ಬಳ್ಳಾರಿ: ಇಲ್ಲಿನ 8ನೇ ವಾರ್ಡಿನ ಪಾಲಿಕೆ ಸದಸ್ಯ ಅಂದ್ರಾಳ್ ಸೀತರಾಮ್ ಅವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ, ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ಆರ್.ಚೇತನ್ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಮಾಹಿತಿ ನೀಡಿದ ಅವರು, ''ಸೀತರಾಮ್ ಅವರ ವಿರುದ್ಧ ನಾನಾ ಪ್ರಕರಣಗಳಿವೆ. ಅವರ ಕೊಲೆ ಯತ್ನಕ್ಕೆ ಸಂಬಂದಿಸಿ ತನಿಖೆ ಮುಂದುವರಿದಿದೆ. ಬಳ್ಳಾರಿ ನಗರ ಠಾಣೆ ಡಿವೈಎಸ್ಪಿ ಮತ್ತು ಬ್ರೂಸ್ಪೇಟೆ ಠಾಣೆ ಸಿಪಿಐ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿದೆ. ಘಟನೆ ನಂತರ ಆಂಧ್ರ ಮೂಲದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಶಂಕೆ ಮೇಲೆ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಜಗಳವೆಂದು ತನ್ನನ್ನು ಕರೆದುಕೊಂಡು ಬಂದಿದ್ದಾರೆ. ಕೊಲೆ ಯಾರು ಮಾಡಿಸಿದ್ದಾರೆಂಬುದು ತನಗೆ ತಿಳಿದಿಲ್ಲ ಎಂದು ಈ ವ್ಯಕ್ತಿ ಹೇಳಿದ್ದಾನೆ. ಆರೋಪಿಗಳ ಪತ್ತೆಗೆ ತಂಡಗಳು ಕಾರ್ಯೋನ್ಮುಖವಾಗಿವೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ'' ಎಂದಿದ್ದಾರೆ.