ಆ್ಯಪ್ನಗರ

ಗಣೇಶ, ಮೊಹರಂ ಹಬ್ಬ : ಶಾಂತಿ ಸಭೆ

ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ಸಂಬಂಧಿಸಿದ ಎಲ್ಲ ಪರವಾನಗಿಗಳ ವಿತರಣೆಗೆ ಒಂದೇ ಸೂರಿನಡಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಬಸವೇಶ್ವರ ಹೀರಾ ಹೇಳಿದರು.

Vijaya Karnataka 3 Sep 2018, 4:27 pm
ಸಂಡೂರು : ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ಸಂಬಂಧಿಸಿದ ಎಲ್ಲ ಪರವಾನಗಿಗಳ ವಿತರಣೆಗೆ ಒಂದೇ ಸೂರಿನಡಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಬಸವೇಶ್ವರ ಹೀರಾ ಹೇಳಿದರು.
Vijaya Karnataka Web ganesh moharam festival peace conference
ಗಣೇಶ, ಮೊಹರಂ ಹಬ್ಬ : ಶಾಂತಿ ಸಭೆ


ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ ಗಣೇಶ ಮತ್ತು ಮೊಹರಂ ಹಬ್ಬದ ನಿಮಿತ್ತ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದರು. ದೇಶ ಜಾತ್ಯತೀತವಾಗಿದ್ದು ನಮ್ಮ ಸಂವಿಧಾನ ಎಲ್ಲ ಧರ್ಮಗಳನ್ನು ಸಮಾನ ರೀತಿ ಕಾಣುವಂತೆ ಸೂಚಿಸುತ್ತದೆ. ಆದ್ದರಿಂದ ಮುಸ್ಲಿಂ, ಕ್ರೈಸ್ತ, ಹಿಂದು ಸೇರಿ ನಾನಾ ಧರ್ಮೀಯರು ಅನ್ಯ ಧರ್ಮದ ಆಚರಣೆಗಳನ್ನು ಗೌರವದಿಂದ ಕಾಣಬೇಕು. ಸಮಾಜದಲ್ಲಿ ಶಾಂತಿ ಕಾಪಾಡಬೇಕು ಎಂದರು.

ತಹಸೀಲ್ದಾರ್‌ ಎಚ್‌.ಎಂ.ರಮೇಶ ಮಾತನಾಡಿ, ಹಬ್ಬವನ್ನು ಆಚರಣೆ ಮಾಡುವ ಉತ್ಸಾಹದ ಭರದಲ್ಲಿ ಅನ್ಯರಿಗೆ ತೊಂದರೆ ಮಾಡಬಾರದು. ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಅಗತ್ಯ ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದರು.

ಪಿಎಸ್‌ಐ ಬಾಳನಗೌಡ ಮಾತನಾಡಿ, ಗಣಪತಿ ಮತ್ತು ಮೊಹರಂ ಹಬ್ಬಗಳು ಜತೆ ಜತೆಗೆ ಬಂದಿದ್ದು ಹಬ್ಬ ಆಚರಣೆಯ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಫಾಗಿಂಗ್‌ ನಡೆಸಿ ಸೊಳ್ಳೆಗಳನ್ನು ಓಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಖಾಜಾ ಮೈನುದ್ದೀನ್‌ ಅವರಿಗೆ ಸೂಚಿಸಿದರು.

ಮುಖಂಡ ಬಿ.ಮಂಜುನಾಥ ಮಾತನಾಡಿ, ಪಟ್ಟಣದ ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಯುವಕರು ಗಾಂಜಾದ ದಾಸರಾಗಿದ್ದಾರೆ. ಕಾಲೇಜುಗಳಲ್ಲಿ ಗಾಂಜಾ ಸೇವನೆಯಿಂದಾಗುವ ಅನಾಹುತಗಳ ಕುರಿತು ಮಾಹಿತಿ ಹಂಚಿಕೆ ಸಭೆ ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಕ್ರಿಯಿಸಿದ ಸಿಪಿಐ ಯಲ್ಲಪ್ಪ ಘೋರ್ಪಡೆ, ಗಾಂಜಾ ಸೇವನೆಯಿಂದ ದೇಹ ನಾಶವಾಗುತ್ತದೆ. ಈಬಗ್ಗೆ ಸದ್ಯದಲ್ಲೇ ಮಾಹಿತಿ ಹಂಚಿಕೆ ಸಭೆಗಳನ್ನು ಏರ್ಪಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಕೆ.ವಿ.ಸುರೇಶ ಸೇರಿದಂತೆ ನಾನಾ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ