ಆ್ಯಪ್ನಗರ

ನ್ಯಾಯ ಕೋರಿ ಸಂತ್ರಸ್ತೆ ಮನವಿ

ಪತಿಯ ಮರಣಾನಂತರ, ಆತನ ಹೆಸರಿನಲ್ಲೇ ಉದ್ಯೋಗ ಮುಂದುವರಿಸಿರುವ ಮೈದುನನ ವಿರುದ್ಧ ಕ್ರಮಕೈಗೊಂಡು, ತನ್ನ ಮಕ್ಕಳಿಗೆ ಉದ್ಯೋಗ ದೊರಕಿಸುವಂತೆ ಸಂತ್ರಸ್ತೆ ಕೋರಿದ್ದಾರೆ.

ವಿಕ ಸುದ್ದಿಲೋಕ 1 Dec 2016, 7:50 am
ಸಿರುಗುಪ್ಪ (ಬಳ್ಳಾರಿ): ಪತಿಯ ಮರಣಾನಂತರ, ಆತನ ಹೆಸರಿನಲ್ಲೇ ಉದ್ಯೋಗ ಮುಂದುವರಿಸಿರುವ ಮೈದುನನ ವಿರುದ್ಧ ಕ್ರಮಕೈಗೊಂಡು, ತನ್ನ ಮಕ್ಕಳಿಗೆ ಉದ್ಯೋಗ ದೊರಕಿಸುವಂತೆ ಸಂತ್ರಸ್ತೆ ಕೋರಿದ್ದಾರೆ.
Vijaya Karnataka Web
ನ್ಯಾಯ ಕೋರಿ ಸಂತ್ರಸ್ತೆ ಮನವಿ


ತಾಲೂಕಿನ ರಾರಾವಿ ಗ್ರಾಮದ ನಾಗಮ್ಮ (45)ಅವರು, ನ್ಯಾಯ ಕೋರಿ ತಹಸೀಲ್ದಾರ್ ಎಂ.ಸುನೀತಾ ಅವರ ಮೂಲಕ ರಾಜ್ಯಪಾಲರಿಗೆ ಬುಧವಾರ ಮನವಿ ರವಾನಿಸಿದ್ದಾರೆ. ‘‘ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ತನ್ನ ಪತಿ ಗಂಗಪ್ಪ, 2003, ಸೆ.2ರಂದು ಮೃತಪಟ್ಟಿದ್ದಾರೆ. ಪತಿಯ ಮರಣಾನಂತರ ಆರೋಗ್ಯ ಇಲಾಖೆಯಿಂದ ತನ್ನ ಕುಟುಂಬಕ್ಕೆ ಯಾವುದೇ ಸೌಲಭ್ಯ, ಅನುಕಂಪದ ನೌಕರಿ, ಪಿಂಚಣಿ ದೊರಕಿಲ್ಲ. ನಿರ್ದಿಷ್ಟ ಆದಾಯ ಮೂಲವಿಲ್ಲದೇ ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ತನಗೆ ನ್ಯಾಯ ಸಿಕ್ಕಿಲ್ಲ’’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮೃತ ಪತಿ ಹೆಸರು ದುರ್ಬಳಕೆ: ‘‘ತನ್ನ ಮೈದುನ ಗೋವಿಂದಪ್ಪ, ತಾನೇ ಗಂಗಪ್ಪ ಎಂದು ಇಲಾಖೆಯ ಅಧಿಕಾರಿಗಳನ್ನು ನಂಬಿಸಿ, ಅನಧಿಕೃತವಾಗಿ ಕೆಲಸದಲ್ಲಿ ಮುಂದುವರಿದಿದ್ದಾನೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಗೋವಿಂದಪ್ಪನ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ತನ್ನ ಪತಿಯ ಹೆಸರಲ್ಲಿ ಮೈದುನ ಕೆಲಸದಲ್ಲಿ ಮುಂದುವರಿದಿದ್ದರಿಂದ ಕಾನೂನುಬದ್ಧ ಪಿಂಚಣಿ ಪಡೆಯಲೂ ತೊಂದರೆಯಾಗಿದೆ. ತನ್ನ ಕುಟುಂಬಕ್ಕೆ ನೆರವು ನೀಡಬೇಕು. ತನಗೆ ಒಬ್ಬ ಹೆಣ್ಣುಮಗಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಗಂಡು ಮಕ್ಕಳಲ್ಲಿ ಒಬ್ಬರಿಗೆ ಅನುಕಂಪ ಆಧಾರಿತ ಕೆಲಸ ಕೊಡಬೇಕು’’ ಎಂದು ಸಂತ್ರಸ್ತೆ ಕೋರಿದ್ದಾರೆ.

..............
ರಾರಾವಿ ಗ್ರಾಮದ ಗಂಗಪ್ಪ ಅವರ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಗಂಗಪ್ಪ ಅವರ ಪತ್ನಿ ನಾಗಮ್ಮ ಅವರ ಮನವಿಗೆ ಶೀಘ್ರ ಸ್ಪಂದಿಸಲಾಗುವುದು.

-ಎಂ.ಸುನೀತಾ, ತಹಸೀಲ್ದಾರ್, ಸಿರುಗುಪ್ಪ
.................
ಇಲಾಖೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಗೋವಿಂದಪ್ಪ, ತಾನೇ ಗಂಗಪ್ಪ ಎಂದು ತಪ್ಪು ಮಾಹಿತಿ ನೀಡಿದ್ದಾನೆ ಎಂದು ಗಂಗಪ್ಪ ಅವರ ಪತ್ನಿ ನಾಗಮ್ಮ ದೂರು ನೀಡಿದ್ದಾರೆ. ಅಗತ್ಯ ಮಾಹಿತಿ ಕ್ರೋಢೀಕರಿಸಿ, ರಾಜ್ಯ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಮುಂದಿನ ಕ್ರಮಕ್ಕೆ ಕಳುಹಿಸಲಾಗಿದೆ. ಇದೇ ವಾರದಲ್ಲಿ ಸೂಕ್ತ ಉತ್ತರ ದೊರೆಯಲಿದೆ.

-ರಮೇಶ್‌ಬಾಬು, ಜಿಲ್ಲಾ ಆರೋಗ್ಯಾಧಿಕಾರಿ, ಬಳ್ಳಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ