ಸಿರುಗುಪ್ಪ; ನಗರದ ಶ್ರೀನಿವಾಸ ಆಂಜನೇಯ ಶನೇಶ್ವರ ದೇವಸ್ಥಾನದಲ್ಲಿ ಗುರುರಾಜ ಅಷ್ಟೋತ್ತರ ಮಂಡಳಿ ಸಹಯೋಗದಲ್ಲಿ ವಾರದಿಂದ ಹಮ್ಮಿಕೊಂಡಿದ್ದ ವಸಂತ ಮಾಸದ ಬೇಸಿಗೆ ಶಿಬಿರ ಬುಧವಾರ ಮುಕ್ತಾಯವಾಯಿತು.
ನ್ಯಾಯವಾದಿ ವೆಂಕಟೇಶ್ ಪೂಜಾರಿ ಮಾತನಾಡಿ, ಮಕ್ಕಳಿಗೆ ಹಿಂದೂ ಧರ್ಮದ ಕುರಿತು, ಸಂಸ್ಕೃತಿ ಜ್ಞಾಪಕದಲ್ಲಿರಿಸಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳಿಗೆ ಬೇಸಿಗೆಯ ಶಿಬಿರದಲ್ಲಿ ರಾಮಯಾಣ ಮಹಾಭಾರತಗಳಲ್ಲಿನ ಆಯ್ದ ಭಾಗಗಳ ಕಥೆಗಳನ್ನು ಹೇಳಲು ಪೋಷಕರು ಆದ್ಯತೆ ನೀಡಬೇಕು ಎಂದರು. ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ಮಕ್ಕಳಲ್ಲಿ ಧಾರ್ಮಿಕ ಮಾನೋಭಾವನೆ ಕಡಿಮೆಯಾಗುತ್ತಿದೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉಳಿಸಿ ಬೆಳೆಸುವುದರ ಜತೆಗೆ ಧರ್ಮದಲ್ಲಿನ ಮಾಹಿತಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಮಕ್ಕಳಿಗೆ ತಲುಪಿಸಲು ಇಂತಹ ಶಿಬಿರ ಸಹಕಾರಿಯಾಗುತ್ತವೆ ಎಂದರು. ರಾಮಾಯಣದಲ್ಲಿನ ಸುಂದರಕಾಂಡ ಭಾಗದ ಪ್ರಸಂಗವನ್ನು ಅಭಿನಯಿಸಿದ ಮಕ್ಕಳು ಎಲ್ಲರ ಮೆಚ್ಚುಗೆ ಪಡೆದರು.