ಬೆಳಗಾವಿ: ಹಸುಗಳಿಗೆ ಇಂಜೆಕ್ಷನ್ ನೀಡಿದರೆ ಹೆಚ್ಚು ಹಾಲು ಉತ್ಪಾದಿಸಬಹುದು ಎಂದು ನಂಬಿಸಿ ಕಾನೂನು ಬಾಹಿರವಾಗಿ 'ಆಕ್ಸಿಟೊಸಿನ್ ಇಂಜೆಕ್ಷನ್' ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳ ಸಹಾಯದಿಂದ ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇದು ಅನಧಿಕೃತ ಆಕ್ಸಿಟೊಸಿನ್ ಇಂಜೆಕ್ಷನ್ ಬಳಕೆ ವಿರುದ್ಧ ರಾಜ್ಯದಲ್ಲೇ ನಡೆದ ದೊಡ್ಡ ದಾಳಿ ಎನ್ನಲಾಗಿದೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿಸಿಪಿ ಸೀಮಾ ಲಾಟ್ಕರ್, ''ಆಕ್ಸಿಟೊಸಿನ್ ಇಂಜೆಕ್ಷನ್ ದಾಸ್ತಾನು ಮಾಡಿದ್ದ ಬೆಳಗಾವಿ ನಗರದ ಕೊನವಾಳ ಗಲ್ಲಿಯ ಗಂಗಾಧರ ಸಿದ್ಧಪ್ಪ ಗವಳಿ (42) ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನ ಮನೆಯಿಂದ 100 ಎಂಎಲ್ ಆಕ್ಸಿಟೊಸಿನ್ ಔಷಧ ಹೊಂದಿರುವ 250 ಬಾಟಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ'', ಎಂದು ತಿಳಿಸಿದರು.
''ವೈದ್ಯರ ಸಲಹೆ ಇಲ್ಲದೆ ಮಾರಾಟ ನಿಷೇಧವಿರುವ ಇಂಜೆಕ್ಷನ್ನನ್ನು ಆರೋಪಿ ಗಂಗಾಧರ ಮಹಾರಾಷ್ಟ್ರದ ಪುಣೆಯಿಂದ ತರಿಸಿಕೊಳ್ಳುತ್ತಿದ್ದ. ಇಂಜೆಕ್ಷನ್ ಬಳಸಿದರೆ ಜಾನುವಾರುಗಳಿಂದ ಹೆಚ್ಚು ಹಾಲು ಉತ್ಪಾದನೆಯಾಗುತ್ತದೆ ಎಂದು ಜನರನ್ನು ನಂಬಿಸಿ ಪ್ರತಿ 100 ಎಂಎಲ್ಗೆ 30 ರೂ.ಗೆ ಖರೀದಿಸಿ ತಂದ ಇಂಜೆಕ್ಷನ್ನನ್ನು ಬೆಳಗಾವಿ ಮತ್ತು ಸುತ್ತಮುತ್ತಲಿನ ರೈತರು, ಗವಳಿ ಸಮುದಾಯದ ಜನರಿಗೆ 120 ರೂ.ಗೆ ಮಾರಾಟ ಮಾಡುತ್ತಿದ್ದ. ಬಂಧಿತನಿಂದ ಪಡೆದ ಪ್ರಾಥಮಿಕ ಮಾಹಿತಿ ಆಧರಿಸಿ ತನಿಖೆ ಚುರುಕುಗೊಳಿಸಲಾಗುವುದು. ಇಷ್ಟರಲ್ಲೇ ಇನ್ನಷ್ಟು ಜನರನ್ನು ಬಂಧಿಸಿ ಇದರ ಹಿಂದಿರುವ ಜಾಲ ಭೇದಿಸಲಾಗುವುದು'', ಎಂದು ವಿವರಿಸಿದರು.
''ಜಿಲ್ಲೆಯಲ್ಲಿ ಆಕ್ಸಿಟೊಸಿನ್ ಇಂಜೆಕ್ಷನ್ ಅನಧಿಕೃತ ಬಳಕೆ ಕುರಿತು ಆರು ತಿಂಗಳ ಹಿಂದೆಯೇ ಜಿಲ್ಲಾ ಔಷಧ ಮತ್ತು ಕಾಂತಿವರ್ಧಕ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು. ಸ್ವತಃ ಇಲಾಖೆ ಸಿಬ್ಬಂದಿಯನ್ನು ಗೌಪ್ಯವಾಗಿ ಕಳುಹಿಸಿ, ಔಷಧ ಖರೀದಿಸಿ, ಪ್ರಯೋಗಾಲಯ ಮೂಲಕ ಇಂಜೆಕ್ಷನ್ನಲ್ಲಿ ಆಕ್ಸಿಟೊಸಿನ್ ಇರುವುದನ್ನು ಖಚಿತಪಡಿಸಿಕೊಂಡು ನಂತರ ಪೊಲೀಸ್ ಅಧಿಕಾರಿಗಳ ಸಹಾಯದಿಂದ ದಾಳಿ ನಡೆಸಲಾಯಿತು. ದಾಳಿ ಸಂದರ್ಭದಲ್ಲಿ ಲೇಬಲ್ ಇಲ್ಲದ ಒಟ್ಟು 73 ಸಾವಿರ ರೂ.ಮೌಲ್ಯದ 250 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ'', ಎಂದು ಡಿಸಿಪಿ ಸೀಮಾ ಲಾಟ್ಕರ್ ತಿಳಿಸಿದರು.
ಉಪಔಷಧ ನಿಯಂತ್ರಕ ದೀಪಕ್ ಗಾಯಕವಾಡ, ಸಹಾಯಕ ಔಷಧ ನಿಯಂತ್ರಕರಾದ ರಾಜಶೇಖರ ಮಲ್ಲಿ, ಎನ್.ವಿ.ರಘುರಾಂ, ಎ.ಎಂ. ಸನೋಫರ್ಜಾನ್, ಸಿಸಿಬಿ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು.
ಬಂಧಿತ ಗಂಗಾಧರ ಗವಳಿ ಮನೆಯಲ್ಲಿ 52 ಹಸು ಸಾಕಾಣಿಕೆ ಮಾಡಲಾಗಿದೆ. ಆ ಹಸುಗಳಿಗೆ ಇಂಜೆಕ್ಷನ್ ನೀಡಿರುವ ಕುರಿತು ಪರೀಕ್ಷೆ ನಡೆಯಬೇಕು. ಅಲ್ಲದೆ, ಗಂಗಾಧರ ಮೂಲಕ ಔಷಧ ಎಲ್ಲಿ ಮಾರಾಟಗೊಂಡಿದೆ ಎನ್ನುವ ಮಾಹಿತಿ ಆಧರಿಸಿ ಮುಂದಿನ ತನಿಖೆ ನಡೆಯಲಿದೆ ಎಂದು ಡಿಸಿಪಿ ಸೀಮಾ ಲಾಟ್ಕರ್ ಹೇಳಿದರು.
ಏನಿದು ಆಕ್ಸಿಟೊಸಿನ್
''ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ ಅಡಿಯಲ್ಲಿ 'ಆಕ್ಸಿಟೊಸಿನ್ ಇಂಜೆಕ್ಷನ್' ಅನುಸೂಚಿ ಎಚ್ ಮಾದರಿಯ ಔಷಧ. ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಹೆರಿಗೆ ಸುಲಲಿತವಾಗಲೆಂದು ವೈದ್ಯರು ಮಾತ್ರ ಆಕ್ಸಿಟೊಸಿನ್ ಇಂಜೆಕ್ಷನ್ ಬಳಕೆ ಮಾಡುತ್ತಾರೆ. ಈಚೆಗೆ ಅದೇ ಔಷಧವನ್ನು ಪ್ರಾಣಿಗಳಿಗೆ ನೀಡಿ ಹೆಚ್ಚು ಹಾಲು ಉತ್ಪಾದನೆ ನೆಪದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಆಕ್ಸಿಟೊಸಿನ್ ಇಂಜೆಕ್ಷನ್ ಬಳಕೆಯಿಂದ ಹಾಲು ರಭಸವಾಗಿ ಬರುತ್ತದೆ ಹೊರತು ಹೆಚ್ಚು ಉತ್ಪಾದನೆಯಾಗುವುದಿಲ್ಲ. ಔಷಧದ ಸತತ ಬಳಕೆ ಪ್ರಾಣಿಗಳ ಗರ್ಭಾಶಯಕ್ಕೆ ಧಕ್ಕೆ ತರುತ್ತದೆ. ಹಸುಗಳಲ್ಲಿ ಶೀಘ್ರ ಬಂಜೆತನ ಬರುವುದಲ್ಲದೆ ಜೀವಿತಾವಧಿಯನ್ನೂ ಕಡಿಮೆಗೊಳಿಸುತ್ತದೆ. ಹಸುಗಳ ಸಂತತಿ ಕೂಡ ನಶಿಸುವ ಸಾಧ್ಯತೆ ಹೆಚ್ಚು.
ಆಕ್ಸಿಟೊಸಿನ್ ಮಿಶ್ರಿತ ಹಾಲು ಸೇವಿಸುವುದರಿಂದ ಮಕ್ಕಳಲ್ಲಿ ಕ್ಯಾನ್ಸರ್ ರೋಗ ಕಾಣಿಸಿಕೊಳ್ಳುತ್ತದೆ. ಶಿಶುಗಳಲ್ಲಿ ಕಾಮಾಲೆ ರೋಗಕ್ಕೂ ಕಾರಣವಾಗುವುದಲ್ಲದೆ ಮೆದುಳಿಗೆ ರಕ್ತ ಪೂರೈಕೆಯನ್ನು ಕಡಿಮೆಗೊಳಿಸುತ್ತದೆ. ಕ್ರಮೇಣ ಸ್ತನ ಮತ್ತು ಗರ್ಭಾಶಯ ಕ್ಯಾನ್ಸರ್ಗೂ ಕಾರಣವಾಗುವುದಲ್ಲದೆ ಪುರುಷರಲ್ಲಿ ದೌರ್ಬಲ್ಯ ಮತ್ತು ಹೆಣ್ಣುಮಕ್ಕಳಲ್ಲಿ ಆರಂಭಿಕ ಪ್ರೌಢಾವಸ್ಥೆಯ ಗುಣಲಕ್ಷಣಗಳು, ಅವಧಿಪೂರ್ವ ಋುತುಮತಿಯಾಗುವ ಅಪಾಯವಿರುತ್ತದೆ. ಇಂತಹ ಅನೇಕ ಕಾರಣಗಳಿಂದ 2014ರ ಜ.17ರಿಂದ ಆಕ್ಸಿಟೊಸಿನ್ ಇಂಜೆಕ್ಷನ್ನÜನ್ನು ಪಶು ಆಸ್ಪತ್ರೆಗಳಲ್ಲಿ ಮಾತ್ರ ಬಳಕೆಗೆ ಅಧಿಸೂಚನೆ ಹೊರಡಿಸಲಾಗಿದೆ'', ಎಂದು ಔಷಧ ಮತ್ತು ಕಾಂತಿವರ್ಧಕ ಇಲಾಖೆ ಉಪಔಷಧ ನಿಯಂತ್ರಕ ದೀಪಕ್ ಗಾಯಕವಾಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.