ಆ್ಯಪ್ನಗರ

ಘೋಷಣೆಯಾಗುತ್ತದಾ ಚಿಕ್ಕೋಡಿ ಜಿಲ್ಲೆ?

ವಿರೂಪಾಕ್ಷಿ ಕವಟಗಿ ಚಿಕ್ಕೋಡಿ ಸುವರ್ಣವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ...

Vijaya Karnataka 21 Dec 2018, 5:00 am
ವಿರೂಪಾಕ್ಷಿ ಕವಟಗಿ ಚಿಕ್ಕೋಡಿ
Vijaya Karnataka Web BEL-20CKD1

ಸುವರ್ಣವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಒಳಗೆ ಚಿಕ್ಕೋಡಿ ಜಿಲ್ಲೆ ಘೋಷಿಸುವಂತೆ ಹೋರಾಟಗಾರರು ಗಡುವು ನೀಡಿದ್ದಾರೆ. ಅಧಿವೇಶನ ಶುಕ್ರವಾರ ಮುಗಿಯಲಿದೆ. ಆದರೆ, ಇಲ್ಲಿಯವರೆಗೂ ಚಿಕ್ಕೋಡಿ ಜಿಲ್ಲೆ ಘೋಷಣೆ ಸಂಬಂಧ ಸರಕಾರದಿಂದ ಸ್ಪಷ್ಟ ನಿಲುವು ವ್ಯಕ್ತವಾಗಿಲ್ಲ.

ವಿಶಾಲ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕೆಂಬ ಕೂಗು ಇಂದು ನಿನ್ನೆಯದಲ್ಲ. ಎರಡು ದಶಕಗಳಿಂದಲೂ ನಿರಂತರ ಹೋರಾಟ ನಡೆಸುತ್ತಲೇ ಬರಲಾಗುತ್ತಿದೆ. ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಅಥಣಿ, ಕಾಗವಾಡ ಮತ್ತು ಹುಕ್ಕೇರಿ ತಾಲೂಕುಗಳನ್ನೊಳಗೊಂಡ, 17,34,256 ಜನಸಂಖ್ಯೆ ಮತ್ತು 5,24,476 ಹೆಕ್ಟೇರ್‌ನಷ್ಟು ಭೌಗೋಳಿಕ ಕ್ಷೇತ್ರ ಹೊಂದಿರುವ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂಬುದು ಈ ಭಾಗದ ಜನರ ಹಕ್ಕೊತ್ತಾಯ.

ಈಗಿರುವ ಜಿಲ್ಲಾ ಕೇಂದ್ರ ಬೆಳಗಾವಿಯಿಂದ ಅಥಣಿ ಹಾಗೂ ರಾಯಬಾಗ ತಾಲೂಕಿನ ಕೊನೆಯ ಹಳ್ಳಿಗಳ ಅಂತರ 225 ಕಿ.ಮೀ. ಇದ್ದು, ಜನರು ಜಿಲ್ಲಾ ಕೇಂದ್ರದ ಕೆಲಸಗಳಿಗೆ ಬರಬೇಕೆಂದರೆ ಇಡೀ ದಿನ ವ್ಯರ್ಥವಾಗುತ್ತದೆ. ಆದರೆ ಚಿಕ್ಕೋಡಿ ಜಿಲ್ಲೆ ಮಾಡಿದರೆ ಜನರ ತೊಂದರೆ ತಪ್ಪುತ್ತದೆ. ಅಲ್ಲದೆ, ಅಭಿವೃದ್ಧಿ ದೃಷ್ಟಿಯಿಂದಲೂ ಅನುಕೂಲ ಎಂಬುದು ಹೋರಾಟಗಾರರ ವಾದ.

ಆದರೆ, ಶೈಕ್ಷ ಣಿಕ ಜಿಲ್ಲೆಯ ಸ್ಥಾನಮಾನ ಹೊಂದಿರುವ ಚಿಕ್ಕೋಡಿಗೆ ಅಧಿಕೃತ ಜಿಲ್ಲಾ ಸ್ಥಾನಮಾನ ನೀಡಲು ರಾಜ್ಯ ಸರಕಾರ ಹಿಂದೇಟು ಹಾಕುತ್ತಿದೆ. ದಿ. ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭ, 1996-97ರಲ್ಲಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆ ರಚಿಸುವ ಸಂಬಂಧ ಪ್ರಪತ್ರ ಹೋರಡಿಸಿದ್ದರು. ಆದರೆ ಕೊನೇ ಕ್ಷ ಣದಲ್ಲಿ ಆದೇಶ ಹಿಂಪಡೆಯಲಾಗಿತ್ತು. ಅಂದಿನ ಶಾಸಕ ಬಾಳಾಸಾಬ ವಡ್ಡರ 7 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಂದಿನಿಂದ ಸತತವಾಗಿ ಹೋರಾಟ ನಡೆಯುತ್ತಲೇ ಇದೆ.

ಅಧಿವೇಶನದ ಕೊನೆಯ ದಿನವಾದರೂ ಚಿಕ್ಕೋಡಿ ಜಿಲ್ಲೆ ಘೋಷಣೆಯಾಗುತ್ತದಾ ಎನ್ನುವ ನಿರೀಕ್ಷೆಯಲ್ಲಿ ಈ ಭಾಗದ ಜನ, ಹೋರಾಟಗಾರರಿದ್ದಾರೆ. ಇಲ್ಲದಿದ್ದರೆ, ಧರಣಿ-ಹರತಾಳಗಳು ಮತ್ತೆ ಮುಂದುವರಿಯಲಿವೆ.

ಚಿಕ್ಕೋಡಿಯಲ್ಲಿರುವ ಜಿಲ್ಲಾಮಟ್ಟದ ಪ್ರಮುಖ ಕಚೇರಿಗಳು :
- ಜಿಲ್ಲಾ ನ್ಯಾಯಾಲಯ
-ಡಿಡಿಪಿಐ, ಡಿಡಿಪಿಯು ಕಚೇರಿ
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ
- ಆರ್‌ಟಿಒ ಕಚೇರಿ
- ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ಉಪವಿಭಾಗ
- ಲೋಕೋಪಯೋಗಿ ಇಲಾಖೆ ಉಪವಿಭಾಗ
- ಉಪ ಕೃಷಿ ನಿರ್ದೇಶಕರ ಕಚೇರಿ
- ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿ

ಬರಬೇಕಾದ ಕಚೇರಿಗಳು:
ಜಿಲ್ಲಾಧಿಕಾರಿ ಕಚೇರಿ, ಜಿಪಂ ಕಚೇರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠರ ಕಚೇರಿ.

ಚಿಕ್ಕೋಡಿ ಜಿಲ್ಲೆಗಾಗಿ ಎರಡೂವರೆ ದಶಕಗಳಿಂದ ಹೋರಾಟ ಮಾಡುತ್ತ ಬಂದರೂ ಪ್ರಯೋಜನವಾಗಿಲ್ಲ. ಅಧಿವೇಶನದ ಕೊನೆಯ ದಿನವಾದರೂ ಈ ಸರಕಾರ ಚಿಕ್ಕೋಡಿ ಜಿಲ್ಲೆ ಘೋಷಿಸುವ ನಿರೀಕ್ಷೆಯಲ್ಲಿದ್ದೇವೆ.
- ಬಿ.ಆರ್‌.ಸಂಗಪ್ಪಗೋಳ, ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರು

ಅಧಿಕಾರ ವಿಕೇಂದ್ರೀಕರಣಗೊಳಿಸಿ ಗಡಿಭಾಗದ ಅಭಿವೃದ್ಧಿ ದೃಷ್ಟಿಯಿಂದ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಈ ಅಧಿವೇಶನದಲ್ಲೇ ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ ನಮ್ಮ ಹೋರಾಟ ಉಗ್ರ ಸ್ವರೂಪ ತಾಳಲಿದೆ.
- ದತ್ತು ಹಕ್ತಾಗೋಳ, ಮಾಜಿ ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ