‘ಭ್ರಷ್ಟ ರಾಜಕಾರಣಿಗಳಿಗೆ ಪಾಠ ಕಲಿಸಿ’
ಲೂಟಿ ಕೋರರು, ಬಂಡವಾಳ ಶಾಹಿಗಳು, ದಲ್ಲಾಳಿಗಳು ವಾಸ್ತವವನ್ನು ಮುಚ್ಚಿಟ್ಟು ಕೋಟಿ ರೂ.ಲೂಟಿ ಮಾಡುವವರಿಗೆ ಜನ ಪಾಠ ಕಲಿಸಬೇಕು ಎಂದು ಕಮ್ಯುನಿಷ್ಟ್ ಪಕ್ಷ ದ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್ ಹೇಳಿದರು.
ಕೂಡ್ಲಿಗಿ: ಲೂಟಿ ಕೋರರು, ಬಂಡವಾಳ ಶಾಹಿಗಳು, ದಲ್ಲಾಳಿಗಳು ವಾಸ್ತವವನ್ನು ಮುಚ್ಚಿಟ್ಟು ಕೋಟಿ ರೂ.ಲೂಟಿ ಮಾಡುವವರಿಗೆ ಜನ ಪಾಠ ಕಲಿಸಬೇಕು ಎಂದು ಕಮ್ಯುನಿಷ್ಟ್ ಪಕ್ಷ ದ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್ ಹೇಳಿದರು.
ತಾಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ಅಖಿಲಭಾರತ ಕಿಸಾನ್ ಸಭಾದಿಂದ ಬುಧವಾರ ಹಮ್ಮಿಕೊಂಡಿದ್ದ 3 ದಿನಗಳ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು. ನೈಸರ್ಗಿಕ ಹಾಗೂ ಶ್ರಮಿಕರ ಮತ್ತು ರೈತರ ಸಂಪತ್ತನ್ನು ಕೊಳ್ಳೆ ಹೊಡೆದವರು, ಸಾರ್ವಜನಿಕರನ್ನು ಯಾಮಾರಿಸಲು ಸಾಧ್ಯವಿಲ್ಲ ಎಂದರು. ದೇಶಕ್ಕೆ ಅನ್ನ ಹಾಕುವ ರೈತನ ಸ್ಥಿತಿಯೂ ಚಿಂತಾಜನಕವಾಗಿದ್ದು, ಇಂತಹ ಸಮಯದಲ್ಲಿ ನೆರವಿಗೆ ಧಾವಿಸುವ ಕೆಲಸ ಸರಕಾರಗಳಿಂದ ನಡೆಯಬೇಕು. ಅದ್ಯಾವುದೂ ನಡೆಯುತ್ತಿಲ್ಲ. ರೈತರು ಪ್ರಜ್ಞಾವಂತರಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ಮುಂಬರುವ ದಿನಗಳಲ್ಲಿ ಎಲ್ಲ ರೈತರು ಒಗ್ಗೂಡಬೇಕು ಎಂದರು.
ತಾಲೂಕು ಸಿಪಿಐ ಕಾರ್ಯದರ್ಶಿ ಎಚ್.ವೀರಣ್ಣ ಮಾತನಾಡಿ, ಕೂಡ್ಲಿಗಿಯಂತಹ ಬರಪೀಡಿತ ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಬೇಕು. ಈ ಬಗ್ಗೆ ಕಮ್ಯುನಿಷ್ಟ್ ಪಕ್ಷ ಕಳೆದ ಅನೇಕ ವರ್ಷಗಳಿಂದ ರೈತರೊಂದಿಗೆ ಹೋರಾಟ ಮಾಡುತ್ತ ಬಂದಿದೆ. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಈ ಯೋಜನೆ ಇನ್ನೂ ಜಾರಿಯಾಗದೇ ಉಳಿದಿದೆ.
ಈಗಿನ ಸರಕಾರ ನದಿ ನೀರು ಇರುವ ಪ್ರದೇಶಗಳಿಗೆ ಪುನಃ ನದಿ ನೀರು ಹರಿಸುತ್ತಿದೆ. ಆದರೆ, ನದಿಗಳ ಮುಖ ನೋಡದೇ ಇರುವ ಕೂಡ್ಲಿಗಿ ಸುತ್ತಮುತ್ತಲ ತಾಲೂಕುಗಳಿಗೆ ಭದ್ರಾ ನೀರು ತರಲು ಯಾಕೆ ಸರಕಾರ ಮುಂದಾಗುತ್ತಿಲ್ಲ ಎಂದು ರೈತರು ಗಟ್ಟಿಯಾಗಿ ಪ್ರಶ್ನಿಸಬೇಕಿದೆ ಎಂದರು. ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಉಪಾಧ್ಯಕ್ಷ ಹೊಸಳ್ಳಿ ಮಲ್ಲೇಶ್, ಸ್ನೇಹ ಸೇತು ಸಂವಹನ ಸಂಸ್ಥೆಯ ಕಾರ್ಯದರ್ಶಿ ನಾಗುತಳವಾರ, ಕಿಸಾನ್ ಸಭಾದ ರಾಜ್ಯ ಕಾರ್ಯದರ್ಶಿ ಪಾಲವ್ವನಹಳ್ಳಿ ಪ್ರಸನ್ನ ಕುಮಾರ್, ಡಾ.ಕೆ.ಎಸ್. ಜನಾರ್ದನ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ದ್ರಾಕ್ಷ ಯಣಮ್ಮ, ರತ್ನಮ್ಮ, ಭಾರತೀಯ ಮಹಿಳಾ ಒಕ್ಕೂಟದ ಕೂಡ್ಲಿಗಿ ತಾಲೂಕು ಘಟಕದ ಅಧ್ಯಕ್ಷೆ ಕೆಸರಹಳ್ಳಿ ರೇಣುಕಮ್ಮ, ಕಿಸಾನ್ ಸಭಾದ ತಾಲೂಕು ಅಧ್ಯಕ್ಷ ರಾಜುಗೌಡ, ಉಪಾಧ್ಯಕ್ಷ ಬತ್ತನಹಳ್ಳಿ ರಾಮಣ್ಣ, ಕಾರ್ಯದರ್ಶಿ ಚಂದ್ರು, ಕಂದಗಲ್ಲು ನಿಂಗನಗೌಡ ಇದ್ದರು. ತಾಲೂಕಿನ ನಾನಾ ಭಾಗಗಳಿಂದ ರೈತರು ಶಿಬಿರಲ್ಲಿ ಭಾಗವಹಿಸಿದ್ದರು.