ಆ್ಯಪ್ನಗರ

ತರಕಾರಿ ಸಗಟು ಮಾರುಕಟ್ಟೆ ಶುರು

ಬೆಳಗಾವಿ: ನಿರೀಕ್ಷೆಯಂತೆ ಇಲ್ಲಿನ ಎಪಿಎಂಸಿ ಆವರಣದಲ್ಲಿ ತರಕಾರಿ ...

Vijaya Karnataka 15 May 2019, 5:00 am
ಬೆಳಗಾವಿ : ನಿರೀಕ್ಷೆಯಂತೆ ಇಲ್ಲಿನ ಎಪಿಎಂಸಿ ಆವರಣದಲ್ಲಿ ತರಕಾರಿ ಸಗಟು ಮಾರುಕಟ್ಟೆ ಸಂಕೀರ್ಣ ಮಂಗಳವಾರ ವಿಧ್ಯುಕ್ತವಾಗಿ ಆರಂಭಗೊಂಡಿದ್ದು, ಜಿಲ್ಲೆಯ ತರಕಾರಿ ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ.
Vijaya Karnataka Web BLG-1405-2-52-14RAJU-2


ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗಕ್ಕೆ ಮುಖ್ಯ ಮಾರುಕಟ್ಟೆಯಾಗಿರುವ ಇಲ್ಲಿಗೆ ಮಹಾರಾಷ್ಟ್ರದ ಕರಾಡದಿಂದ ಟೋಮ್ಯಾಟೋ, ಸಾಂಗ್ಲಿಯಿಂದ ಡಬ್ಬು ಮೆಣಸಿನಕಾಯಿ, ಚಂದಗಡದಿಂದ ಹಸಿಮೆಣಸಿನಕಾಯಿ, ರಾಜ್ಯದ ಕಿತ್ತೂರು, ಖಾನಾಪುರ, ಗೋಕಾಕ, ಯಮಕನಮರಡಿ, ನಿಪ್ಪಾಣಿ, ಕಡೋಲಿ ಮತ್ತಿತರ ಕಡೆಗಳಿಂದ ತರಹೇವಾರಿ ತರಕಾರಿ ಬರುತ್ತವೆ. ಇಲ್ಲಿಂದ ಮತ್ತೆ ಗೋವಾ, ಪುಣೆ, ಮುಂಬೈ ಹಾಗೂ ರಾಜ್ಯದ ಇತರೆ ಮಹಾನಗರಗಳಿಗೆ ಹೋಗುತ್ತದೆ.

ರಾಜ್ಯದಲ್ಲಿ ತರಕಾರಿ ಮಾರಾಟಕ್ಕೆ 2ನೇ ಸ್ಥಾನದಲ್ಲಿರುವ ಈ ಮಾರುಕಟ್ಟೆ ಇಲ್ಲಿಯವರೆಗೆ ಖಾಸಗಿಯವರ ಹಿಡಿತದಲ್ಲಿದ್ದದ್ದು ಅನೇಕ ಆರೋಪಗಳಿಗೆ ಕಾರಣವಾಗಿತ್ತು. ಎಪಿಎಂಸಿಯೇ ನಡೆಸಬೇಕೆಂಬ ಒತ್ತಾಯಗಳು ಇದ್ದವು. ಇದರಿಂದ ಎಪಿಎಂಸಿ ಆಡಳಿತ 4-5 ವರ್ಷಗಳ ಹಿಂದೆ 69 ಕೋಟಿ ರೂ.ಗಳ ಯೋಜನೆ ರೂಪಿಸಿ ಕಾರ್ಯಗತ ಮಾಡಿದೆ. ಸಚಿವ ಸತೀಶ್‌ ಜಾರಕಿಹೊಳಿ ಇದಕ್ಕೆ ಚಾಲನೆ ಕೊಟ್ಟಿದ್ದರು. ಶಿವನಗೌಡ ಪಾಟೀಲ ಅಧ್ಯಕ್ಷರಿದ್ದಾಗ 25.5 ಕೋಟಿ ರೂ.ಗಳ ಕಾಮಗಾರಿ ಎರಡು ವರ್ಷಗಳ ಹಿಂದೆಯೇ ಪೂರ್ಣಗೊಂಡಿದ್ದರೂ, ಫೋರ್ಟ್‌ ರಸ್ತೆಯಲ್ಲಿರುವ ಕಂಟೋನ್ಮೆಂಟ್‌ ಜಾಗದಲ್ಲಿ ಖಾಸಗಿ ವ್ಯಾಪಾರಿಗಳು ನಡೆಸುತ್ತಿದ್ದ ತರಕಾರಿ ಮಾರುಕಟ್ಟೆ ಸ್ಥಳಾಂತರಗೊಳ್ಳದ್ದಕ್ಕೆ ಮಳಿಗೆಗಳು ಉಪಯೋಗವಾಗದೆ ಖಾಲಿ ಉಳಿದಿದ್ದವು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಜಿ. ಪ್ರಭು ಅವರು ತರಕಾರಿ ಮಾರುಕಟ್ಟೆ ಆರಂಭಿಸಲು ನಿರ್ದೇಶನ ನೀಡಿದ್ದರು. ಇದರ ಫಲವಾಗಿ ಈಗಿನ ಆಡಳಿತ ಮಂಡಳಿ ಕೆಲ ವ್ಯಾಪಾರಿಗಳ ವಿರೋಧವನ್ನು ಲೆಕ್ಕಕ್ಕೆ ತಗೆದುಕೊಳ್ಳದೆ ಕಂಟೋನ್ಮೆಂಟ್‌ ಜಾಗದಲ್ಲಿದ್ದ ಹಳೇ ಭಾಜಿ ಮಾರುಕಟ್ಟೆಯನ್ನು ಸ್ಥಳಾಂತರಗೊಳಿಸುವ ಜತೆಗೆ ಹೊಸ ಸ್ಥಳದಲ್ಲಿ ತರಕಾರಿ ವಹಿವಾಟನ್ನು ಭರ್ಜರಿಯಾಗಿ ಆರಂಭಿಸಿದೆ.

ಸರಳವಾಗಿ ನಡೆದ ತರಕಾರಿ ಮಾರುಕಟ್ಟೆ ಉದ್ಘಾಟನೆ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಅನಂತ ಪಾಟೀಲ, ಉಪಾಧ್ಯಕ್ಷ ಸುಧೀರ ಗಡ್ಡಿ, ಸದಸ್ಯರಾದ ಮನೋಜ್‌ ಮತ್ತಿಕೊಪ್ಪ, ತಾನಾಜಿ ಪಾಟೀಲ, ಮಹೇಶ ಕುಗಜಿ, ನಿಂಗಪ್ಪ ಜಾಧವ, ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ ಮತ್ತು ಕಾರ್ಯದರ್ಶಿ ಕೆ.ಎಚ್‌. ಗುರುಪ್ರಸಾದ, ವ್ಯಾಪಾರಿಗಳಾದ ಬಸನಗೌಡ ಪಾಟೀಲ, ಗಜಾನನ ಶಹಾಪುರಕರ್‌, ಸದಾನಂದ ಪಾಟೀಲ, ಸಚಿನ್‌ ಪಾಟೀಲ, ಶಿವಪುತ್ರ ತೋರಣಗಟ್ಟಿ, ಸತೀಶ್‌ ಪಾಟೀಲ, ಸಂಜೀವ ಸಿದ್ರಾಮಣಿ, ಕೌಶಲ ಮಿಶ್ರಾ, ನಾರಾಯಣ ಪಾಟೀಲ, ಖರೀದಿದಾರರಾದ ಮೋಹನ ಜಾಧವ, ಗಜಾನನ ಓವಳಕರ್‌, ಮಹೇಶ ನಿಟ್ಟೂರಕರ್‌, ಚೇತನ ಪಾಟೀಲ, ರಮೇಶ ಕೊಂಡೂಸ್ಕರ್‌, ಮಾರುತಿ ಭಟ್ಕಳ, ಅಲ್ತಾಫ್‌ ಭಾಗವಾನ, ದಿಲಾವರ್‌ ಪೆಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ಭರ್ಜರಿ ವಹಿವಾಟು :
ಮೊದಲ ದಿನವೇ ನಿರೀಕ್ಷೆಗೂ ಮೀರಿದ ವಹಿವಾಟು ನಡೆದಿದೆ. ಎಪಿಎಂಸಿ ಆಡಳಿತ ಮಂಡಳಿ ಖುದ್ದಾಗಿ ನಿಂತು ಇದರ ಅವಲೋಕನೆ ಮಾಡಿತು. ಹಳೇ ಮಾರುಕಟ್ಟೆ ಮತ್ತು ಹೊಸ ಮಾರುಕಟ್ಟೆ ಪ್ರದೇಶದಲ್ಲಿ ಪೊಲೀಸ್‌ ಬಿಗಿಕಾವಲು ಹಾಕಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ