ಆ್ಯಪ್ನಗರ

ಸರಕಾರಿ ಕಚೇರಿ, ಸಮಾರಂಭಗಳಿನ್ನು ಪ್ಲ್ಯಾಸ್ಟಿಕ್ ಫ್ರೀ

ಪ್ಲ್ಯಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಟ್ಟಪ್ಪಣೆ ವಿಧಿಸಿದ್ದು, ರಾಜ್ಯದ ಎಲ್ಲ ಸರಕಾರಿ ಕಚೇರಿಗಳು ಹಾಗೂ ಸಚಿವಾಲಯದ ಎಲ್ಲ ಸಭೆ ಸಮಾರಂಭಗಳು ಇನ್ಮುಂದೆ ಪ್ಲ್ಯಾಸ್ಟಿಕ್ ಬಳಕೆಯಿಂದ ಮುಕ್ತವಾಗಲಿವೆ.

Vijaya Karnataka 14 Jul 2018, 12:00 am
ಶಶಿಧರ ಮೇಟಿ, ಬಳ್ಳಾರಿ
Vijaya Karnataka Web BLR-13BLYPH12


ಪ್ಲ್ಯಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಟ್ಟಪ್ಪಣೆ ವಿಧಿಸಿದ್ದು, ರಾಜ್ಯದ ಎಲ್ಲ ಸರಕಾರಿ ಕಚೇರಿಗಳು ಹಾಗೂ ಸಚಿವಾಲಯದ ಎಲ್ಲ ಸಭೆ ಸಮಾರಂಭಗಳು ಇನ್ಮುಂದೆ ಪ್ಲ್ಯಾಸ್ಟಿಕ್ ಬಳಕೆಯಿಂದ ಮುಕ್ತವಾಗಲಿವೆ.

ಪ್ಲ್ಯಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಿ ಹಿಂದಿನ ಸರಕಾರ, 2016ರ ಮಾರ್ಚ್‌ನಲ್ಲೇ ಆದೇಶಿಸಿದೆ. ಪ್ಲ್ಯಾಸ್ಟಿಕ್ ಉತ್ಪನ್ನಗಳ ಉತ್ಪಾದನೆ, ಸರಬರಾಜು, ಸಂಗ್ರಹಣೆ, ಸಾಗಣೆ, ಮಾರಾಟ, ವಿತರಣೆ ಹಾಗೂ ಬಳಕೆ ತಡೆಗೆ ಈ ಆದೇಶ ಅನ್ವಯಿಸುತ್ತದೆ. ಒಂದೂವರೆ ವರ್ಷ ಕಳೆದರೂ ಈ ಆದೇಶ ಪಾಲನೆಯಾಗದ್ದನ್ನು ಗಂಭೀರವಾಗಿ ಪರಿಗಣಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿಗಳು ಜೂ.27ರಂದು ಹೊಸ ಆದೇಶ ಹೊರಡಿಸಿದ್ದಾರೆ. ಸರಕಾರಿ ಕಚೇರಿಗಳು ಹಾಗೂ ಸಚಿವಾಲಯದ ಎಲ್ಲ ಸಭೆ ಸಮಾರಂಭಗಳಲ್ಲಿ ಪ್ಲ್ಯಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣ ತಡೆಯುವಂತೆ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿ.ಪಂ. ಸಿಇಒಗಳಿಗೆ ಸೂಚಿಸಿದ್ದಾರೆ.

ಆದೇಶದಲ್ಲಿ ಏನಿದೆ?:ಎಲ್ಲ ಸರಕಾರಿ ಕಚೇರಿಗಳಲ್ಲಿ ಪ್ಲ್ಯಾಸ್ಟಿಕ್ ವಸ್ತುಗಳ ಬಳಕೆ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಈ ಬಗ್ಗೆ ಎಲ್ಲ ಸಿಬ್ಬಂದಿಗೆ ಜಾಗೃತಿ ಮೂಡಿಸಬೇಕು. ಸರಕಾರಿ ಕಚೇರಿಗಳಲ್ಲಿ ಪ್ಲ್ಯಾಸ್ಟಿಕ್ ನೀರಿನ ಬಾಟಲ್‌ಗಳ ಬದಲು ಸ್ಟೀಲ್ ಲೋಟಗಳನ್ನೇ ಬಳಸಬೇಕು. ಸಚಿವಾಲಯದ ಎಲ್ಲ ಸಭೆ ಸಮಾರಂಭಗಳಲ್ಲೂ ಪ್ಲ್ಯಾಸ್ಟಿಕ್ ನೀರಿನ ಬಾಟಲ್ ಬದಲು ಸ್ಟೀಲ್ ಲೋಟಗಳಲ್ಲೇ ನೀರು ನೀಡಲು ಕ್ರಮಕೈಗೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಯಾಕೆ ಪ್ಲ್ಯಾಸ್ಟಿಕ್ ಹಾನಿಕಾರಕ?: ಬೆಂಗಳೂರಿನ ಹೇರ್‌ಲೈನ್ ಇಂಟರ್‌ನ್ಯಾಷನಲ್ ರಿಸರ್ಚ್ ಆ್ಯಂಡ್ ಟ್ರೀಟ್‌ಮೆಂಟ್ ಸೆಂಟರ್ ಸೇರಿ ನಾನಾ ಸಂಸ್ಥೆಗಳು, ಪ್ಲ್ಯಾಸ್ಟಿಕ್ ಬಳಕೆಯಿಂದಾಗುವ ಹಾನಿಯ ಕುರಿತು ಸಂಶೋಧನೆ ನಡೆಸಿವೆ. ಪ್ಲ್ಯಾಸ್ಟಿಕ್ ಪರಿಸರಕ್ಕೆ ಮಾತ್ರವಲ್ಲದೇ ಆರೋಗ್ಯದ ಮೇಲೂ ಹಾನಿಕಾರಕ ಪರಿಣಾಮ ಬೀರುತ್ತದೆ. ಪ್ಲ್ಯಾಸ್ಟಿಕ್‌ನಲ್ಲಿರುವ ಬಿಪಿಎ ಅಥವಾ ಬಿಸ್ಫಿನಾಲ್-ಎ ಎಂಬ ಅಂಶವು ಮಾನವನ ದೇಹಕ್ಕೆ ನಾನಾ ಆಯಾಮಗಳಲ್ಲಿ ಸೇರಿ ಮಾರಕ ರೋಗಗಳಿಗೆ ಕಾರಣವಾಗಲಿದೆ. ಕ್ಯಾನ್ಸರ್, ನರ ಸಂಬಂಧಿ ಸಮಸ್ಯೆ, ಥೈರಾಯ್ಡ್ ತೊಂದರೆ, ಟ್ಯೂಮರ್ ಅಪಾಯ, ಅಸ್ತಮಾ ಮತ್ತು ಹೃದಯ ಕಾಯಿಲೆ, ಲೈಂಗಿಕ ದೌರ್ಬಲ್ಯ, ಕೂದಲು ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂಬುದು ಸಂಶೋಧನೆಯಿಂದ ಬಹಿರಂಗವಾಗಿದೆ.

40 ಮೈಕ್ರಾನ್‌ಗಿಂತ ತೆಳುವಾದ ಪ್ಲ್ಯಾಸ್ಟಿಕ್ ಕವರ್‌ಗಳು ಆಕಸ್ಮಿಕವಾಗಿ ಪಶು ಪ್ರಾಣಿಗಳ ಹೊಟ್ಟೆ ಸೇರಿದರೆ, ಜೀವಕ್ಕೆ ಕಂಟಕವಾಗಲಿದೆ. ತೆಳುವಾದ ಪ್ಲ್ಯಾಸ್ಟಿಕ್ ಹಾಳೆಯಲ್ಲಿ ಬಿಸಿ ಆಹಾರ ಹಾಕಿದಾಗ ವಿಷಯುಕ್ತ ರಾಸಾಯನಿಕಗಳು ಉತ್ಪತ್ತಿಯಾಗಿ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ. ಪ್ಲ್ಯಾಸ್ಟಿಕ್ ಲೋಟದಲ್ಲಿ ಬಿಸಿನೀರು, ಕಾಫಿ, ಟೀ ಹಾಕಿದರೆ ಅದು ನಿಧಾನವಾಗಿ ವಿಷವಾಗಿ ಪರಿವರ್ತನೆಯಾಗುತ್ತದೆ. ಇಂತಹ ಪದಾರ್ಥ ಸೇವನೆಯಿಂದ ಆರೋಗ್ಯದ ಮೇಲೆ ನಾನಾ ಪರಿಣಾಮ ಬೀರಲಿದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ