ಕರ್ತವ್ಯ ಲೋಪ: ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಂಧನ
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ 66 ಲಕ್ಷ ರೂ. ಅನುದಾನವನ್ನು ಜಿಪಂ ಸಿಇಒ ಕೌಂಟರ್ ಸಹಿ ಇಲ್ಲದೇ ಬಳಸಿದ ಆರೋಪ ಆಧರಿಸಿ, ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಅವರನ್ನು ಪೊಲೀಸರು, ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Vijaya Karnataka 24 Nov 2017, 7:57 am
ಬಳ್ಳಾರಿ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ 66 ಲಕ್ಷ ರೂ. ಅನುದಾನವನ್ನು ಜಿಪಂ ಸಿಇಒ ಕೌಂಟರ್ ಸಹಿ ಇಲ್ಲದೇ ಬಳಸಿದ ಆರೋಪ ಆಧರಿಸಿ, ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಅವರನ್ನು ಪೊಲೀಸರು, ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕ್ರಿಯಾಯೋಜನೆಗೆ ಅನುಮೋದನೆ ಇಲ್ಲದೇ ಕೆಲವು ಕಾಮಗಾರಿಗಳನ್ನು ಕೈಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ, ರಾಜು ಬಾವಿಹಳ್ಳಿ ವಿರುದ್ಧ ಜಿ.ಪಂ. ಸಿಇಒ ಸೂಚನೆಯಂತೆ, ಜಿ.ಪಂ. ಕಾರ್ಯದರ್ಶಿ ಭಜಂತ್ರಿ ಅವರು, ಕೌಲ್ಬಜಾರ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ದೂರು ಆಧರಿಸಿ ರಾಜು ಬಾವಿಹಳ್ಳಿ ಅವರು ಕಳೆದ ತಿಂಗಳು ಸೇವೆಯಿಂದ ಅಮಾನತುಗೊಂಡಿದ್ದಾರೆ. ಸಿಪಿಐ ಪ್ರಸಾದ್ ಗೋಖಲೆ ಹಾಗೂ ಪಿಎಸ್ಐ ವಸಂತ್ಕುಮಾರ್ ನೇತೃತ್ವದ ತಂಡ, ಅವರನ್ನು ನಗರದಲ್ಲಿ ಗುರುವಾರ ಬಂಧಿಸಿದೆ.
ಮತ್ತೊಂದೆಡೆ ಅವರು ದಾಖಲೆಯೊಂದರಲ್ಲಿ 50 ಸಾವಿರ ರೂ. ಮೊತ್ತವನ್ನು 5 ಲಕ್ಷ ರೂ.ಗಳೆಂದು ತಿದ್ದಿರುವ ಆರೋಪವನ್ನೂ ಎದುರಿಸುತ್ತಿದ್ದಾರೆ. ಸಿಇಒ ಕೌಂಟರ್ ಸಹಿ ಇಲ್ಲದೇ ಖಜಾನೆಯಿಂದ ಹಣ ಬಿಡುಗಡೆಮಾಡಿರುವ ಆರೋಪ ಆಧರಿಸಿ, ಖಜಾನೆ ಇಲಾಖೆ ಅಧಿಕಾರಿಯ ವಿರುದ್ಧವೂ ದೂರು ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.