ಬೆಳಗಾವಿ: ಭದ್ರಾವತಿಯ ದಿ. ಮೈಸೂರ್ ಪೇಪರ್ ಮಿಲ್ ಪುನರಾರರಂಭಕ್ಕೆ ಬೇಕಾಗಿರುವ 25 ಕೋಟಿ ರೂ. ಅನುದಾನವನ್ನು ಸರಕಾರ ಬಿಡುಗಡೆ ಮಾಡುವವರೆಗೂ ಕಲಾಪ ನಡೆಸದಂತೆ ಇಲ್ಲಿನ ಸುವರ್ಣ ವಿಧಾನ ಸೌಧದ ಸದನದಲ್ಲಿ ಸೋಮವಾರ ಧರಣಿ ನಡೆಸುತ್ತೇವೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾರ್ಖಾನೆಯ ಕಾರ್ಮಿಕರಿಗೆ ಭರವಸೆ ನೀಡಿದ್ದಾರೆ.
ಇಲ್ಲಿನ ಸುವರ್ಣ ಗಾರ್ಡನ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪೇಪರ್ ಮಿಲ್ನ ಕಾರ್ಮಿಕರನ್ನು ಗುರುವಾರ ಭೇಟಿಯಾಗಿ ಅವರು ಸಮಸ್ಯೆ ಆಲಿಸಿದರು. ಸಾವಿರಾರು ಜನ ಕೆಲಸ ಮಾಡುವ ಎನ್ಜಿಎಫ್ ಕಾರ್ಖಾನೆಯನ್ನು ಇದೇ ಸರಕಾರ ಬಂದ್ ಮಾಡಿಸಿದೆ. ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ತಮ್ಮ ಕ್ಷೇತ್ರದ ದಾಂಡೇಲಿ ಪೇಪರ್ ಮಿಲ್ಲನ್ನೇ ಬಂದ್ ಮಾಡಿದ್ದಾರೆ. ಹೀಗಾಗಿ ಸೋಮವಾರ ನಡೆಯುವ ಕಲಾಪದ ವೇಳೆ ಮೈಸೂರು ಪೇಪರ್ ಮಿಲ್ ವಿಷಯದ ಚರ್ಚೆಗೆ ದನಿಗೂಡಿಸುತ್ತೇನೆ. ಬೇಡಿಕೆ ಈಡೇರುವವರೆಗೆ ಕಲಾಪ ನಡೆಸಲು ಬಿಡುವುದಿಲ್ಲ ಎಂದು ಅಭಯ ನೀಡಿದರು. ಭದ್ರಾವತಿ ಶಾಸಕ ಅಪ್ಪಾಜಿಗೌಡ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಮಧು ಬಂಗಾರಪ್ಪ ಹಾಜರಿದ್ದರು.
ಇದಾದ ಬಳಿಕ ವಿಧಾನ ಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಹಾಗೂ ಶಾಸಕ ಬಿ.ವೈ. ರಾಘವೇಂದ್ರ ಅವರು ಕಾರ್ಮಿಕರನ್ನು ಭೇಟಿಯಾಗಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಬೇಡಿಕೆ ಈಡೇರಿಕೆಗಾಗಿ ಸರಕಾರದ ಮೇಲೆ ಒತ್ತಡ ತರುವುದಾಗಿ ಆಶ್ವಾಸನೆ ನೀಡಿದರು.
ಕಾಲಿಗೆ ಬಿದ್ದು ಬೇಡಿದರು!: ಕುಮಾರಸ್ವಾಮಿ ಅವರು ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದಂತೆಯೇ ಕಾರ್ಮಿಕರು ತಮ್ಮ ಸಂಕಟ ಹೇಳಿಕೊಂಡರು. ಕಾರ್ಖಾನೆ ಬಂದ್ ಮಾಡಿ ಈಗಾಗಲೇ ಒಂದು ವರ್ಷವಾಗಿದೆ. ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರು ಸೇರಿ ಒಟ್ಟು ಎರಡು ಸಾವಿರ ಜನರು ಈಗ ಬೀದಿಗೆ ಬಂದಿದ್ದಾರೆ. ಮುಂಗಡವಾಗಿ ನೀಡುತ್ತಿದ್ದ ವೇತನವನ್ನೂ ಮೂರು ತಿಂಗಳಿನಿಂದ ನಿಲ್ಲಿಸಿದ್ದಾರೆ. ಇದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ಕಾರ್ಖಾನೆ ಆರಂಭಿಸಲು ಕೇಂದ್ರ ಪರಿಸರ ಮಂತ್ರಾಲಯದಿಂದ ಒಪ್ಪಿಗೆ ಸಿಕ್ಕಿದೆ. ದುರಸ್ತಿಗೆ 25 ಕೋಟಿ ರೂ. ಬೇಕಿದೆ. ಆದರೆ, ರಾಜ್ಯ ಸರಕಾರ ಬಂಡವಾಳ ಹೂಡುವ ಬದಲು, ಕಾರ್ಖಾನೆಯಿಂದ ಲಾಭ ಇಲ್ಲ ಎಂದು ಬಂದ್ ಮಾಡಿಸಿದೆ. ಹೇಗಾದರೂ ಮಾಡಿ ಪುನರಾರಂಭಿಸಿ. ಇಲ್ಲವಾದರೆ, ಎಲ್ಲರಿಗೂ ದಯಾಮರಣ ಕಲ್ಪಿಸಿ ಎಂದು ಕುಮಾರಸ್ವಾಮಿ ಅವರ ಕಾಲಿಗೆ ಬಿದ್ದು ಅಂಗಲಾಚಿದರು. ನಂತರ ಬಂದ ಜಗದೀಶ ಶೆಟ್ಟರ್, ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಅವರ ಬಳಿಯೂ ಇದೇ ರೀತಿ ಅಳಲು ತೋಡಿಕೊಂಡರು.