ಆ್ಯಪ್ನಗರ

'ವಿಜಯನಗರ'ದ ವಿರುದ್ಧ ಬಂಡೆದ್ದ ಬಳ್ಳಾರಿ ಜನತೆ! ಮಂಗಳವಾರ ಬಳ್ಳಾರಿ ಬಂದ್‌

ಅವಿಭಜಿತ ಬಳ್ಳಾರಿ ಜಿಲ್ಲೆಗಾಗಿ ಕೂಗು ತೀವ್ರಗೊಂಡಿದೆ. ವಿಜಯನಗರ ಜಿಲ್ಲಾ ರಚನೆಗೆ ಕೆಲವು ಪರವಾಗಿ ವಾದ ಮಂಡಿಸಿದರೆ, ಬಹುತೇಕರು ವಿಜಯನಗರ ಜಿಲ್ಲಾ ರಚನೆಯ ವಿರೋಧವಾಗಿ ನಿಂತಿದ್ದಾರೆ. ಖುದ್ದು ಬಿಜೆಪಿ ಶಾಸಕರೇ ವಿಜಯನಗರ ಜಿಲ್ಲಾ ರಚನೆ ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಬಂದ್ ಕರೆಯನ್ನೂ ಕೊಟ್ಟಿದ್ಧಾರೆ.

Vijaya Karnataka 30 Sep 2019, 8:55 pm
ಬಳ್ಳಾರಿ: ರಾಜ್ಯ ರಾಜಕಾರಣದಲ್ಲಿ ಸದ್ಯ ಉಪಚುನಾವಣೆ ವಿಷಯವೇ ಬಹುಚರ್ಚಿತ. ಆದರೆ, ಗಣಿ ಜಿಲ್ಲೆಯಲ್ಲಿ ವಿಜಯನಗರ ಜಿಲ್ಲಾ ರಚನೆ ವಿಷಯ, ಉಪಚುನಾವಣೆ ಕಾವು ಮೀರಿಸಿದೆ. ಆಡಳಿತಾರೂಢ ಬಿಜೆಪಿ ಸರಕಾರದ ಶಾಸಕರ ಮಧ್ಯೆಯೇ ಸಂಘರ್ಷಕ್ಕೆ ಎಡೆಮಾಡಿದೆ.
Vijaya Karnataka Web bundh


ಬಳ್ಳಾರಿ ಜಿಲ್ಲೆ ವಿಭಜಿಸಿ, ಹೊಸಪೇಟೆ ಕೇಂದ್ರವಾಗಿಟ್ಟುಕೊಂಡು ನೂತನ 'ವಿಜಯನಗರ' ಜಿಲ್ಲೆ ರಚನೆಗೆ ಪರ-ವಿರೋಧ ಚರ್ಚೆಗಳು ಗರಿಗೆದರಿವೆ. ಅನರ್ಹ ಶಾಸಕರು ಹಾಗೂ ಹಾಲಿ ಬಿಜೆಪಿ ಶಾಸಕರ ನಡುವೆ ಶೀತಲ ಸಮರಕ್ಕೆ ವೇದಿಕೆಯಾಗಿದೆ. ವಿಜಯನಗರ ಕ್ಷೇತ್ರದ ಶಾಸಕರಾಗಿದ್ದ ಆನಂದ್‌ ಸಿಂಗ್‌, ಇದೀಗ ಅನರ್ಹ ಶಾಸಕರಾಗಿದ್ದಾರೆ. ಉಪಚುನಾವಣೆ ಘೋಷಣೆ ಮುನ್ನವೇ ವಿಜಯನಗರ ಜಿಲ್ಲೆಯನ್ನಾಗಿಸಲು ಅವರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ನೂತನ ಜಿಲ್ಲೆ ರಚನೆಗೆ ಸಿಎಂ ಯಡಿಯೂರಪ್ಪ ಅವರೂ ಹೆಚ್ಚಿನ ಮುತುವರ್ಜಿ ವಹಿಸಿರುವುದು ಕುತೂಹಲ ಮೂಡಿಸಿದೆ. ಈ ನಡುವೆ ಅನರ್ಹ ಶಾಸಕರ ಬೇಡಿಕೆಗೆ ರಾಜ್ಯ ಬಿಜೆಪಿ ಸರಕಾರವೂ ಸ್ಪಂದಿಸಿರುವುದು, ಸ್ವಪಕ್ಷದ ಶಾಸಕರ ಕಣ್ಣು ಕೆಂಪಾಗಿಸಿದೆ.

ಬಳ್ಳಾರಿ ನಗರ ಬಿಜೆಪಿ ಶಾಸಕ ಜಿ.ಸೋಮಶೇಖರ್‌ ರೆಡ್ಡಿ ಹಾಗೂ ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿ, ನೂತನ ಜಿಲ್ಲೆ ರಚನೆಗೆ ವಿರೋಧ ವ್ಯಕ್ತಪಡಿಸಿ, ರಾಜ್ಯ ಸರಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ಮಧ್ಯೆ ವಿವಿಧ ಸಂಘಟನೆಗಳು ನೂತನ ಜಿಲ್ಲೆ ವಿರೋಧಿಸಿ ಬಳ್ಳಾರಿ ಬಂದ್‌ಗೆ ಕರೆ ನೀಡಿವೆ. ಈ ಎಲ್ಲ ಬೆಳವಣಿಗೆಗಳಿಂದ ರಾಜ್ಯ ಸರಕಾರಕ್ಕೆ ನೂತನ ಜಿಲ್ಲೆ ವಿಚಾರ ಬಿಸಿತುಪ್ಪವಾಗಿ ಪರಿಣಮಿಸಿದೆ.

ಜೇನುಗೂಡಿಗೆ ಕಲ್ಲು!

ವಿಜಯನಗರ ಜಿಲ್ಲೆಯಾಗಬೇಕೆಂಬ ಕೂಗು ಕಳೆದ ಕೆಲವು ವರ್ಷಗಳಿಂದ ಕೇಳಿಬಂದಿದೆ. ಹೊಸಪೇಟೆ ತಾಲೂಕಿನಲ್ಲಿಆಗಾಗ್ಗೆ ವಿವಿಧ ಸಂಘಟನೆಗಳು ಹೋರಾಟ ನಡೆಸಿವೆ. ಇತ್ತೀಚೆಗೆ ಈ ಹೋರಾಟ ತೀವ್ರತೆ ಪಡೆದು, ತಾರ್ಕಿಕ ಹಂತಕ್ಕೆ ತಲುಪಿದೆ. ಆದರೆ ನೂತನ ಜಿಲ್ಲೆ ರಚನೆ ವಿಚಾರ ದಿನದಿಂದ ದಿನಕ್ಕೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.

ಈ ಹಿಂದಿನ ಹಲವು ಸಂದರ್ಭಗಳಲ್ಲಿ ರಾಜ್ಯ ಸರಕಾರದ ಅಳಿವು, ಉಳಿವಿನಲ್ಲಿ ಗಣಿ ಜಿಲ್ಲೆಯ ಪಾತ್ರ ಎದ್ದುಕಾಣುತ್ತಿತ್ತು. ಇತ್ತೀಚೆಗೆ ರಾಜ್ಯ ಸಮ್ಮಿಶ್ರ ಸರಕಾರ ಪತನಕ್ಕೆ ಸಹ ಗಣಿ ಜಿಲ್ಲೆಯೇ ಕಾರಣ ಎನ್ನಲಾಗುತ್ತಿದೆ. ಸದ್ಯ ಬಿಜೆಪಿ ಸರಕಾರ ಆಡಳಿತದಲ್ಲಿದೆ. ಜಿಲ್ಲೆಯಲ್ಲಿಈಗ ಭುಗಿಲೆದ್ದ ನೂತನ ಜಿಲ್ಲೆ ರಚನೆ ವಿಷಯದಲ್ಲಿ ರಾಜ್ಯ ಸರಕಾರಕ್ಕೆ ಕಂಟಕವಾಗಿ ಕಾಡಲಿದೆಯೇ? ಎನ್ನುವ ಪ್ರಶ್ನೆಯೂ ಕೇಳಿಬಂದಿದೆ.

ಭಿನ್ನಾಭಿಪ್ರಾಯ ಬಹಿರಂಗ!

ವಿಜಯನಗರ ನೂತನ ಜಿಲ್ಲೆ ರಚನೆ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಬಿಜೆಪಿ ಶಾಸಕರ ನಡುವೆ ಭಿನ್ನ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಶಾಸಕರಾದ ಜಿ.ಸೋಮಶೇಖರ್‌ ರೆಡ್ಡಿ ಹಾಗೂ ಜಿ.ಕರುಣಾಕರ ರೆಡ್ಡಿ ಅವರು ನೂತನ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಿರುಗುಪ್ಪ ಬಿಜೆಪಿ ಶಾಸಕ ಸೋಮಲಿಂಗಪ್ಪ ಅವರು ನೂತನ ಜಿಲ್ಲೆ ರಚನೆ ಪರ ಬ್ಯಾಟ್ ಬೀಸಿದ್ದಾರೆ. ಮತ್ತೊಂದೆಡೆ ಕೂಡ್ಲಿಗಿಯ ಬಿಜೆಪಿ ಶಾಸಕ ಎನ್‌.ವೈ.ಗೋಪಾಲಕೃಷ್ಣ ಸರಕಾರದ ನಿರ್ಧಾರವನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ ಎನ್ನಲಾಗಿದೆ.

ಹಗರಿಬೊಮ್ಮನಹಳ್ಳಿ ಕಾಂಗ್ರೆಸ್‌ ಶಾಸಕರಾದ ಭೀಮಾನಾಯ್ಕ್, ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್‌ ನಾಯ್ಕ್ ಆಯ ತಾಲೂಕುಗಳನ್ನು ಜಿಲ್ಲೆಯನ್ನಾಗಿಸಲು ಒತ್ತಾಯಿಸಿದ್ದಾರೆ. ಸದ್ಯ ನೂತನ ಜಿಲ್ಲೆ ರಚನೆ ವಿಷಯಕ್ಕೆ ಸಂಬಂಧಿಸಿದಂತೆ ಮೂರು ಭಿನ್ನ ನಿಲುವುಗಳು ಕಂಡುಬಂದಿವೆ. ಜಿಲ್ಲೆಯ ಜನರ ಚಿತ್ತ ಸದ್ಯ ರಾಜ್ಯ ಬಿಜೆಪಿ ಸರಕಾರ ತೆಗೆದುಕೊಳ್ಳಲಿರುವ ನಿರ್ಧಾರದತ್ತ ಹರಿದಿದೆ.

ಮಂಗಳವಾರ ಬಳ್ಳಾರಿ ಬಂದ್‌

ಅಖಂಡ ಬಳ್ಳಾರಿ ಉಳಿವಿಗೆ ಒತ್ತಾಯಿಸಿ, ನಗರದ ವಿವಿಧ ಸಂಘಟನೆಗಳು ಅಕ್ಟೋಬರ್ 1ರಂದು 'ಬಳ್ಳಾರಿ ಬಂದ್‌'ಗೆ ಕರೆ ನೀಡಿವೆ. ಬೆಳಗ್ಗೆ 6ರಿಂದ ಸಂಜೆ 6ವರೆಗೆ ಬಂದ್‌ ನಡೆಸಲಾಗುತ್ತದೆ. ಈಗಾಗಲೇ ಆಟೊಗಳ ಮೂಲಕ ಬಂದ್‌ಗೆ ಸಹಕರಿಸುವಂತೆ ಪ್ರಚಾರ ನಡೆಸಲಾಗಿದೆ. ಕೆಲವು ಖಾಸಗಿ ಶಾಲಾ, ಕಾಲೇಜ್‌ಗಳು ಸ್ವಯಂ ಘೋಷಿತ ರಜೆ ಘೋಷಿಸಿವೆ. ಬಂದ್‌ ತೀವ್ರತೆಯ ಮೇಲೆ ಸರಕಾರಿ ಶಾಲಾ, ಕಾಲೇಜ್‌ಗಳು, ಸರಕಾರಿ ಬಸ್‌ಗಳ ಸಂಚಾರ ಕುರಿತು ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಯಾವ ಪುರುಷಾರ್ಥಕ್ಕೆ ವಿಜಯನಗರ ಜಿಲ್ಲೆ? ಬಿಎಸ್‌ವೈ ವಿರುದ್ಧ ಸಿಡಿದೆದ್ದ ಮತ್ತೊಬ್ಬ ಬಿಜೆಪಿ ಶಾಸಕ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ