ಆ್ಯಪ್ನಗರ

ಪ್ರೇಮಿಗಳ ಜೀವನ ಸಾವಿನಲ್ಲಿ ಅಂತ್ಯ

ಮನೆ ಬಿಟ್ಟು ಓಡಿ ಹೋಗಿದ್ದ ಪ್ರೇಮಿಗಳಿಬ್ಬರ ಜೀವನ ಸಾವಿನೊಂದಿಗೆ ಅಂತ್ಯಗೊಂಡಿದ್ದು, ಹೊಲದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

Vijaya Karnataka 16 May 2019, 5:00 am
ತೆಲಸಂಗ: ಮನೆ ಬಿಟ್ಟು ಓಡಿ ಹೋಗಿದ್ದ ಪ್ರೇಮಿಗಳಿಬ್ಬರ ಜೀವನ ಸಾವಿನೊಂದಿಗೆ ಅಂತ್ಯಗೊಂಡಿದ್ದು, ಹೊಲದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
Vijaya Karnataka Web BEL-15TELSANG4


ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ವಿವಾಹಿತೆ ಸುಪ್ರೀತಾ ಸಿದ್ಧಪ್ಪ ಕೊಂಡಿ (21) ಹಾಗೂ ಅದೇ ಗ್ರಾಮದ ಅಲ್ಲಾಭಕ್ಷ ಇಬ್ರಾಹಿಂ ಸನದಿ (23) ಮೃತಪಟ್ಟವರು. ಇವರು ವಾರದ ಹಿಂದೆ ಮನೆ ಬಿಟ್ಟು ಓಡಿ ಹೋಗಿದ್ದರು.

ತೆಲಸಂಗ ಸಮೀಪದ, ವಿಜಯಪುರ ಜಿಲ್ಲೆ ತಿಕೋಟಾ ಪೊಲೀಸ್‌ ಠಾಣೆ ವ್ಯಾಪ್ತಿಯ ಬನ್ನೂರ -ಕೊಟ್ಟಲಗಿ ಮಧ್ಯದ ಗದ್ದೆಯ ಬೇವಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಲ್ಲಾಭಕ್ಷ ಹಾಗೂ ಸುಪ್ರೀತಾ ಶವ ಬುಧವಾರ ಪತ್ತೆಯಾಗಿದೆ. ಅಲ್ಲಾಭಕ್ಷ ಅವರ ಪೋಷಕರು, ಇದು ಆತ್ಮಹತ್ಯೆಯಲ್ಲ. ಈ ಕುರಿತು ತನಿಖೆ ಕೈಗೊಂಡು ಸತ್ಯ ಬಯಲು ಮಾಡಬೇಕೆಂದು ತಿಕೋಟಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯಪುರದ ಡಿವೈಎಸ್‌ಪಿ ಪಿ.ಅಶೋಕ್‌, ಗ್ರಾಮೀಣ ಸಿಪಿಐ ಶಂಕರಗೌಡ ಪಾಟೀಲ, ಅಥಣಿ ಸಿಪಿಐ ಅಲಿಸಾಬ, ಐಗಳಿ ಪಿಎಸ್‌ಐ ರಮೇಶ ಆವಜಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬಾಲ್ಯ ವಿವಾಹದ ದೂರು
''ನನಗೆ ಪಾಲಕರು ಬಾಲ್ಯ ವಿವಾಹ ಮಾಡಿದ್ದಾರೆ. ಆ ಮದುವೆ ನನಗೆ ಇಷ್ಟವಿಲ್ಲ. ನಾನು ಅಲ್ಲಾಭಕ್ಷ ನನ್ನು ಪ್ರೀತಿಸುತ್ತಿದ್ದೇನೆ. ಹಿರಿಯರು ಮಾಡಿದ ಮದುವೆಯಿಂದ ಬಿಡುಗಡೆಗೊಳಿಸಿ, ಸ್ವ ಇಚ್ಛೆಯಿಂದ ಒಪ್ಪಿಕೊಂಡಿರುವ ಅಲ್ಲಾಭಕ್ಷ ನೊಂದಿಗೆ ಮದುವೆ ಮಾಡಿಕೊಳ್ಳಲು ಅವಕಾಶ ನೀಡಬೇಕು'' ಎಂದು ಸುಪ್ರೀತಾ ಈ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿ ಆಧರಿಸಿ ಐಗಳಿ ಪೊಲೀಸ್‌ ಠಾಣೆಯಲ್ಲಿ ಬಾಲ್ಯವಿವಾಹ ಪ್ರಕರಣವೂ ದಾಖಲಾಗಿತ್ತು.

ಓಡಿಹೋಗಿದ್ದೇಕೆ?
ವಿಜಯಪುರದ ಶಾಲೆಯೊಂದರಲ್ಲಿ ಅರೆಕಾಲಿಕ ಶಿಕ್ಷ ಕರಾಗಿ ಸೇವೆ ಸಲ್ಲಿಸುತ್ತಿದ್ದ ಅಲ್ಲಾಭಕ್ಷ , ಸುಪ್ರೀತಾ ಅವರನ್ನು ಮದುವೆಯಾಗಲು ಬಯಸಿದ್ದರು ಎನ್ನಲಾಗಿದೆ. ಆದರೆ, ಮದುವೆಗೆ ಸುಪ್ರೀತಾ ಮನೆಯರು ಒಪ್ಪಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ರಿಜಿಸ್ಟರ್‌ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು. ಸುಪ್ರೀತಾ ವಿವಾಹಿತೆಯಾಗಿದ್ದರಿಂದ ಕಾನೂನು ತೊಡಕು ಎದುರಾಗುವ ಹಿನ್ನೆಲೆಯಲ್ಲಿ ಇಬ್ಬರೂ ಓಡಿ ಹೋಗಿದ್ದರುಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ