Please enable javascript.ಗಣಿ ನಾಡಲ್ಲಿ ಮಣ್ಣಿನ ಮಡಕೆಗೆ ಡಿಮ್ಯಾಂಡ್‌ - ಗಣಿ ನಾಡಲ್ಲಿ ಮಣ್ಣಿನ ಮಡಕೆಗೆ ಡಿಮ್ಯಾಂಡ್‌ - Vijay Karnataka

ಗಣಿ ನಾಡಲ್ಲಿ ಮಣ್ಣಿನ ಮಡಕೆಗೆ ಡಿಮ್ಯಾಂಡ್‌

ವಿಕ ಸುದ್ದಿಲೋಕ 10 Feb 2017, 9:00 am
Subscribe

ಗಣಿ ನಾಡಿನಲ್ಲಿ ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ಏರಲಿದೆ. ಈಗಾಗಲೇ ಕುಂಬಾರ ಮಹಿಳೆಯರು ಮಡಕೆಗಳನ್ನು ದಾಸ್ತಾನು ಮಾಡಲಾರಂಭಿಸಿದ್ದು, ಈಗಲೇ ಬೇಡಿಕೆ ಏರತೊಡಗಿದೆ.

ಗಣಿ ನಾಡಲ್ಲಿ ಮಣ್ಣಿನ ಮಡಕೆಗೆ ಡಿಮ್ಯಾಂಡ್‌

ಕೃಷ್ಣ ಎನ್‌. ಲಮಾಣಿ, ಹೊಸಪೇಟೆ

ಗಣಿ ನಾಡಿನಲ್ಲಿ ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ಏರಲಿದೆ. ಈಗಾಗಲೇ ಕುಂಬಾರ ಮಹಿಳೆಯರು ಮಡಕೆಗಳನ್ನು ದಾಸ್ತಾನು ಮಾಡಲಾರಂಭಿಸಿದ್ದು, ಈಗಲೇ ಬೇಡಿಕೆ ಏರತೊಡಗಿದೆ.

ಈ ಬಾರಿ ಬೇಸಿಗೆ ಪೂರ್ವವೇ ಬೇಡಿಕೆ ಕಾಣಿಸಿರುವುದರಿಂದ ಕುಂಬಾರರಲ್ಲಿ ಸಂತಸ ಮೂಡಿದ್ದು, ಅಗತ್ಯ ಸಿದ್ಧತೆ ಮುಂದುವರಿಸಿದ್ದಾರೆ. ನಗರದಲ್ಲಿ ಬಿಸಿಲಿನ ಝಳ ಆರಂಭಗೊಂಡಿದೆ. ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಸುಡು ಬಿಸಿಲು ಕಾಯಂ. ಬೇಸಿಗೆ ಸಂಕಟದಿಂದ ಪಾರಾಗಲು ಬಡವರ ಪ್ರಿಜ್‌ ಮಡಕೆಗಳನ್ನು ಖರೀದಿಸಲಾಗುತ್ತಿದೆ. ನಗರಸಭೆ ಎದುರಿನ ಲಿಟ್ಲ್‌ಫ್ಲವರ್‌ ಶಾಲೆಯ ಬಳಿ ಕುಂಬಾರ ಮಹಿಳೆಯರು ಮಡಕೆ ಮಾರಾಟ ಮಾಡುತ್ತಿದ್ದು, ಜನರ ಸರದಿ ಕಂಡುಬರುತ್ತದೆ.

ನಿರ್ಜಲೀಕರಣದ ಬಾಧೆ: ತಾಲೂಕಿನಾದ್ಯಂತ ಈಗಾಗಲೇ ಪ್ರಖರ ಬಿಸಿಲು ಆರಂಭಗೊಂಡಿದೆ. ಹೀಗಾಗಿ ಜನರು ಅನ್ಯ ಮಾರ್ಗವಿಲ್ಲದೇ ಮಣ್ಣಿನ ಮಡಿಕೆಗಳನ್ನು ಖರೀದಿಸುತ್ತಿದ್ದಾರೆ. ತಾಪಮಾನ ಏರಿದಾಗ ಪ್ರತಿ ಬಾರಿಯೂ ನಿರ್ಜಲೀಕರಣ ಕಾಡುತ್ತದೆ. ಅಂತಹ ಸಮಯದಲ್ಲಿ ಮಡಕೆಯ ನೀರು ಸಂಜೀವಿನಿಯಾಗುತ್ತದೆ.

ದಾಸ್ತಾನು ಜೋರು: ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿಯ ದಶಮಾಪುರದಿಂದ ಮಡಕೆಗಳನ್ನು ತಂದು ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ. ನಗರದ ಹಲವೆಡೆಯಲ್ಲಿ ದಾಸ್ತಾನು ಮಾಡಿ, ಮಾರಾಟಕ್ಕೆ ಸಜ್ಜುಗೊಳಿಸುತ್ತಿದ್ದಾರೆ. ಲಾರಿ ಹಾಗೂ ಟಾಟಾ ಏಸ್‌ಗಳಲ್ಲಿ ಕುಂಬಾರರ ಮಡಕೆ ಹೊತ್ತು ಬರುತ್ತಿವೆ.

ಬೆಲೆಯೂ ಕಡಿಮೆ: ಮಣ್ಣಿನಿಂದ ತಯಾರಿಸಿದ ಮಡಕೆಗಳ ಗಾತ್ರದ ಮೇಲೆ ಬೆಲೆ ನಿರ್ಧಾರವಾಗುತ್ತಿದ್ದು, ಮಡಿಕೆಗಳನ್ನು 100 ರೂ.ನಿಂದ 200 ರೂ.ವರೆಗೆ ಮಾರಾಟ ಮಾಡಲಾಗುತ್ತದೆ. ಬಡವರ ಪ್ರಿಜ್‌ಗೆ ಶ್ರೀಮಂತರು ಮಾರು ಹೋಗಿದ್ದಾರೆ. ನಗರದ ಸರಕಾರಿ ಕಚೇರಿ, ಖಾಸಗಿ ಕಚೇರಿಗಳಲ್ಲೂ ಮಡಕೆಗಳಿಗೆ ಜಾಗ ದೊರೆಯಲಾರಂಭಿಸಿದೆ. ನಗರದಲ್ಲಿ ಹಾಗೂ ತಾಲೂಕಿನ ಮಲಪನಗುಡಿ ಭಾಗದಲ್ಲಿ ಮಡಕೆ ತಯಾರಿಕೆ ನಡೆಯುತ್ತಿತ್ತು. ಜಾಗತೀಕರಣದ ಹೊಡೆತದಿಂದಾಗಿ ಗುಡಿ ಕೈಗಾರಿಕೆ ಮುಚ್ಚಿವೆ. ಸಹಜವಾಗಿಯೇ ಬೇರೆ ಕಡೆಯಿಂದ ರಫ್ತಾಗುತ್ತಿವೆ.

....

ಬೇಸಿಗೆ ಗಾಲದಲ್ಲಿ ಮಡಕೆಗಳಿಗೆ ಭಾರಿ ಬೇಡಿಕೆ ಬರಲಿದೆ. ಈಗಲೇ ಜನರು ಖರೀದಿಸುತ್ತಿದ್ದಾರೆ. ಬಿಸಿಲು ಆರಂಭಗೊಂಡಿರುವುದರಿಂದ ಜನರು ಖರೀದಿಸುತ್ತಿದ್ದಾರೆ.

-ಫಕ್ಕೀರಮ್ಮ, ಹೊನ್ನೂರಮ್ಮ ಕುಂಬಾರ ಮಹಿಳೆಯರು

ಈಗಲೇ ನಗರದಲ್ಲಿ ಬಿಸಿಲು ಜಾಸ್ತಿಯಾಗಿದೆ. ಬೇಸಿಗೆ ಗಾಲದಲ್ಲಿ ಕುಂಬಾರ ಮಡಕೆಯ ನೀರೇ ಆಸರೆಯಾಗಿದೆ. ಹೀಗಾಗಿ ಮಣ್ಣಿನ ಮಡಕೆಗಳನ್ನು ಖರೀದಿಸುತ್ತಿದ್ದೇವೆ.

-ಪ್ರಕಾಶ್‌, ನಂದರಾಜ್‌ ಹೊಸಪೇಟೆ ನಿವಾಸಿಗಳು

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ