ಆ್ಯಪ್ನಗರ

ಅಭಿವೃದ್ಧಿ ಆಧಾರ, ಜಾತಿ ಲೆಕ್ಕಾಚಾರ

ಒಟ್ಟು 9 ಅಭ್ಯರ್ಥಿಗಳನ್ನು ಕಣದಲ್ಲಿ ಹೊಂದಿರುವ ವಿಧಾನಸಭೆ ಚುನಾವಣೆ ಅಖಾಡ ಇದೀಗ ಅಭ್ಯರ್ಥಿಗಳ ಶಕ್ತಿಪ್ರದರ್ಶನಕ್ಕೆ ಸಜ್ಜುಗೊಂಡಿದೆ.

Vijaya Karnataka 30 Apr 2018, 4:00 pm
ಬಸವರಾಜ ಅಯ್ಯನಗೌಡರ, ಹಗರಿಬೊಮ್ಮನಹಳ್ಳಿ
Vijaya Karnataka Web development basis caste calculation
ಅಭಿವೃದ್ಧಿ ಆಧಾರ, ಜಾತಿ ಲೆಕ್ಕಾಚಾರ


ಒಟ್ಟು 9 ಅಭ್ಯರ್ಥಿಗಳನ್ನು ಕಣದಲ್ಲಿ ಹೊಂದಿರುವ ವಿಧಾನಸಭೆ ಚುನಾವಣೆ ಅಖಾಡ ಇದೀಗ ಅಭ್ಯರ್ಥಿಗಳ ಶಕ್ತಿಪ್ರದರ್ಶನಕ್ಕೆ ಸಜ್ಜುಗೊಂಡಿದೆ.

ಈ ಮೊದಲು ಕೂಡ್ಲಿಗಿ ಕ್ಷೇತ್ರದಿಂದ ಬೇರ್ಪಟ್ಟು ಸ್ವತಂತ್ರ ಕ್ಷೇತ್ರವಾಗಿ ಹೊರಹೊಮ್ಮಿದ ಬಳಿಕ ಪ.ಜಾತಿ ಮೀಸಲು ಕ್ಷೇತ್ರವಾಗಿದೆ. ಇದೀಗ 3ಬಾರಿಗೆ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಮೊದಲ ಅವಧಿಯಲ್ಲಿ ಬಿಜೆಪಿ, 2ನೇ ಅವಧಿಗೆ ಜೆಡಿಎಸ್‌ ಜಯಸಾಧಿಸಿತ್ತು. ಈ ಬಾರಿಯ ಮತದಾರರ ಬಲ ಪಡೆಯಲು ಅಭ್ಯರ್ಥಿಗಳು ಬಿರು ಬಿಸಿಲಿನಲ್ಲೂ ಬೆವರಿಳಿಸುತ್ತಿದ್ದಾರೆ. ಮತಕೊಯ್ಲಿಗೆ ಹಲವು ಲೆಕ್ಕಾಚಾರ ಹೊಸೆಯುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿ ತಾರಕಕ್ಕೇರಿದೆ. ಕಾಂಗ್ರೆಸ್‌ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಸಿರಾಜ್‌ಶೇಖ್‌ ಇಂದಿಗೂ ತಮ್ಮ ನಡೆ ಸ್ಪಷ್ಟಪಡಿಸಿಲ್ಲ. ಈವರೆಗೂ ಕೆಪಿಸಿಸಿ ಕಾರ್ಯದರ್ಶಿ ಸಿರಾಜ್‌ ಭೇಟಿ ಹಂತದಲ್ಲಿದ್ದಾರೆ.

ಮತಬೇಟೆಗೆ ಕರಸತ್ತು : ಸಿಪಿಎಂನ ಅಭ್ಯರ್ಥಿ ಬಿ.ಮಾಳಮ್ಮ ಹೋರಾಟಗಳ ಆಧಾರವಾಗಿ ಮತಯಾಚಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ಮಾಜಿ ಶಾಸಕ ಭೀಮಾನಾಯ್ಕ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ನೆಚ್ಚಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ನೇಮರಾಜ ನಾಯ್ಕ ಕೇಂದ್ರ ಸರಕಾರದ ಯೋಜನೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಆಡಳಿತದ ಪ್ರಚಾರದ ಮೂಲಕ ಮತಗಳತ್ತ ಚಿತ್ತ ನೆಟ್ಟಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಪರ ಮಾಜಿ ಶಾಸಕರ ಪತ್ನಿ ಮತ್ತು ಪುತ್ರ ನಿರಂತರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಮಹಿಳಾ ಘಟಕದೊಂದಿಗೆ ವಾಣಿ ನೇಮರಾಜ ನಾಯ್ಕ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿ ಪರಮೇಶ್ವರಪ್ಪ ಅಸ್ಪೃಶ್ಯ ಮತಗಳತ್ತ ಕೇಂದ್ರೀಕರಿಸಿದ್ದಾರೆ.

ನಾಮಪತ್ರ ಸಲ್ಲಿಕೆಯಿಂದ ಆರಂಭಗೊಂಡು ಈವರೆಗೂ ನಿಧಾನವಾಗಿ ಹಣದ ಹೊಳೆ ಚಿಲುಮೆ ರೂಪದಲ್ಲಿ ಹರಿಯುತ್ತಿದೆ. ಪ್ರಮುಖವಾಗಿ ನಾನಾ ಪಕ್ಷ ಗಳ ಮುಖಂಡರು ಪರಸ್ಪರ ಪಕ್ಷ ಬದಲಿಸುತ್ತಿರುವುದು ಸಾಮಾನ್ಯವಾಗಿದೆ. ಕ್ರಮೇಣ ದಿನ ಕಳೆದಂತೆ ಹಣದ ಹೊಣೆ ಹರಿಯುವ ಸಾಧ್ಯತೆ ದಟ್ಟವಾಗಿದೆ. ಜಾತಿ ಆಧಾರಿತವಾಗಿ ಮತಗಳ ಲೆಕ್ಕಾಚಾರ ನಡೆದಿದೆ. ಕಳೆದ ಬಾರಿ ಪರಾಭವಗೊಂಡ ಮಾಜಿ ಶಾಸಕ ನೇಮರಾಜ ನಾಯ್ಕ ಪಾಲಿಗೆ ಚುನಾವಣೆ ಪ್ರೊ ಕಬಡ್ಡಿಯ ಡು ಆರ್‌ ಡೈ ರೈಡ್‌ನಂತಿದೆ. ಕಾಂಗ್ರೆಸ್‌ ಅಭ್ಯರ್ಥಿ ಭೀಮನಾಯ್ಕ ಪುನರಾಯ್ಕೆಗೆ ಭಾರಿ ಕಸರತ್ತು ಆರಂಭಿಸಿದ್ದಾರೆ. ಬಿಜೆಪಿಯ ಪ್ರಮುಖ ಮುಖಂಡರು ಇದೀಗ ಕಾಂಗ್ರೆಸ್‌ನತ್ತ ದೃಷ್ಟಿ ಹರಿಸಿರುವ ಹಿನ್ನೆಲೆಯಲ್ಲಿ ಕದನ ಕುತೂಹಲ ಹೆಚ್ಚಿದೆ.

ಬಿಗಿಭದ್ರತೆ: ಮತ್ತೊಂದೆಡೆ ಚುನಾವಣೆ ಕಾವೇರುತ್ತಿರುವ ಹಿನ್ನೆಲೆಯಲ್ಲಿ ನಾನಾ ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗುತ್ತಿದೆ. ಇಂಡೋ ಟಿಬೇಟಿಯನ್‌ ಗಡಿಭದ್ರತೆ ಪೊಲೀಸ್‌ ತುಕಡಿ ಮದ್ಯ ಮತ್ತು ಹಣದ ಅಕ್ರಮ ಸಾಗಣೆಗೆ ತಡೆಗೆ ವಾಹನಗಳ ತಪಾಸಣೆಯಲ್ಲಿ ತೊಡಗಿದೆ. ಒಟ್ಟು 7ಚೆಕ್‌ ಪೋಸ್ಟ್‌ಗಳಲ್ಲಿ ಸ್ಥಳೀಯ ಪೊಲೀಸರೊಂದಿಗೆ ನೀತಿ ಸಂಹಿತೆ ಪಾಲನೆ ತಂಡ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಕಾಯುತ್ತಿದೆ. ಚುನಾವಣಾಧಿಕಾರಿಗಳು ನಾನಾ ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಯಾವುದೇ ಕ್ಷ ಣದಲ್ಲೂ ದಾಳಿ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಮ್ಮ ಮೊಬೈಲ್‌ ನಂಬರ್‌ ಬದಲಾಯಿಸಿಕೊಂಡು ಮುಖಂಡರೊಂದಿಗೆ ಸಂಭಾಷಣೆ ನಡೆಸುತ್ತಿದ್ದಾರೆ. ಈ ಹಿಂದಿನ ಬಿಇಒ ಪಾರಿ ಬಸವರಾಜ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಡಿಸಿ ನೋಟಿಸ್‌ ಜಾರಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಬಿಇಒ ಸಮ್ಮುಖದಲ್ಲಿ ಶಿಕ್ಷ ಕರ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಯಾವುದೇ ಪಕ್ಷ ಮತ್ತು ಅಭ್ಯರ್ಥಿಪರ ಪ್ರತ್ಯಕ್ಷ ಹಾಗೂ ಪರೋಕ್ಷ ವಾಗಿ ಪ್ರಚಾರ ನಡೆದಂತೆ ತಾಕೀತು ಮಾಡಿದ್ದಾರೆ.

===

ಚುನಾವಣೆಯಲ್ಲಿ ನೀತಿ ಸಂಹಿತೆ ಪಾಲನೆ ಕುರಿತಂತೆ ಶಿಕ್ಷ ಕರು ಸೇರಿ ಹಲವರಿಗೆ ಸಭೆ ಮೂಲಕ ಎಚ್ಚರಿಕೆ ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಕುರಿತು ವಿಡಿಯೊ ಮತ್ತು ಆಡಿಯೊ ಕ್ಲಿಪ್ಪಿಂಗ್‌ ಒದಗಿದರೆ ತಕ್ಷ ಣವೇ ಕ್ರಮ ಕೈಗೊಳ್ಳಲಾಗುವುದು.

- ಎಂ.ಎಸ್‌.ಅಲ್ಲಾಬಕಷ್‌, ಚುನಾವಣಾಧಿಕಾರಿ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ