ಆ್ಯಪ್ನಗರ

ಹಣಕಾಸು ಗದ್ದಲ, ತೆರಿಗೆ ಕೋಲಾಹಲ

ತೆರಿಗೆ ಸಂಗ್ರಹಣೆ ಮತ್ತು 14ನೇ ಹಣಕಾಸು ಯೋಜನೆ ಅನುದಾನ ಬೇಕಾಬಿಟ್ಟಿ ಬಳಕೆಯಾಗುತ್ತಿರುವುದಾಗಿ ತಾ.ಪಂ.ಸಾಮಾನ್ಯಸಭೆಯಲ್ಲಿ ಶುಕ್ರವಾರ ಪಿಡಿಒಗಳ ವಿರುದ್ಧ ತಾ.ಪಂ.ಸದಸ್ಯರು ಹರಿಹಾಯ್ದರು.

Vijaya Karnataka 23 Jun 2018, 5:00 am
ಹಗರಿಬೊಮ್ಮನಹಳ್ಳಿ : ತೆರಿಗೆ ಸಂಗ್ರಹಣೆ ಮತ್ತು 14ನೇ ಹಣಕಾಸು ಯೋಜನೆ ಅನುದಾನ ಬೇಕಾಬಿಟ್ಟಿ ಬಳಕೆಯಾಗುತ್ತಿರುವುದಾಗಿ ತಾ.ಪಂ.ಸಾಮಾನ್ಯಸಭೆಯಲ್ಲಿ ಶುಕ್ರವಾರ ಪಿಡಿಒಗಳ ವಿರುದ್ಧ ತಾ.ಪಂ.ಸದಸ್ಯರು ಹರಿಹಾಯ್ದರು.
Vijaya Karnataka Web BLR-BLY22HBH1


14 ನೇ ಹಣಕಾಸು ಯೋಜನೆ ಅನುದಾನವನ್ನು ಮನಬಂದಂತೆ ಬಳಕೆ ಮಾಡಲಾಗುತ್ತಿದೆ. ಅನುದಾನ ಬಳಕೆ ಕುರಿತಂತೆ ದಾಖಲೆ ಒದಗಿಸುವಂತೆ ಕೋರಿದ್ದರೂ ಪಿಡಿಒಗಳು ನಿರ್ಲಕ್ಷ ್ಯವಹಿಸಿದ್ದಾರೆ ಎಂದು ತಾ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಸಭೆಯ ಆರಂಭದಲ್ಲೇ ಪಿಡಿಒಗಳ ವಿರುದ್ಧ ಗುಡುಗಿದರು. ಬಳಿಕ ಬನ್ನಿಗೋಳ ಗ್ರಾ.ಪಂ.ಯಲ್ಲಿ 14ನೇ ಹಣಕಾಸು ಯೋಜನೆಯಡಿ ಮೊದಲ ಕಂತಿನಲ್ಲಿ 13.85 ಲಕ್ಷ ರೂ., 2ನೇ ಕಂತಿನಲ್ಲಿ 11 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ. ಬೀದಿ ದೀಪ ಮತ್ತು ಚರಂಡಿ ಅಭಿವೃದ್ಧಿಗೆ ಬಳಸಿದೆ ಎಂದು ಪಿಡಿಒ ಚನ್ನನಾಯ್ಕ ತಿಳಿಸಿದರು. ಮೀನುಗಾರರ ನಾಡದೋಣಿಗಳಿಗೆ ಪಡೆದ ತೆರಿಗೆಯ 85 ಸಾವಿರ ರೂ.ಮೊತ್ತದಲ್ಲಿ ಸಿಬ್ಬಂದಿ ವೇತನ ನೀಡಲಾಗಿದೆ ಎಂದು ಪಿಡಿಒ ಚನ್ನನಾಯ್ಕ ತಿಳಿಸಿದರು. ಅನುದಾನದ ಶೇ.50 ರಷ್ಟನ್ನು ಅಭಿವೃದ್ಧಿ ಬಳಸದೇ ಸ್ವ ಇಚ್ಛೆಯಂತೆ ಪಿಡಿಒ ಬಳಕೆಮಾಡಿರುವುದಾಗಿ ಸದಸ್ಯ ಪಾಂಡುನಾಯ್ಕ ಆರೋಪಿಸಿದರು.

ನೋಟಿಸ್‌: ಅಂಬಳಿ ಗ್ರಾ.ಪಂ.ವ್ಯಾಪ್ತಿಯ ಸೋಲಾರ್‌ ಕಂಪನಿಯಿಂದ ತೆರಿಗೆ ವಸೂಲಿ ಕುರಿತಂತೆ ಕ್ರಮ ವಹಿಸಲು ತಾ.ಪಂ.ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಸೂಚಿಸಿದಾಗ, ಈಗಾಗಲೇ ನೋಟಿಸ್‌ ನೀಡಲಾಗಿದೆ ಎಂದು ಪಿಡಿಒ ರಾಘವೇಂದ್ರ ತಿಳಿಸಿದರು. ಎನ್‌ಎಗೆ ಪರವಾನಗಿ ಪಡೆಯದ ಸೋಲಾರ್‌ಕಂಪನಿಗೆ ವಕೀಲರ ಮೂಲಕ ನೋಟಿಸ್‌ ನೀಡಿ ಎಂದು ಪ್ರಭಾರಿ ಇಒ ವಿಶ್ವನಾಥ ಸೂಚನೆ ನೀಡಿದರು. 14ನೇ ಹಣಕಾಸು ಯೋಜನೆಯಡಿ 11.13ಲಕ್ಷ ರೂ ಪೈಕಿ 7ಲಕ್ಷ ರೂ.ಮೊತ್ತದಲ್ಲಿ ಚರಂಡಿ ಮತ್ತು ಬೀದಿದೀಪ ಅಭಿವೃದ್ಧಿಪಡಿಸಲಾಗಿದೆ ಎಂದು ಪಿಡಿಒ ತಿಳಿಸಿದರು.

ಸದಸ್ಯರ ಸಿಡಿಮಿಡಿ: ಗದ್ದಿಕೇರಿ ಗ್ರಾ.ಪಂ.ಯಲ್ಲಿ 14ನೇ ಹಣಕಾಸು ಯೋಜನೆಯಡಿ 7.15 ಲಕ್ಷ ರೂ.ಮೊತ್ತದಲ್ಲಿ ಬ್ಲೀಚಿಂಗ್‌ ಪೌಡರ್‌, ಚರಂಡಿ ನಿರ್ವಹಣೆ ಮತ್ತು ಕುಡಿವ ನೀರಿನ ಮೋಟಾರ್‌ ದುರಸ್ತಿ ಕೈಗೊಳ್ಳಲಾಗಿದೆ ಎಂದು ಪಿಡಿಒ ಜ್ಞಾನೇಶ್ವರಯ್ಯ ತಿಳಿಸಿದರು. ಯೋಜನೆಯಡಿ 2ನೇ ಕಂತಿನ 7.70ಲಕ್ಷ ರೂ.ಅನುದಾನಕ್ಕೆ ಅನುಮೋದನೆ ಒದಗಿಲ್ಲ ಎಂದರು. ಮಾದೂರು ಗ್ರಾಮದಲ್ಲಿ ಅನಧಿಕೃತ ಕಲ್ಲುಗಣಿಗಾರಿಕೆ ವಿರುದ್ಧ ಕ್ರಮ ಜರುಗಿಸುವಂತೆ ಇಒ ಆದೇಶಿಸಿದರು. ಆನೇಕಲ್‌ನಲ್ಲಿ ಜಿಯೋ ಟವರ್‌ ಸ್ಥಾಪನೆಗೆ ಎನ್‌ಒಸಿ ನೀಡಿಲ್ಲವೆಂದು ಪಿಡಿಒ ಖಾಜಬನ್ನಿ ಸ್ಪಷ್ಟಪಡಿಸಿದರು. ಬಿಎಸ್‌ಎನ್‌ಎಲ್‌ ಮತ್ತು ಏರ್‌ಟೆಲ್‌ ಟವರ್‌ಗಳಿಗೆ ತೆರಿಗೆ ಪಡೆಯಿರಿ ಎಂದು ಸದಸ್ಯ ಮಾಳಿಗಿ ಗಿರೀಶ್‌ ಸೂಚಿಸಿದರು.

ಆಯ್ಕೆ ಅಕ್ರಮ: ಬ್ಯಾಸಿಗೆದೇರಿ ಗ್ರಾ.ಪಂ.ಯಲ್ಲಿ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿಲ್ಲ. ಮೂಲೆಯೊಂದರಲ್ಲಿ ಕುಳಿತು ಆಯ್ಕೆಪ್ರಕ್ರಿಯೆ ನಡೆಸಲಾಗಿದೆ ಎಂದು ಸದಸ್ಯ ತಿಪ್ಪೇರುದ್ರಮುನಿ ಕೋಪಗೊಂಡರು. ತಮ್ಮ ಸೇವೆ ಅವಧಿಯಲ್ಲಿ ಕದ್ದುಮುಚ್ಚಿ ಫಲಾನುಭವಿಗಳ ಆಯ್ಕೆ ನಡೆಸಿಲ್ಲ ಎಂದು ಸದಸ್ಯರಿಗೆ ಪಿಡಿಒ ಬಿಸಿಮುಟ್ಟಿಸಿದರು. ಸಭೆಯ ವಿಡಿಯೋ ಪ್ರತಿ ಒದಗಿಸುವಂತೆ ಸದಸ್ಯ ಒತ್ತಾಯಿಸಿದರು. ಪ್ರತಿ ಗ್ರಾ.ಪಂ.ಗಳಲ್ಲಿ ಗ್ರಾಮಸಭೆ ಕುರಿತಂತೆ ವಿಳಂಬವಾಗಿ ಮಾಹಿತಿ ನೀಡಲಾಗುತ್ತಿದೆ ಎಂದು ಅಧ್ಯಕ್ಷೆ ನಾಗಮ್ಮ ತಿಳಿಸಿದರು.

ತೆರಿಗೆ ಗುರಿ: ಶೇ.95ರಷ್ಟು ತೆರಿಗೆ ಸಂಗ್ರಹಣೆ ಗುರಿ ನಿಗದಿಪಡಿಸಿ ಸಭೆ ನಡವಳಿಕೆ ಕೈಗೊಳ್ಳಲಾಗಿದೆ ಎಂದು ಇಒ ತಿಳಿಸಿದರು. ಕೋಗಳಿ ಗ್ರಾ.ಪಂ.ಯಲ್ಲೂ ವಸತಿ ಫಲಾನುಭವಿಗಳ ಆಯ್ಕೆ ಸಕ್ರಮವಾಗಿಲ್ಲ, ಈ ಹಿಂದೆ ಆಯ್ಕೆಯಾದ ಫಲಾನುಭವಿಗಳಿಗೆ ಮೊತ್ತ ಪಾವತಿಯಾಗಿಲ್ಲವೆಂದು ಸದಸ್ಯ ನಾಗನಾಯ್ಕ ಪಿಡಿಒ ತಿಪ್ಪೇಸ್ವಾಮಿಗೆ ತರಾಟೆ ತೆಗೆದುಕೊಂಡರು. ಈಗಾಗಲೆ ಜಿಪಿಎಸ್‌ ನಡೆಸಿದ ಫಲಾನುಭವಿಗಳಿಗೆ ಹಂತವಾಗಿ ಮೊತ್ತ ಪಾವತಿಸಲಾಗುತ್ತಿದೆ ಎಂದು ಪಿಡಿಒ ತಿಳಿಸಿದರು. ವಸತಿ ಮತ್ತು ನಿವೇಶನರಹಿತರ ಪಟ್ಟಿ ಸಿದ್ಧತೆ ಕುರಿತು ಡಂಗೂರ ಹೊಡೆಸಿ ಮಾಹಿತಿ ನೀಡಿ ಎಂದು ಇಒ ಆದೇಶಿಸಿದರು.

ದುರಸ್ತಿಗೆ ಆಗ್ರಹ: ನಂದಿಪುರ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಕೆಲ ತಿಂಗಳಿಂದ ಸ್ಥಗಿತಗೊಂಡಿರುವುದಾಗಿ ಪಿಡಿಒ ಮಂಜುನಾಥ ಸಭೆಗೆ ತಿಳಿಸಿದರು. ಹಂಪಸಾಗರ ಮತ್ತು ಹಂಪಾಪಟ್ಟಣ ಘಟಕದ ದುರಸ್ತಿ ಕೈಗೊಳ್ಳುವಂತೆ ಕುಡಿವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಜೆಇಗೆ ಆದೇಶಿಸಲಾಯಿತು. ಕಳೆದ 7 ತಿಂಗಳಿಂದ ಬಾಡಿಗೆ ಆಧರಿತ ಕೊಳವೆ ಬಾವಿಗಳ ನೀರು ಪೂರೈಕೆಗೆ ತಹಸೀಲ್ದಾರ್‌ ಮೊತ್ತ ಪಾವತಿಸಿಲ್ಲ ಎಂದು ಜೆಇ ಸಭೆಗೆ ತಿಳಿಸಿದರು.

ಲೂಟಿ ಬೇಡ: ತಾಲೂಕಿನ 15 ಏತ ನೀರಾವರಿ ಯೋಜನೆಗಳಿವೆ. ಪಂಪಿಂಗ್‌ ಮೆಷಿನ್‌ಗಳ ದುರಸ್ತಿ ಕೈಗೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಜೆಇ ಪರಮೇಶ್ವರಪ್ಪ ತಿಳಿಸಿದರು. ಈವರೆಗೂ ಕಾಲುವೆ ದುರಸ್ತಿಯಾಗಿಲ್ಲ, ಮೂಲ ಉದ್ದೇಶ ಈಡೇರಿಲ್ಲ ಎಂದು ಬುಡ್ಡಿ ಬಸವರಾಜ ತಿಳಿಸಿದಾಗ, ತಿಪ್ಪೇರುದ್ರಮುನಿ ಧ್ವನಿಗೂಡಿಸಿದರು. ಕಳೆದ ಬಾರಿ ಇಲಾಖೆ ರೈತರ ಹೆಸರಿನಲ್ಲಿ ಊಟಿ ಹೊಡೆದಿದೆ. ಈ ಬಾರಿ ಹಾಗಾಗುವುದು ಬೇಡ ಎಂದು ಸದಸ್ಯರು ತಾಕೀತು ಮಾಡಿದರು. ಈ ಬಾರಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಜೆಇ ಪ್ರತಿಕ್ರಿಯಿಸಿದರು. ಎಸ್‌ಸಿಪಿ ಯೋಜನೆಯಡಿ 17 ಚೆಕ್‌ ಡ್ಯಾಂ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದ್ದು, 6 ಕಾಮಗಾರಿ ಪೂರ್ಣಗೊಂಡಿವೆ ಎಂದರು.

ಡೆಂಗೆ ಪತ್ತೆ: ತಾಲೂಕಿನ ವಟ್ಟಮ್ಮನಹಳ್ಳಿ, ವಲ್ಲಬಾಪುರ ಗ್ರಾಮದಲ್ಲಿ ತಲಾ ಒಂದು ಡೆಂಗೆ ಮತ್ತು ಬಸರಕೋಡು ತಾಂಡಾದಲ್ಲಿ ಚಿಕೂನ್‌ ಗುನ್ಯಾ ಪ್ರಕರಣ ಪತ್ತೆಯಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಸುಲೋಚನಾ ತಿಳಿಸಿದರು. ಈ ತಿಂಗಳಲ್ಲಿ ಮಕ್ಕಳಿಗೆ ಓಆರ್‌ಎಸ್‌ ಮತ್ತು ಜಿಂಕ್‌ ಪಾಕೇಟ್‌ ನೀಡುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಜಂತು ಹುಳು ನಾಶಕ ಕಾರ್ಯಕ್ರಮ ಈ ತಿಂಗಳಲ್ಲಿ ನಡೆಯಲಿದೆ ಎಂದರು. ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಪಿ.ಕೊಟ್ರೇಶ್‌, ಪ್ರಭಾಕರ, ಶ್ಯಾಮಲಾ ಮಾಲತೇಶ, ಗೀತಾ, ರಮೀಜಾ ರಾಜಾಭಕ್ಷಿ, ಎಡಿಎಚ್‌ ಡಾ.ಪರಮೇಶ್ವರ, ಪಶುಸಂಗೋಪನೆ ಸಹಾಯಕ ನಿರ್ದೇಶಕ ಡಾ.ಸೂರಪ್ಪ, ಅಕ್ಷ ರ ದಾಸೋಹ ಸಹಾಯಕ ನಿರ್ದೇಶಕ ಕೃಷ್ಣನಾಯ್ಕ, ಜೆಸ್ಕಾಂ ಇಇ ಮೋಟ್ಲನಾಯ್ಕ ಇತರರಿದ್ದರು. ವ್ಯವಸ್ಥಾಪಕ ದಾದಾಪೀರ್‌, ಸಿಬ್ಬಂದಿ ತಳವಾರ ತಿಪ್ಪೇಸ್ವಾಮಿ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ