ಬೆಳಗಾವಿ
Vijaya Karnataka Web BLG-2107-2-52-21PRAMOD5

ಹತ್ತಾರು ಸಂಘಟನೆಗಳ ಹೋರಾಟದ ಫಲವಾಗಿ ಮರುಜೀವ ಪಡೆದು ವೇಗವಾಗಿ ಬೆಳೆಯುತ್ತಿರುವ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಂಪರ್ಕ ಮಾರ್ಗವಾದ ರಾಜ್ಯ ಹೆದ್ದಾರಿಯೇ ಮಗ್ಗುಲ ಮುಳ್ಳಿನಂತೆ ಕಾಡುತ್ತಿದೆ!

ಬೆಳಗಾವಿ ನಗರದಿಂದ ವಿಮಾನ ನಿಲ್ದಾಣದ ಮಾರ್ಗವಾಗಿ ಹಾದು ಹೋಗುವ ರಾಯಚೂರು-ಬಾಚಿ ರಾಜ್ಯ ಹೆದ್ದಾರಿ-20 ಇಂಥದೊಂದು ಸ್ಥಿತಿಗೆ ಬಂದು ಮುಟ್ಟಿದೆ. ಸಾಂಬ್ರಾ ವಿಮಾನ ನಿಲ್ದಾಣ ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣದಿಂದ 12 ಕಿ.ಮೀ. ದೂರದಲ್ಲಿದ್ದರೂ ಅಲ್ಲಿಗೆ ವಾಹನದಲ್ಲಿ ತಲುಪುವುದು ಅಷ್ಟು ಸಲುಭವಲ್ಲ. ರಸ್ತೆಯಲ್ಲಿನ ಅನಗತ್ಯ ಸಮಸ್ಯೆಗಳು ಸಂಚಾರ ಅವಘಡ ಸೃಷ್ಟಿಸುತ್ತಿರುವುದರಿಂದ ವಿಮಾನ ನಿಲ್ದಾಣ ಮಾರ್ಗ ಸಮಯ ನುಂಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ-4ರ ಮೇಲ್ಸೇತುವೆಯ ಕೆಳಗಿನಿಂದ ಸಾಗುವ ರಾಜ್ಯ ಹೆದ್ದಾರಿ-20ರ ಎರಡೂ ಬದಿಯಲ್ಲಿ ಲಾರಿಗಳ ಬೇಕಾಬಿಟ್ಟಿ ಪಾರ್ಕಿಂಗ್‌ ರಸ್ತೆಯ ಬಗ್ಗೆ ಜನರು ಮೂಗು ಮುರಿಯುವಂತೆ ಮಾಡಿದೆ. ಸದ್ಯದ ಸಂಚಾರ ದಟ್ಟಣೆ ಪ್ರಕಾರ ಈಗಿರುವ ರಾಜ್ಯ ಹೆದ್ದಾರಿ ವಿಸ್ತಾರ ಸಾಲದು. ಹಾಗಿದ್ದರೂ, ಅರ್ಧ ರಸ್ತೆ ಲಾರಿಗಳ ಪಾರ್ಕಿಂಗ್‌ ಪಾಲಾಗುತ್ತಿರುವುದರಿಂದ ರಸ್ತೆ ಕಿರಿದಾಗಿ ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿದೆ.

ವಾಣಿಜ್ಯ ವಾಹನಗಳೇ ಹೆಚ್ಚು: ರಾಜ್ಯ ಹೆದ್ದಾರಿಯಲ್ಲಿ ಬೆಳಗಾವಿಯಿಂದ ಸಾಂಬ್ರಾ ವರೆಗೆ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಅದರ ನಂತರ ದಟ್ಟಣೆ ಕಡಿಮೆಯಾಗುತ್ತದೆ. ಲೋಕೋಪಯೋಗಿ ಇಲಾಖೆ ಸಮೀಕ್ಷೆ ಪ್ರಕಾರ ಈ ದಾರಿಯಲ್ಲಿ ನಿತ್ಯ 21 ಸಾವಿರ ವಾಹನಗಳು ಸಂಚರಿಸುತ್ತವೆ. 3400ಕ್ಕೂ ಹೆಚ್ಚು ವಾಣಿಜ್ಯ ವಾಹನಗಳೇ ಈ ಮಾರ್ಗದಲ್ಲಿ ಓಡಾಡುತ್ತವೆ. ಇಷ್ಟು ವಾಹನಗಳಿಗೆ ಚತುಷ್ಪಥ ರಸ್ತೆ ಇದ್ದರೂ ಸಾಲದು ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು.

ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಸರ್ವಿಸ್‌ ರಸ್ತೆಗೆ ಹೊಂದಿಕೊಂಡು ಲಾರಿ ಗ್ಯಾರೇಜ್‌ಗಳು ಇವೆ. ಅವುಗಳ ಪಕ್ಕ ಲಾರಿ ನಿಲ್ಲುವುದಲ್ಲದೆ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಲಾರಿ, ಟ್ಯಾಂಕರ್‌ಗಳು ನಿಂತಿರುತ್ತವೆ. ಎಸ್‌.ಸಿ. ಮೋಟಾರ್ಸ್‌ ಬಳಿ ಈ ಸಮಸ್ಯೆ ಅತಿಯಾಗಿದೆ. ಈ ರಸ್ತೆ ದ್ವಿಪಥವಾಗಿದ್ದರಿಂದ ಎದುರಿನಿಂದ ಬರುವ ವಾಹನಗಳು ತಕ್ಷಣಕ್ಕೆ ಕಾಣುವುದಿಲ್ಲ. ಇಲ್ಲಿ ಸಾಮಾನ್ಯ ಅವಘಡಗಳೇ ಹೆಚ್ಚಾಗಿ ನಡೆದಿದ್ದರಿಂದ ಪೊಲೀಸ್‌ ದಾಖಲೆಯಲ್ಲಿ ಅಪಘಾತ ನಡೆದ ಸಂಖ್ಯೆ ಕಡಿಮೆ ಇದೆ.

ನೆನಪಾದಾಗ ಬರುವ ಪೊಲೀಸರು :
ಲಾರಿಗಳ ಪಾರ್ಕಿಂಗ್‌ನಿಂದ ರಸ್ತೆಯಲ್ಲಿ ಸಂಚಾರ ಸಮಸ್ಯೆ ಆಗುತ್ತಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆರು ತಿಂಗಳ ಹಿಂದೆಯೇ ನಗರ ಪೊಲೀಸ್‌ ಆಯುಕ್ತರಿಗೆ ಲಿಖಿತ ದೂರು ಕೊಟ್ಟಿದ್ದರು. ಆಗ ಒಂದೆರಡು ದಿನ ಪೊಲೀಸರು ಬಂದು ಹೋಗಿದ್ದರು. ಮತ್ತೆ ಅವರು ಬಾರದೆ ಇದ್ದರಿಂದ ಲಾರಿ ಪಾರ್ಕಿಂಗ್‌ ಮುಂದುವರಿದಿದೆ. ರಸ್ತೆ ಪಕ್ಕ ಲೋಕೋಪಯೋಗಿ ಇಲಾಖೆ ನೋ ಪಾರ್ಕಿಂಗ್‌ ಫಲಕ ಕೂಡ ಅಳವಡಿಸಿದೆ. ಆ ಫಲಕದ ಬಳಿಯೇ ಲಾರಿ ನಿಲ್ಲಿಸುವಷ್ಟರ ಮಟ್ಟಿಗೆ ನಿಯಮ ಮುರಿಯಲಾಗುತ್ತಿದೆ.

ಸಂಜೆ ಪಾನಿಪುರಿ ಅಡ್ಡ:
ಲಾರಿಗಳು ಅರ್ಧ ರಸ್ತೆ ನುಂಗಿರುವುದು ಒಂದೆಡೆಯಾದರೆ ಸಂಜೆಯಾಗುತ್ತಲೇ ಪಾನಿಪುರಿ ಅಂಗಡಿಗಳು ಇದೇ ರಸ್ತೆ ಪಕ್ಕ ವ್ಯಾಪಾರ ಶುರುವಿಟ್ಟುಕೊಳ್ಳುತ್ತವೆ. ಜತೆಗೆ ಇರುವ ಫುಟ್‌ಪಾತ್‌ ಮೇಲೆ ಪಕ್ಕದ ಅಂಗಡಿಗಳ ಫಲಕಗಳು ಅಡ್ಡ ನಿಂತಿರುತ್ತವೆ. ಹಾಗಾಗಿ ಪಾದಚಾರಿ ಸಂಚಾರವೂ ಇಲ್ಲಿ ದುಸ್ತರವಾಗಿ ಪದೇ ಪದೆ ಅಪಘಾತ ಸಂಭವಿಸುತ್ತಿವೆ. ಹೀಗಾದಾಗ ಈ ಮಾರ್ಗದ ವಾಹನ ಸಂಚಾರ ನಿಧಾನವಾಗಿ ಅನಗತ್ಯ ಕಿರಿಕಿರಿಯಾಗುತ್ತಿದೆ. 12 ಕಿ.ಮೀ. ಪ್ರಯಾಣಿಸುವುದಕ್ಕೂ ಅರ್ಧ ತಾಸು ಸಾಹಸ ಮಾಡಬೇಕಾಗುತ್ತದೆ ಎಂದು ವಿಮಾನ ಯಾನಿಯೊಬ್ಬರು ಸಮಸ್ಯೆ ಹೇಳಿಕೊಂಡರು.

ರಾಯಚೂರು-ಬಾಚಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಲಾರಿಗಳು ಪಾರ್ಕಿಂಗ್‌ ಮಾಡುತ್ತಿರುವುದನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಸಿಬ್ಬಂದಿ ಕೊರತೆಯಿಂದ ಅಲ್ಲಿ ಕಾಯಂ ಕಾವಲು ನೇಮಿಸಲು ಆಗುತ್ತಿಲ್ಲ. ಆದರೂ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ.
-ಯಶೋಧಾ ವಂಟಗುಡೆ, ಸಂಚಾರ ವಿಭಾಗ ಡಿಸಿಪಿ, ಬೆಳಗಾವಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ