ಆ್ಯಪ್ನಗರ

ಚನ್ನಮ್ಮ ನಾಡಲ್ಲಿ ಮೊಳಗಿತು ವಿಜಯದುಂದುಭಿ

ಚನ್ನಮ್ಮ ಕಿತ್ತೂರು (ಬೆಳಗಾವಿ): ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ...

Vijaya Karnataka 24 Oct 2019, 5:00 am
ಚನ್ನಮ್ಮ ಕಿತ್ತೂರು (ಬೆಳಗಾವಿ): ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ರಾಣಿ ಚನ್ನಮ್ಮಾಜಿಯ ವಿಜಯೋತ್ಸವ ನಿಮಿತ್ತ ಆಯೋಜಿಸಲಾಗಿರುವ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ ದೊರೆಯಿತು. ಬಿಸಿಲು-ಮಳೆಯ ಕಣ್ಣಾಮುಚ್ಚಾಲೆ ಮಧ್ಯೆ ಜಾನಪದ ಕಲಾತಂಡಗಳ ಪ್ರದರ್ಶನ ಜನಮನಸೂರೆಗೊಂಡವು.
Vijaya Karnataka Web 23 LBS 9_53


ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿಬೆಳಗ್ಗೆ 11 ಗಂಟೆಗೆ ಬೈಲಹೊಂಗಲದ ಚನ್ನಮ್ಮ ಸಮಾಧಿಯಿಂದ ಆಗಮಿಸಿದ ವೀರ ಜ್ಯೋತಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್‌ ಶೆಟ್ಟರ್‌ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿದರು. ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಜಾನಪದ ಕಲಾವಾಹಿನಿ ಮೆರವಣಿಗೆಗೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ನಂತರ ಚನ್ನಮ್ಮ ಕಿತ್ತೂರಿನ ಮಹಾದ್ವಾರದ ಎರಡು ಬದಿಯಲ್ಲಿಇರುವ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಕಂಚಿನ ಪುತ್ಥಳಿಗಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಶಾಸಕ ಮಹಾಂತೇಶ ದೊಡಗೌಡರ, ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ, ಎಸ್ಪಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.

ಚನ್ನಮ್ಮ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿಕಿತ್ತೂರ ತಾಲೂಕಿನ ಅನೇಕ ಸ್ತ್ರೀಶಕ್ತಿ ಸಂಘಟನೆಗಳ ಸದಸ್ಯರು ಕುಂಭ ಹೊತ್ತು ಸಾಗಿದರು. ಜಿಲ್ಲೆಯ 35 ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 16 ಕಲಾ ತಂಡಗಳು ಮೆರವಣಿಗೆಯಲ್ಲಿಪಾಲ್ಗೊಂಡು ಉತ್ಸವದ ಕಳೆ ಹೆಚ್ಚಿಸಿದವು.

ಕಿತ್ತೂರು ತಾಲೂಕಿನ ಯುವಜನರು, ಹಿರಿಯರು ಸಹಸ್ರಾರು ಸಂಖ್ಯೆಯಲ್ಲಿಮೆರವಣಿಗೆಯಲ್ಲಿಭಾಗವಹಿಸಿದರು. ಕಿತ್ತೂರು ಪಟ್ಟಣದ ನಿವಾಸಿಗಳು ತಮ್ಮ ಮನೆಗಳ ಮುಂದೆ ಚಿತ್ತಾರದ ರಂಗೋಲಿ ಬಿಡಿಸಿ ಅತಿಥಿಗಳು, ಕಲಾವಿದರಿಗೆ ಸ್ವಾಗತ ಕೋರಿದರು.

ಕಲಾ ತಂಡಗಳ ವೈಭವ:
ಲಮಾಣಿ ಮಹಿಳೆಯರ ನೃತ್ಯ, ತುಮಕೂರು ಜಿಲ್ಲೆಯ 10 ಜನರ ತಂಡದ ನಾಸಿಕ ಡೋಲು, ಭೀಮರಾವ್‌ ಭಜಂತ್ರಿ ನೇತೃತ್ವದ 12 ಜನರ ತಂಡದ ಚರ್ಮವಾದ್ಯ, ರಾಯಬಾಗದ 22 ಜನರ ಎರಡು ತಂಡಗಳ ಜಾಂಜ್‌ ಪಥಕ್‌, ಶಿವಮೊಗ್ಗ ಜಿಲ್ಲೆಯ ಮಹಿಳಾ ಡೊಳ್ಳು ಕುಣಿತ ಸೇರಿ ವೀರಗಾಸೆ, ತಾಸೆ ವಾದನ, ಗೊಂಬೆ ಕುಣಿತ, ಜಗ್ಗಲಿಗೆ, ಹಲಗೆ ವಾದನ, ಕೋಲಾಟ, ನಂದಿಕೋಲು, ನಾನಾ ವೇಷಧಾರಿಗಳು ನಾಡಿನ ಕಲಾ ವೈಭವವನ್ನು ಅನಾವರಣಗೊಳಿಸಿದರು.

ತುಂತುರು ಮಳೆ ಸಿಂಚನ:
ಕಿತ್ತೂರಿನಲ್ಲಿಬುಧವಾರ ಬೆಳಗ್ಗೆಯವರೆಗೂ ಮಳೆ ಸುರಿಯುತ್ತಿದ್ದರಿಂದ ಉತ್ಸವಕ್ಕೆ ಅಡಚಣೆ ಉಂಟಾಗುವ ಆತಂಕ ಎಲ್ಲರಲ್ಲಿತ್ತು. ವೀರಜ್ಯೋತಿ ಸ್ವಾಗತ ಹಾಗೂ ಜಾನಪದ ಕಲಾ ತಂಡಗಳ ಮೆರವಣಿಗೆ ಸಮಯದಲ್ಲಿತುಂತುರು ಮಳೆ ಇದ್ದಿದ್ದರಿಂದ ಜನರ ಹಾಗೂ ಕಲಾತಂಡಗಳ ಉತ್ಸಾಹ ಕುಂದಲಿಲ್ಲ. ಕಿತ್ತೂರು ಕೋಟೆವರೆಗೆ ನಿರ್ವಿಘ್ನ ಮೆರವಣಿಗೆ ಜರುಗಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ