ಆ್ಯಪ್ನಗರ

ಕೃಷ್ಣಾ ನದಿಗೆ ಹಿಡಕಲ್‌ ಡ್ಯಾಂನಿಂದ ನೀರು

ಬೆಳಗಾವಿ : ಕುಡಿಯುವ ನೀರು ಬಿಡುಗಡೆ ವಿಚಾರವಾಗಿ ಮಹಾರಾಷ್ಟ್ರ ಸರಕಾರ ಹಿಂದೇಟು ಹಾಕುತ್ತಿರುವುದರಿಂದ ...

Vijaya Karnataka 19 May 2019, 5:00 am
ಬೆಳಗಾವಿ : ಕುಡಿಯುವ ನೀರು ಬಿಡುಗಡೆ ವಿಚಾರವಾಗಿ ಮಹಾರಾಷ್ಟ್ರ ಸರಕಾರ ಹಿಂದೇಟು ಹಾಕುತ್ತಿರುವುದರಿಂದ ಹಿಡಕಲ್‌ ಜಲಾಶಯದ 1 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಸಲು ಸರಕಾರ ನಿರ್ಧರಿಸಿದೆ.
Vijaya Karnataka Web BEL-18 KAGWAD 2 NEWS PHOTO


ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದಾರೆ.

''ರಾಜ್ಯದ ನೀರಿನ ಬೇಡಿಕೆಗೆ ಮಹಾರಾಷ್ಟ್ರ ಸರಕಾರ ಒಪ್ಪಂದದ ಷರತ್ತು ವಿಧಿಸಿತ್ತು. ನೀತಿ ಸಂಹಿತೆ ಸಡಿಲಿಕೆ ನಂತರ ಒಪ್ಪಂದ ಮಾಡಿಕೊಡುವ ಭರವಸೆ ನೀಡಿದರೂ ಮಹಾರಾಷ್ಟ್ರ ಸರಕಾರ ನೀರು ಹರಿಸಲು ಹಿಂದೇಟು ಹಾಕಿದೆ. ಹೀಗಾಗಿ, ಘಟಪ್ರಭಾ ನದಿಯ ಹಿಡಕಲ್‌ ಜಲಾಶಯದಿಂದಲೇ ಕೃಷ್ಣೆಗೆ ತುರ್ತು ನೀರು ಹರಿಸಲು ಕ್ರಮ ವಹಿಸಲಾಗಿದೆ. ಇದರಿಂದ ಅಥಣಿ ಮತ್ತು ಕಾಗವಾಡ ತಾಲೂಕಿನ ಜನರಿಗೆ ಅನುಕೂಲ'', ಎಂದರು.

ತುರ್ತು ಸಭೆ: ಸಚಿವ ಡಿ.ಕೆ. ಶಿವಕುಮಾರ್‌ ಸೂಚನೆ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಪ್ರಾದೇಶಿಕ ಆಯುಕ್ತ ತುಷಾರ್‌ ಗಿರಿನಾಥ್‌ ಕೂಡ ಸಂಬಂಧಿಸಿದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ''ಹಿಡಕಲ್‌ ಜಲಾಶಯದಲ್ಲಿ ಸಂಗ್ರಹವಿರುವ 4 ಟಿಎಂಸಿ ನೀರಿನಲ್ಲಿ 1 ಟಿಎಂಸಿಯನ್ನು ಘಟಪ್ರಭಾ ಕಾಲುವೆ ಮೂಲಕ ಕೃಷ್ಣಾ ನದಿಗೆ ಹರಿಬಿಡಲು ಆಯುಕ್ತರು ಸೂಚನೆ ನೀಡಿದ್ದು, ಸೋಮವಾರದಿಂದ ನೀರು ಬಿಡುಗಡೆಯಾಗಲಿದೆ'', ಎಂದು ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್‌ ಅರವಿಂದ್‌ ಕಣಗಲಿ ಮಾಹಿತಿ ನೀಡಿದ್ದಾರೆ.

ಮೊದಲ ಪ್ರಯತ್ನ: ಹಿಡಕಲ್‌ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವ ಪ್ರಯತ್ನ ಇದೇ ಮೊದಲಾಗಿದ್ದು, ಸಾಕಷ್ಟು ಸವಾಲು ಎದುರಿಸುವ ಅನಿವಾರ್ಯತೆ ಇದೆ. ನೀರು ಹರಿಯುವ ಸಂದರ್ಭದಲ್ಲಿ ಅಕ್ರಮವಾಗಿ ಪಂಪ್‌ಸೆಟ್‌ಗಳ ಮೂಲಕ ನೀರು ಬಳಸುವುದನ್ನು ತಡೆಗಟ್ಟಲು ಪೊಲೀಸ್‌, ಹೆಸ್ಕಾಂ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ದಂಡಾಧಿಕಾರ ಚಲಾಯಿಸಲು ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದ್ದಾರೆ. ನೀರು ಹರಿಯುವ ಸಂದರ್ಭದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದು ಮತ್ತು ಕಾಲುವೆ ಗೇಟ್‌ ತೆರೆಯದಂತೆ ಪೊಲೀಸರು ಕಟ್ಟೆಚ್ಚರಿಕೆ ವಹಿಸಲೂ ಆಯುಕ್ತರು ತಿಳಿಸಿದ್ದಾರೆ.

ಜೂನ್‌ನಲ್ಲಿ ಸವಾಲು :
ಈಗಾಗಲೆ ನಿರ್ಧರಿಸಿದಂತೆ, ಮೇ 24ರಿಂದ ಬಾಗಲಕೋಟೆ ಮತ್ತು ಮುಧೋಳ ತಾಲೂಕುಗಳಿಗೆ 2.1 ಟಿಎಂಸಿ ನೀರು ಹರಿಬಿಡಬೇಕಿದೆ. ಜತೆಗೆ ಬೆಳಗಾವಿ ಮತ್ತು ಹುಕ್ಕೇರಿ, ಸಂಕೇಶ್ವರ ಪಟ್ಟಣದ ಕುಡಿಯುವ ಉದ್ದೇಶಕ್ಕೆ 1ಟಿಎಂಸಿ ನೀರು ಕಾಯ್ದಿರಿಸಲಾಗಿದೆ. ಇದೆಲ್ಲದರ ನಂತರ ಜಲಾಶಯದಲ್ಲಿ ಡೆಡ್‌ ಸ್ಟೋರೆಜ್‌ ಮಾತ್ರ ಇರುವುದರಿಂದ ಜೂನ್‌ ತಿಂಗಳಲ್ಲಿ ಮಳೆಯನ್ನೇ ಎದುರು ನೋಡುವ ಪರಿಸ್ಥಿತಿ ಸೃಷ್ಟಿಯಾಗಿದೆ.

ತಲುಪಲು 4-5 ದಿನ ಬೇಕು :
ಹಿಡಕಲ್‌ ಜಲಾಶಯದಿಂದ ಸೋಮವಾರ ನೀರು ಹರಿಸಿದರೆ ಕಾಲುವೆ ಮೂಲಕ ಕೃಷ್ಣಾ ನದಿ ಮುಟ್ಟಲು ನಾಲ್ಕೈದು ದಿನ ಬೇಕಾಗುತ್ತದೆ ಎನ್ನುವುದು ನೀರಾವರಿ ಇಲಾಖೆ ಅಧಿಕಾರಿಗಳ ಮಾತು. ಆದರೆ, ಕಾಲುವೆಗಳು ಸಂಪೂರ್ಣವಾಗಿ ಒಣಗಿರುವುದರಿಂದ ಇನ್ನೂ ಹೆಚ್ಚಿನ ದಿನಗಳು ಬೇಕಾಗಬಹುದು ಎನ್ನಲಾಗುತ್ತಿದೆ. ಹಿಡಕಲ್‌ ಡ್ಯಾಂನಿಂದ ಬಿಡುಗಡೆ ಮಾಡುವ ನೀರು ಮೊದಲು 22 ಕಿ.ಮೀ. ಮುಖ್ಯ ಕಾಲುವೆಯ ಮೂಲಕ ಧುಪದಾಳ ಮುಟ್ಟುತ್ತದೆ. ಅಲ್ಲಿಂದ 50 ಕಿ.ಮೀ .ಕಾಲುವೆಯ ಮೂಲಕ ಮುಗಳಖೋಡ ವಿತರಣಾ ಕೇಂದ್ರ ತಲುಪಬೇಕು. ನಂತರ 22 ಕಿಮೀ ಕ್ರಮಿಸಿ ಅಥಣಿ ತಾಲೂಕಿನ ಶೇಗುಣಸಿ ಮುಟ್ಟಬೇಕು. ಒಟ್ಟಾರೆ 94 ಕಿಮೀ ವರೆಗೂ ನೀರು ಸಾಗಿದ ನಂತರ ಘಟಪ್ರಭೆ ಕೃಷ್ಣೆಯ ಒಡಲು ಸೇರುತ್ತಾಳೆ.

ಫಲ ನೀಡಿದ 'ಶ್ರೀಮಂತ' ಪ್ರಯತ್ನ
ಕಾಗವಾಡ :
ಕೃಷ್ಣಾ ನದಿಗೆ ನೀರು ಹರಿಸುವ ವಿಚಾರವಾಗಿ ಕೆಲ ದಿನಗಳಿಂದ ಬೆಂಗಳೂರಿನಲ್ಲಿದ್ದು ಸಿಎಂ ಸಹಿತ ಮಂತ್ರಿಗಳು, ಅಧಿಕಾರಿಗಳನ್ನು ಭೇಟಿಯಾಗುತ್ತಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ನೇತೃತ್ವದ ನಿಯೋಗದ ಪ್ರಯತ್ನ ಕೊನೆಗೂ ಫಲ ನೀಡಿದೆ.

''ನೀರು ಬಿಡಲು ಮಹಾರಾಷ್ಟ್ರದ ನಿರಾಕರಣೆ ಹಾಗೂ ನದಿಪಾತ್ರದ ಜನರ ಬವಣೆಯನ್ನು ಸಿಎಂ, ಜಲಸಂಪನ್ಮೂಲ ಸಚಿವರಿಗೆ ಮನವರಿಕೆ ಮಾಡಿದ್ದರಿಂದ ಅವರು ಹಿಡಕಲ್‌ ಜಲಾಶಯದಿಂದ ನೀರು ಹರಿಸುವ ನಿರ್ಧಾರ ಕೈಗೊಂಡಿದ್ದಾರೆ'', ಎಂದು ಶ್ರೀಮಂತ ಪಾಟೀಲ ದೂರವಾಣಿ ಮೂಲಕ 'ವಿಕ'ಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ