ಆ್ಯಪ್ನಗರ

ಭಕ್ತಸಾಗರದ ಮಧ್ಯೆ ಕೊಟ್ಟೂರೇಶ್ವರ ಸ್ವಾಮಿಯ ಅದ್ಧೂರಿ ರಥೋತ್ಸವ

ಪಟ್ಟಣದ ಪ್ರಸಿದ್ಧ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾ ರಥೋತ್ಸವ, ಎರಡೂ ಲಕ್ಷ ಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಜೆ ಅದ್ಧೂರಿಯಾಗಿ ಜರುಗಿತು.

Vijaya Karnataka 1 Mar 2019, 4:25 pm
ಕೊಟ್ಟೂರು (ಬಳ್ಳಾರಿ) : ಪಟ್ಟಣದ ಪ್ರಸಿದ್ಧ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾ ರಥೋತ್ಸವ, ಎರಡೂ ಲಕ್ಷ ಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಜೆ ಅದ್ಧೂರಿಯಾಗಿ ಜರುಗಿತು.
Vijaya Karnataka Web among the devotees is the grand chariot of kottureshwara swamy
ಭಕ್ತಸಾಗರದ ಮಧ್ಯೆ ಕೊಟ್ಟೂರೇಶ್ವರ ಸ್ವಾಮಿಯ ಅದ್ಧೂರಿ ರಥೋತ್ಸವ


ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀ ಸ್ವಾಮಿಯ ಮೂರ್ತಿಯನ್ನು ಸಕಲ ಮಂಗಳ ವಾದ್ಯಗಳೊಂದಿಗೆ ರಥದ ಬಳಿ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ದೇವಸ್ಥಾನದ ಅರ್ಚಕ ಸಿಎಚ್‌ಎಂ ನಾಗರಾಜಸ್ವಾಮಿ ಅವರು, ಮೂರ್ತಿಯನ್ನು ತಲೆ ಮೇಲೆ ಹೊತ್ತು ರಥವನ್ನೇರಿ, ರಥದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿದರು.

ನೆರೆದ ಸಹಸ್ರಾರು ಭಕ್ತರು, ಮಿಣಿ (ಹಗ್ಗ) ಹಿಡಿದು ಜಯಘೋಷ ಹಾಕುತ್ತ ರಥ ಎಳೆದರು. ರಥ ಮುಂದೆ ಸಾಗುವ ಕ್ಷ ಣಕ್ಕಾಗಿ ತಾಸುಗಟ್ಟಲೇ ಕಾದು ನಿಂತಿದ್ದ ಭಕ್ತಸಾಗರ, ''ಕೊಟ್ಟೂರು ದೊರೆಯೇ ನಿನಗಾರು ಸರಿಯೇ, ಸರಿ ಸರಿ ಎಂದವರ ಹಲ್ಲು ಮುರಿಯೇ... ಭೋ ಫರಾಕ್‌...''ಎಂದು ಘೋಷಣೆ ಹಾಕುತ್ತ ರಥಕ್ಕೆ ಬಾಳೆಹಣ್ಣು, ದವಸ, ಧಾನ್ಯ ಎಸೆದು ಭಕ್ತಿ ಸಮರ್ಪಿಸಿದರು.

ಸಂಜೆ 5.20ಕ್ಕೆ ಪ್ರಾರಂಭವಾದ ರಥೋತ್ಸವ, ಹ್ಯಾಳ್ಯಾ ರಸ್ತೆಯ ಪಾದಗಟ್ಟೆಯವರೆಗೆ ತೆರಳಿ ನಂತರ ಅದೇ ಮಾರ್ಗವಾಗಿ ವಾಪಸ್‌ ಬಂದು, ರಥ ಬೀದಿಯಲ್ಲಿ ರಾತ್ರಿ 7.15ರ ಹೊತ್ತಿಗೆ ನೆಲೆ ನಿಂತಿತು.

ಮಧ್ಯಾಹ್ನದ ಸಮಯದಲ್ಲಿ ಪೂಜೆ ನೆರವೇರಿದ ನಂತರ ಶ್ರೀ ಸ್ವಾಮಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂಡಿಸಿಕೊಂಡು ಕ್ರಿಯಾಮೂರ್ತಿಗಳಾದ ಶ್ರೀ ಶಿವಪ್ರಕಾಶ ದೇವರ ನೇತೃತ್ವದಲ್ಲಿ ಸಮಾಳ, ನಂದೀಕೋಲು ವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು. ದಲಿತ ಕೇರಿ ಬಳಿ ಬಂದಾಗ ಮಡಿ ಉಡಿಯಿಂದಿದ್ದ ಉಡುಸಲಮ್ಮ ಅವರು, ಸಂಪ್ರದಾಯದಂತೆ ತನ್ನ ಮನೆಯಿಂದ ಕಳಸ ಹಿಡಿದು ಬಂದು ಸ್ವಾಮಿಗೆ ಆರತಿ ಬೆಳಗಿದರು. ನಂತರ ಪಲ್ಲಕ್ಕಿ ಉತ್ಸವ ಮುಂದುವರಿಯಿತು. ಇದನ್ನು ನೋಡಲು ಸ್ಥಳದಲ್ಲಿ ಅಪಾರ ಭಕ್ತರು ಸೇರಿದ್ದರು. ಧರ್ಮಕರ್ತ ಸಿಎಚ್‌ಎಂ ಗಂಗಾಧರ ಇತರರಿದ್ದರು.

ಸಂಸದ, ಶಾಸಕ ಹೆಜ್ಜೆ: ಶ್ರೀ ಮಠದಿಂದ ರಥದವರೆಗೆ ಹೊರಟ ಪಲ್ಲಕ್ಕಿ ಉತ್ಸವದುದ್ದಕ್ಕೂ ಸಂಸದ ವಿ.ಎಸ್‌.ಉಗ್ರಪ್ಪ, ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್‌.ಭೀಮಾನಾಯ್ಕ ಹೆಜ್ಜೆ ಹಾಕಿದರು. ರಥದ ಬಳಿ ಬಂದು ಭಕ್ತಿ ಸಮರ್ಪಿಸಿ ರಥ ಎಳೆದರು. ಇವರಿಗೆ ಜಿ.ಪಂ. ಸದಸ್ಯ ಎಂಎಂಜೆ ಹರ್ಷವರ್ಧನ್‌, ಕಾಂಗ್ರೆಸ್‌ ಮುಖಂಡ ಪಿ.ಎಚ್‌.ದೊಡ್ಡರಾಮಣ್ಣ ಸಾಥ್‌ ನೀಡಿದರು. ಜಿಲ್ಲಾಧಿಕಾರಿ ಡಾ.ರಾಮ್‌ಮನೋಹರ ಪ್ರಸಾತ್‌, ಎಸ್‌ಪಿ ರಂಗರಾಜನ್‌, ತಹಸೀಲ್ದಾರ್‌ ಅನಿಲ್‌ಕುಮಾರ್‌ ಜಿ. ಪಾಲೊಂಡಿದ್ದರು. ಡಿವೈಎಸ್‌ಪಿ ಬಸವೇಶ್ವರ ಹೀರಾ, ಸಿಪಿಐ ರವೀಂದ್ರ ಕುರುಬರಗಟ್ಟಿ, ಪಿಎಸ್‌ಐ ತಿಮ್ಮಣ್ಣ ಎಸ್‌.ಚಾಮನೂರ್‌ ಬಂದೋಬಸ್ತ್‌ ಉಸ್ತುವಾರಿ ವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ