ಆ್ಯಪ್ನಗರ

ರೈತರ ಮನಗೆದ್ದ ‘ಹುಳು’

ಬರ, ಬೆಳೆ ನಷ್ಟದಿಂದ ತತ್ತರಿಸಿದ ರೈತರು ಈಗಾಗಲೇ ಗುಳೆ ದಾರಿ ಹಿಡಿಯುತ್ತಿದ್ದಾರೆ. ಕೃಷಿಯೇ ನೆಲಕಚ್ಚಿರುವುದರಿಂದ ಅನ್ನದಾತ ಸಂಕಷ್ಟ ಎದುರಿಸುತ್ತಿದ್ದು, ಅವರನ್ನು ಪುನಶ್ಚೇತನಗೊಳಿಸಲು 'ಹುಳು' ಸಾಕಣೆ ಮಾರ್ಗ ತುಳಿಯಲಾಗಿದೆ.

Vijaya Karnataka Web 24 Aug 2017, 9:00 am

ಪಂಪಾಪತಿ ಓತೂರು, ಸಿರುಗುಪ್ಪ

ಬರ, ಬೆಳೆ ನಷ್ಟದಿಂದ ತತ್ತರಿಸಿದ ರೈತರು ಈಗಾಗಲೇ ಗುಳೆ ದಾರಿ ಹಿಡಿಯುತ್ತಿದ್ದಾರೆ. ಕೃಷಿಯೇ ನೆಲಕಚ್ಚಿರುವುದರಿಂದ ಅನ್ನದಾತ ಸಂಕಷ್ಟ ಎದುರಿಸುತ್ತಿದ್ದು, ಅವರನ್ನು ಪುನಶ್ಚೇತನಗೊಳಿಸಲು 'ಹುಳು' ಸಾಕಣೆ ಮಾರ್ಗ ತುಳಿಯಲಾಗಿದೆ.

ಕೂಲಿ ಅರಸಿ ರೈತರು ಊರು ಬಿಡದಂತೆ ತಡೆಯಲು ಎರೆಹುಳು ತೊಟ್ಟಿ ನಿರ್ಮಿಸಿ ಆಸರೆ ಒದಗಿಸಲಾಗುತ್ತಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ದಿನಗೂಲಿ ಒದಗಿಸುವುದರ ಜತೆಗೆ ಎರೆಹುಳು ಕೃಷಿ ಪ್ರೋತ್ಸಾಹಿಸಲಾಗುತ್ತಿದೆ. ರೈತ ಕುಟುಂಬಕ್ಕೆ ಆದಾಯ ಸೃಜಿಸಿ ಸಾವಯವ ಗೊಬ್ಬರ ಬಳಕೆಯ ಮಹತ್ವ ಸಾರಲಾಗುತ್ತಿದೆ.

ಏನಿದು ಯೋಜನೆ: ಕೃಷಿ ಇಲಾಖೆ ಸಹಯೋಗ, ನರೇಗಾ ಯೋಜನೆ ಬಳಸಿಕೊಂಡು ಎರೆಹುಳು ತೊಟ್ಟಿ ನಿರ್ಮಿಸಲಾಗುತ್ತದೆ. ರೈತರ ಜಮೀನಿನಲ್ಲಿ ಬರುವ ಕಸಕಡ್ಡಿ ಒಂದೆಡೆ ಸೇರಿಸಿ, ಎರೆಹುಳು ಬಳಸಿಕೊಂಡು ಫಲವತ್ತಾದ ಗೊಬ್ಬರ ತಯಾರಿಸಲಾಗುತ್ತದೆ. ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಹೆಚ್ಚಿ, ಉತ್ತಮ ಆದಾಯ ಪ್ರಾಪ್ತಿಯಾಗುತ್ತಿದೆ.

ಕೂಲಿಯ ಜತೆ ತೊಟ್ಟಿ: ಪ್ರತಿ ಎರೆಹುಳು ತೊಟ್ಟಿ ನಿರ್ಮಾಣಕ್ಕೆ 24 ರಿಂದ 26 ಸಾವಿರ ರೂ.ವರೆಗೆ ಸಹಾಯಧನ ಸಿಗುತ್ತದೆ. ಒಂದೇ ಕುಟುಂಬದ ಇಬ್ಬರಿಗೆ 14 ದಿನಗಳ ಕೂಲಿ ಕೊಡಲು ಅವಕಾಶವಿದೆ. ಒಂದೆಡೆ ಕುಟುಂಬಕ್ಕೆ ನಿತ್ಯ ಕೂಲಿ ಸಿಕ್ಕರೆ, ಮತ್ತೊಂದೆಡೆ ಜಮೀನಿನಲ್ಲಿಯೇ ಸ್ವತ್ತು ಸೃಜನೆಯಾಗುತ್ತದೆ. ಎರೆಹುಳು ಗೊಬ್ಬರಕ್ಕೆ ಹೆಚ್ಚಿನ ಲಾಭ ಇರುವುದರಿಂದ ರೈತರಿಗೆ ಆದಾಯ ದೊರೆಯುತ್ತಿದೆ.

ಆಸಕ್ತಿ ಹೆಚ್ಚಳ: ಹಚ್ಚೊಳ್ಳಿಸೇರಿದಂತೆ ನಾನಾ ಹೋಬಳಿಗಳಲ್ಲಿ 35 ಕ್ಕೂ ಹೆಚ್ಚು ತೊಟ್ಟಿ ನಿರ್ಮಾಣವಾಗಿವೆ. ಜಮೀನಿನಲ್ಲಿ ಕಸ, ಕಡ್ಡಿಯನ್ನೇ ಇದೇ ತೊಟ್ಟಿಗೆ ಹಾಕಲಾಗುತ್ತಿದೆ. ಜಲಾಶಯ ಭರ್ತಿಯಾಗಿ ಮುಂದಿನ ದಿನಗಳಲ್ಲಿ ನೀರು ಬಿಟ್ಟಾಗ ಜಮೀನಿಗೆ ರಾಸಾಯನಿಕ ಗೊಬ್ಬರದ ಬದಲು ಇದೇ ಗೊಬ್ಬರ ಬಳಸಲು ಅನುಕೂಲವಾಗುತ್ತದೆ. ಹೆಚ್ಚಿನ ಇಳುವರಿ ಪಡೆಯಲಿಕ್ಕೆ ಅನುಕೂಲವಾಗಲಿದೆ. ಗೊಬ್ಬರವೇ ಬೇಡ ಎಂದವರು, ಎರೆಹುಳು ಸೇರಿದಂತೆ ಎರೆಹುಳು ಗೊಬ್ಬರ ಮಾರಾಟ ಮಾಡಿ ಈಗ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಎರೆಹುಳು ಗೊಬ್ಬರ 50 ಕೆಜಿಯಷ್ಟಿದ್ದರೆ, 400 ರೂ.ನಷ್ಟು ಹಣ ದೊರೆಯುತ್ತಿರುವುದು, ಎರೆಹುಳು ತೊಟ್ಟಿಯ ಮಹತ್ವ ಹೆಚ್ಚಿಸಿದೆ.

.....

ಪ್ರತಿ ಕೆಜಿಗೆ

ಎರೆಹುಳುವಿಗೆ

3-5 ರೂಪಾಯಿ

...

ಎರೆಹುಳು ಗೊಬ್ಬರ

ಪ್ರತಿ ಕೆಜಿಗೆ

5-8 ರೂಪಾಯಿ

.......

ಜಮೀನಿನಲ್ಲಿಯ ಕಸ ರಸವಾಗಿಸಲು ಸರಕಾರ ಉಚಿತವಾಗಿಯೇ ಎರೆಹುಳು ತೊಟ್ಟಿ ನಿರ್ಮಾಣಕ್ಕೆ ಸಹಕರಿಸುತ್ತಿದೆ. ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ರೈತರು ಮುಂದಾಗಬೇಕು.

-ಬಿ.ಆರ್‌.ಪಾಲಾಕ್ಷ ಗೌಡ, ಎಡಿಎ ಸಿರುಗುಪ್ಪ

-----

Vijaya Karnataka Web
ರೈತರ ಮನಗೆದ್ದ ‘ಹುಳು’


ನರೇಗಾ ಯೋಜನೆಯಡಿ ಜಮೀನು ಹಾಗೂ ಮನೆಗಳ ಪಕ್ಕದಲ್ಲಿಯೇ ಎರೆಹುಳು ತೊಟ್ಟಿ ನಿರ್ಮಾಣಕ್ಕೆ ಅವಕಾಶವಿದೆ. ತೊಟ್ಟಿ ನಿರ್ಮಾಣದ ಜತೆ ಗ್ರಾಮ ಸ್ವಚ್ಛತೆಗೂ ಯೋಜನೆಯನ್ನು ಬಳಸಿಕೊಳ್ಳಬಹುದು.

-ಸೋಮನಗೌಡ, ರೈತ, ಚಾಣಕನೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ