ಆ್ಯಪ್ನಗರ

ಹಂಪಿ ಉತ್ಸವ, ಭರದ ಸಿದ್ಧತೆ

ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕಾಗಿ ಹಂಪಿಯಲ್ಲೀಗ ಬಳ್ಳಾರಿ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸಿದೆ. ಉತ್ಸವಕ್ಕಾಗಿ ಆರರಿಂದ ಏಳು ವೇದಿಕೆಗಳನ್ನು ನಿರ್ಮಿಸಲು ಸಜ್ಜಾಗಿದೆ.

ವಿಕ ಸುದ್ದಿಲೋಕ 18 Oct 2016, 9:00 am

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕಾಗಿ ಹಂಪಿಯಲ್ಲೀಗ ಬಳ್ಳಾರಿ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸಿದೆ. ಉತ್ಸವಕ್ಕಾಗಿ ಆರರಿಂದ ಏಳು ವೇದಿಕೆಗಳನ್ನು ನಿರ್ಮಿಸಲು ಸಜ್ಜಾಗಿದೆ.

ಹಂಪಿ ಉತ್ಸವ ನವೆಂಬರ್‌ 3, 4 ಮತ್ತು 5ರಂದು ಮೂರು ದಿನಗಳವರೆಗೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಉತ್ಸವದಲ್ಲಿ ಜನರ ದಂಡು ಹರಿದು ಬರುವ ಹಿನ್ನೆಲೆಯಲ್ಲಿ ಪಾರ್ಕಿಂಗ್‌ಗಾಗಿ ಖಾಲಿ ಜಾಗಗಳಲ್ಲಿ ಸ್ವಚ್ಛಗೊಳಿಸಲಾಗುತ್ತಿದೆ. ಹಂಪಿ ಉತ್ಸವದಲ್ಲಿ ಈ ಬಾರಿ ವಿಜಯ ವಿಠ್ಠಲ ದೇಗುಲದಲ್ಲೂ ವೇದಿಕೆ ನಿರ್ಮಿಸಲು ಜಿಲ್ಲಾಡಳಿತ ಹೊರಟಿದೆ. ಹೀಗಾಗಿ ಗೆಜ್ಜಲ ಮಂಟಪದ ಬಳಿ ಶುಚಿತ್ವ ಕೈಗೊಳ್ಳಲಾಗುತ್ತಿದೆ. ವಾಹನಗಳ ಪಾರ್ಕಿಂಗ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಮೂಲಕ ಹಂಪಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಜಿಲ್ಲಾಡಳಿತ ಮುಂದಾಗಿದೆ.

ಹಂಪಿ ಉತ್ಸವದಲ್ಲಿ ಈ ಬಾರಿ ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರು ಕಳಿಸಲು ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈಗಾಗಲೇ ಹಂಪಿಯ ಗಜಶಾಲೆಯ ಬಳಿ ಧ್ವನಿ ಮತ್ತು ಬೆಳಕಿಗೆ ಸಂಬಂಧಿಸಿದ ಪರಿಕರಗಳನ್ನು ಇಳಿಸಲಾಗಿದೆ. ಈ ಮೂಲಕ ಧ್ವನಿ ಮತ್ತು ಬೆಳಕಿಗಾಗಿ ತಯಾರಿ ನಡೆದಿದೆ. ಜತೆಗೆ ಹಂಪಿ ಬೈ ಸ್ಕೈ ಹಾಗೂ ಹಂಪಿ ಬೈ ನೈಟ್‌ ಯೋಜನೆಗಳನ್ನು ಸಾಕಾರಗೊಳಿಸಲು ಜಿಲ್ಲಾಡಳಿತ ಉತ್ಸುಕವಾಗಿದ್ದು, ಇದಕ್ಕಾಗಿಯೂ ತಯಾರಿ ನಡೆದಿದೆ. ಈ ನಡುವೆ ಪುಸ್ತಕ ಪ್ರದರ್ಶನಕ್ಕೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಕಾಶಕರಿಗೆ ದಿನಕ್ಕೆ ಬರೀ ಒಂದು ರೂ. ಬಾಡಿಗೆ ದರದಲ್ಲಿ ಮಳಿಗೆಗಳನ್ನು ನೀಡಲಾಗುತ್ತಿದೆ. ಈಗಾಗಲೇ 50 ಪ್ರಕಾಶಕರು ಮಳಿಗೆಗಳನ್ನು ಬುಕ್‌ ಮಾಡಿದ್ದಾರೆ. ಹಂಪಿ ಉತ್ಸವದಲ್ಲಿ ರೈತರ ಸಮಾವೇಶ, ಫಲಪುಷ್ಪ ಪ್ರದರ್ಶನ ಮನಸೂರೆಗೊಳ್ಳಲಿವೆ. ಜತೆಗೆ ಕುಸ್ತಿ, ಕೆಸರು ಗದ್ದೆ ಓಟ, ಹಂಪಿ ಮ್ಯಾರಥಾನ್‌ ಓಟ ಸೇರಿದಂತೆ ನಾನಾ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಲು ಯೋಜಿಸಲಾಗಿದೆ. ಜತೆಗೆ ಶಿಲಾ ಶಿಲ್ಪ, ಕಾಷ್ಠ ಶಿಲ್ಪ, ಚಿತ್ರಕಲೆ, ಛಾಯಾಚಿತ್ರ ಪ್ರದರ್ಶನಗಳು ನಡೆಯಲಿವೆ. ರಂಗೋಲಿ, ಮೆಹಂದಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಹಂಪಿ ಉತ್ಸವದ ತಯಾರಿಗಾಗಿ ಅ.18ರಂದು ಕಮಲಾಪುರದ ಹೋಟೆಲ್‌ ಮಯೂರಭುವನೇಶ್ವರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕೂಡ ನಡೆಯಲಿದೆ. ಇಡೀ ಬಳ್ಳಾರಿ ಜಿಲ್ಲಾಡಳಿತವೇ ಈಗ ಹಂಪಿಯತ್ತ ಮುಖ ಮಾಡಿದ್ದು, ನಾಡಿನ ಉತ್ಸವವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿದೆ.

ಹಂಪಿ ಉತ್ಸವದಲ್ಲಿ ದೇಶ-ವಿದೇಶಿ ಕಲಾವಿದರು ಸೇರಿದಂತೆ ಸ್ಥಳೀಯ ಕಲಾವಿದರು ಕೂಡ ಭಾಗವಹಿಸಲಿದ್ದಾರೆ. ಈ ಬಾರಿಯ ಹಂಪಿ ಉತ್ಸವದಲ್ಲಿ ಎದುರು ಬಸವಣ್ಣ ಮಂಟಪದಲ್ಲಿ ಮುಖ್ಯ ವೇದಿಕೆ ನಿರ್ಮಿಸಲಾಗುತ್ತಿದೆ. ಈ ಮೂಲಕ ವಿಜಯನಗರ ಆಳರಸರ ಕಾಲದಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ಮತ್ತೆ ಉತ್ಸವ ಕಳೆಗಟ್ಟಲಿದೆ.

----

Vijaya Karnataka Web
ಹಂಪಿ ಉತ್ಸವ, ಭರದ ಸಿದ್ಧತೆ


ಹಂಪಿ ಉತ್ಸವದಲ್ಲಿ ಅತ್ಯುತ್ತಮ ವೇದಿಕೆಗಳನ್ನು ನಿರ್ಮಿಸಲಾಗುವುದು. ಜತೆಗೆ ದೇಶ-ವಿದೇಶಿ ಪ್ರವಾಸಿಗರಿಗೆ ಹಾಗೂ ಉತ್ಸವ ನೋಡಲು ಆಗಮಿಸುವ ಜನರಿಗೆ ಮೂಲ ಸೌಕರ್ಯ ಒದಗಿಸಲಾಗುವುದು. ಉತ್ಸವಕ್ಕಾಗಿ ಎಲ್ಲ ತಯಾರಿ ನಡೆದಿದೆ.

-ಡಾ.ಅವಿನಾಶ್‌ ಮೆನನ್‌ ರಾಜೇಂದ್ರನ್‌, ಉಪವಿಭಾಗಾಧಿಕಾರಿ, ಹೊಸಪೇಟೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ