ಆ್ಯಪ್ನಗರ

ವ್ಯಾಪಾರಿ ಕೇಂದ್ರಗಳಾದ ದರ್ಗಾ, ಗುಡಿ, ಮಠ: ಸೂಫಿ ಗುರು ಖಾದ್ರಿ

ದರ್ಗಾ, ಗುಡಿ, ಮಠಗಳು ಇಂದು ವ್ಯಾಪಾರಿಕೇಂದ್ರಗಳಾಗಿದ್ದು, ಶ್ರದ್ಧೆಯಿಂದ ಬರುವ ಭಕ್ತರನ್ನು ಅಲ್ಲಿ ಶೋಷಿಸಲಾಗುತ್ತಿದೆ ಎಂದು ಮಳಖೇಡದ ಸೂಫಿ ಗುರು ಸಯ್ಯದ್ ಶಾ ಮುಸ್ತಫಾ ಖಾದ್ರಿ ವಿಷಾದ ವ್ಯಕ್ತಪಡಿಸಿದರು.

ವಿಕ ಸುದ್ದಿಲೋಕ 27 Mar 2017, 8:02 am
ಹೊಸಪೇಟೆ: ದರ್ಗಾ, ಗುಡಿ, ಮಠಗಳು ಇಂದು ವ್ಯಾಪಾರಿಕೇಂದ್ರಗಳಾಗಿದ್ದು, ಶ್ರದ್ಧೆಯಿಂದ ಬರುವ ಭಕ್ತರನ್ನು ಅಲ್ಲಿ ಶೋಷಿಸಲಾಗುತ್ತಿದೆ ಎಂದು ಮಳಖೇಡದ ಸೂಫಿ ಗುರು ಸಯ್ಯದ್ ಶಾ ಮುಸ್ತಫಾ ಖಾದ್ರಿ ವಿಷಾದ ವ್ಯಕ್ತಪಡಿಸಿದರು.
Vijaya Karnataka Web
ವ್ಯಾಪಾರಿ ಕೇಂದ್ರಗಳಾದ ದರ್ಗಾ, ಗುಡಿ, ಮಠ: ಸೂಫಿ ಗುರು ಖಾದ್ರಿ


ಕನ್ನಡ ವಿವಿಯ ಲಲಿತಕಲೆಗಳ ನಿಕಾಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿವಿಯ ಮಂಟಪ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ‘ಭಾರತದ ಸೂಫಿ ಪರಂಪರೆಗಳು: ದರ್ಶನ, ಸಂಗೀತ ಮತ್ತು ಕಾವ್ಯ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು.

‘‘ಸಾಮರಸ್ಯ ಬುನಾದಿಯ ಮೇಲೆ ಸೂಫಿಸಂ ನಿಂತಿದೆ. ಒಂದು ಧರ್ಮವು ಮತ್ತೊಂದು ಧರ್ಮವನ್ನು ಸಾಮರಸ್ಯದಿಂದ ಕಾಣುವುದೇ ಮಾನವಧರ್ಮ. ಮತಬ್ಯಾಂಕ್ ರಾಜಕಾರಣ, ಧರ್ಮಗಳ ಮಧ್ಯೆ ಸಂಘರ್ಷ ಸೃಷ್ಟಿಸುತ್ತಿದೆ. ಧರ್ಮ ಮುಂದಿಟ್ಟುಕೊಂಡು ಮನುಷ್ಯರ ಮನಸು ಕಲಕಬಾರದು’’ ಎಂದ ಅವರು, ‘‘ಕನ್ನಡ ವಿವಿಯಲ್ಲಿ ಸೂಫಿಸಂ ಅಧ್ಯಯನ ಪೀಠ ಸ್ಥಾಪಿಸಬೇಕು ಎಂಬ ಒತ್ತಾಸೆಗೆ ನನ್ನ ಸಹಮತವಿದೆ’’ ಎಂದು ತಿಳಿಸಿದರು.

ಅಂತರ್‌ಪಂಥೀಯ ಸಂವಾದ ಅಗತ್ಯ: ಸಂಕಿರಣದ ಸಂಚಾಲಕ ಡಾ.ರಹಮತ್ ತರೀಕೆರೆ ಮಾತನಾಡಿ, ‘‘ಎಲ್ಲ ಧರ್ಮಗಳು ತಮ್ಮ ಹೊಟ್ಟೆಯಿಂದ ನಂಜು ಉಂಟುಮಾಡಿ ಸಾಮರಸ್ಯ ಕೆಡಿಸುತ್ತಿರುವಾಗ ಸೂಫಿಸಂ ಸಾಮರಸ್ಯದ ಆರೋಗ್ಯ ಕಾಪಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಅಂತರ್‌ಪಂಥೀಯ ಸಂವಾದ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ’’ ಎಂದರು.

ಅಧ್ಯಕ್ಷತೆ ವಹಿಸಿದ್ದ ಲಲಿತಕಲೆಗಳ ನಿಕಾಯದ ಡೀನ್ ಡಾ.ಅಶೋಕಕುಮಾರ ರಂಜೇರೆ ಮಾತನಾಡಿ, ‘‘ಸಾಮರಸ್ಯಕ್ಕೆ ವಿರುದ್ಧವಾದ ಚಲನೆಗಳು ತೀವ್ರಗೊಂಡಿರುವ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಸೂಫಿಸಂ ಸಾಮರಸ್ಯದ ಪ್ರತೀಕವಾಗಿದೆ’’ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಬಾನು ಮುಷ್ತಾಕ್, ಎಚ್.ಎಸ್.ಅನುಪಮಾ, ಡಾ.ವಿ.ಎಸ್.ಶ್ರೀಧರ , ಸೈಯದ್ ರಹೂಫ್ ಖಾದ್ರಿ, ಡಾ.ಸಂಜೀವ್ ಕುಲಕರ್ಣಿ, ಡಾ.ಜಿ.ಬಾಲಕಷ್ಣ ಮಾತನಾಡಿದರು. ಸಂಶೋಧನಾ ಸಹಾಯಕಿ ರೇಖಾ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ