ಆ್ಯಪ್ನಗರ

ನಕಲಿ ಚಿನ್ನ ನೀಡಿ ವಂಚನೆ: ಮೂವರ ಬಂಧನ

ಆಂಧ್ರಪ್ರದೇಶದ ಮಹಿಳೆಯೊಬ್ಬರಿಗೆ ನಕಲಿ ಚಿನ್ನ ನೀಡಿ, 12ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ ಹೊಸಪೇಟೆಯಲ್ಲಿ ಬಂಧಿಸಿ, ಅವರಿಂದ 8.5ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಆರ್.ಚೇತನ್ ಹೇಳಿದರು.

ವಿಕ ಸುದ್ದಿಲೋಕ 24 Jun 2017, 8:16 am
ಬಳ್ಳಾರಿ: ಆಂಧ್ರಪ್ರದೇಶದ ಮಹಿಳೆಯೊಬ್ಬರಿಗೆ ನಕಲಿ ಚಿನ್ನ ನೀಡಿ, 12ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ ಹೊಸಪೇಟೆಯಲ್ಲಿ ಬಂಧಿಸಿ, ಅವರಿಂದ 8.5ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಆರ್.ಚೇತನ್ ಹೇಳಿದರು.
Vijaya Karnataka Web
ನಕಲಿ ಚಿನ್ನ ನೀಡಿ ವಂಚನೆ: ಮೂವರ ಬಂಧನ


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಂತೆಬೆನ್ನೂರಿನ ತಿಮ್ಮಪ್ಪ(28), ಹರಪನಹಳ್ಳಿ ತಾಲೂಕು ಮಾಚಿಹಳ್ಳಿಯ ಎಸ್.ನಾಗಪ್ಪ(23) ಹಾಗೂ ದಾವಣಗೆರೆ ಜಿಲ್ಲೆ ಉಚ್ಚಂಗಿದುರ್ಗದ ಉಮಾಪತೆಯ್ಯ(42) ಬಂಧಿತರು. ಜೂ.4ರಂದು ಆಂಧ್ರಪ್ರದೇಶದ ತೆನಾಲಿ ಗ್ರಾಮದ ಸ್ವಪ್ನಾ ಹಾಗೂ ಅವರ ತಾಯಿ, ಮಗನನ್ನು ಹೊಸಪೇಟೆಗೆ ಕರೆಯಿಸಿಕೊಂಡ ವಂಚಕರು, ಎರಡು ಕೆ.ಜಿ. ನಕಲಿ ಚಿನ್ನದ ಸಣ್ಣ ಬಿಲ್ಲೆಗಳನ್ನು ಬಂಗಾರವೆಂದು ಕೊಟ್ಟು, 12ಲಕ್ಷ ರೂ. ಪಡೆದು ಪರಾರಿಯಾಗಿದ್ದರು. ಈ ಕುರಿತು ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ’’ ಎಂದರು.

‘‘ಈ ಮೂವರು ಆರೋಪಿಗಳು, ಶುಕ್ರವಾರ ಬೆಳಗ್ಗೆ ಹೊಸಪೇಟೆ ನಗರದ ಶ್ರೀರಾಮುಲು ಪಾರ್ಕ್ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದರು. ಅಲ್ಲಿನ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣದ ಸುಳಿವು ಸಿಕ್ಕಿದೆ. ಆರೋಪಿಗಳ ಬಳಿಯಿದ್ದ 8.5ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ನಿಧಿ ಹೆಸರಲ್ಲಿ ಜನರನ್ನು ಈ ಆರೋಪಿಗಳು ವಂಚಿಸಿದ್ದಾರೆ. ಇಂಥದೇ ಮತ್ತೊಂದು ಪ್ರಕರಣದಲ್ಲಿ ಆರೋಪಿ ತಿಮ್ಮಪ್ಪ ಭಾಗಿಯಾಗಿರುವುದು ವಿಚಾರಣೆ ವೇಳೆ ಬಹಿರಂಗವಾಗಿದೆ. ಅಷ್ಟೇ ಅಲ್ಲದೆ ತೆನಾಲಿ ಗ್ರಾಮದ ಕಿರಾಣಿ ವ್ಯಾಪಾರಿ ಸ್ವಪ್ನಾ ಹೆಸರಿನಲ್ಲಿ ಪಡೆದ ನಕಲಿ ಸಿಮ್‌ಕಾರ್ಡ್ ಬಳಸಿ, ಜನರನ್ನು ವಂಚಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ರಮೇಶ್, ನಾಗಪ್ಪ ಹಾಗೂ ಪಿ.ಮಂಜುನಾಥ್ ಎನ್ನುವ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ತಂಡ ರಚಿಸಲಾಗುವುದು’’ ಎಂದು ಎಸ್ಪಿ ವಿವರಿಸಿದರು.

‘‘ವಂಚನೆಗೆ ಒಳಗಾದವರ ಮಾಹಿತಿ ಸಂಗ್ರಹಿಸುವ ಜತೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಹೊಸಪೇಟೆ ಡಿವೈಎಸ್ಪಿ ಕುಮಾರಚಂದ್ರ, ಸಿಪಿಐ ಲಿಂಗನಗೌಡ ನೆಗಳೂರು, ಪಿಎಸ್‌ಐ ತಿಮ್ಮಣ್ಣ ಎಸ್.ಚಾಮನೂರು, ಸಿಬ್ಬಂದಿ ಮಾಣಿಕ್ಯ, ರಾಘವೇಂದ್ರ, ಗಾಳೆಪ್ಪ, ಮಲ್ಲೇಶಿ, ಷಣ್ಮುಖ, ಹೆಗ್ಗಪ್ಪ, ಈಶ್ವರ ಶ್ರಮಿಸಿದ್ದಾರೆ’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ