ಆ್ಯಪ್ನಗರ

ಸರಕಾರ ಧರ್ಮ ಒಡೆಯಬಾರದು: ಪೇಜಾವರ ಶ್ರೀ

ವೀರಶೈವ-ಲಿಂಗಾಯತ ಒಂದೇಯಾಗಿದ್ದು, ಯಾವುದೇ ಸರಕಾರವಾಗಿರಲಿ ಧರ್ಮ ಒಡೆಯಬಾರದು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

Vijaya Karnataka 24 Mar 2018, 8:27 am
ಹೊಸಪೇಟೆ: ವೀರಶೈವ-ಲಿಂಗಾಯತ ಒಂದೇಯಾಗಿದ್ದು, ಯಾವುದೇ ಸರಕಾರವಾಗಿರಲಿ ಧರ್ಮ ಒಡೆಯಬಾರದು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
Vijaya Karnataka Web government should not be religion pajavar
ಸರಕಾರ ಧರ್ಮ ಒಡೆಯಬಾರದು: ಪೇಜಾವರ ಶ್ರೀ


ಇಲ್ಲಿನ ಕೊಟ್ಟೂರುಸ್ವಾಮಿ ಸಂಸ್ಥಾನಮಠದಲ್ಲಿ ಶುಕ್ರವಾರ ನಡೆದ ‘ಸರ್ವ ಧರ್ಮ ಸಮನ್ವಯ ರಥದ ಪ್ರಾರಂಭೋತ್ಸವ ಹಾಗೂ ವಿಶ್ವಧರ್ಮ ಪ್ರವಚನ ಮಂಗಲ ಮಹೋತ್ಸವ’ದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ‘‘ಈ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಲಿ. ಇಲ್ಲವೇ ಬೇರೆಡೆ ಚರ್ಚೆಗೆ ಆಹ್ವಾನಿಸಿದರೂ ತಾವು ಪಾಲ್ಗೊಳ್ಳುತ್ತೇವೆ. ಬಸವಣ್ಣ-ಪರಮಾತ್ಮ ಒಂದೇ ಆಗಿದ್ದಾರೆ. ದೇವರಲ್ಲಿ ವ್ಯತ್ಯಾಸ ಕಾಣುವುದು ಸರಿಯಲ್ಲ. ಕೊಟ್ಟೂರು ಸಂಸ್ಥಾನಮಠದಿಂದ ಸರ್ವಧರ್ಮಗಳ ಸಮನ್ವಯ ರಥೋತ್ಸವ ಜರುಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು’’ ಎಂದರು.

ಕೇಂದ್ರ ಸರಕಾರಕ್ಕೂ ಮನವಿ: ‘‘ವೀರಶೈವ-ಲಿಂಗಾಯತ ಧರ್ಮದ ಕುರಿತು ಸಮಯ ಬಂದಾಗ ಕೇಂದ್ರ ಸರಕಾರಕ್ಕೂ ಮನವಿ ಮಾಡಲಾಗುವುದು. ವೀರಶೈವ ಲಿಂಗಾಯತರು ಒಟ್ಟಾಗಿರಬೇಕು. ಸಾಮರಸ್ಯ-ಸಮನ್ವಯತೆ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಸಹಬಾಳ್ವೆ ಹಾಗೂ ಸಹೋದರತೆಗೆ ಹೆಚ್ಚಿನ ಒತ್ತು ನೀಡಬೇಕು. ವೀರಶೈವ-ಲಿಂಗಾಯತ ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು’’ ಎಂದು ಸಲಹೆ ನೀಡಿದರು.

‘‘ನಾವೆಲ್ಲ ಹಿಂದೂ ಧರ್ಮದ ಸೋದರರಾಗಿದ್ದೇವೆ. ಶಿವನ ಪೂಜೆ ಮಾಡುವವರು ಬೇರೆ ಬೇರೆ ಎಂದು ಹೇಳಲಿಕ್ಕಾಗದು. ಎಲ್ಲರೂ ಸಮನ್ವಯದಿಂದ ಇರಬೇಕು. ಮುಸಲ್ಮಾನರು, ವೈಷ್ಣವರು ಎಲ್ಲರೂ ನಮ್ಮಲಿದ್ದಾರೆ. ಎಲ್ಲರೂ ಸೋದರತ್ವ ಸಾರಬೇಕು’’ ಎಂದು ಹೇಳಿದರು.

ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜ.ಶ್ರೀ ಡಾ.ಸಂಗನಬಸವ ಸ್ವಾಮೀಜಿ, ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ.ಪ್ರಸನ್ನ ರೇಣುಕವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು, ಕಾಶಿಯ ಜಂಗಮವಾಡಿಮಠದ ಶ್ರೀ 1008 ಜ.ಡಾ.ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಮುಂಡರಗಿಯ ಅನ್ನದಾನೇಶ್ವರಮಠದ ಡಾ.ಅನ್ನದಾನ ಮಹಾಶಿವಯೋಗಿ, ಗರಗ-ನಾಗಲಾಪುರದ ಒಪ್ಪತ್ತೇಶ್ವರಮಠದ ಶ್ರೀ ಮರಿಮಹಾಂತ ಸ್ವಾಮೀಜಿ, ಕಮ್ಮರ್ಚೇಡಿನ ಕಲ್ಯಾಣಸ್ವಾಮಿ ಮಠದ ಶ್ರೀ ಕಲ್ಯಾಣ ಸ್ವಾಮೀಜಿ ಸೇರಿ ನಾನಾ ಮಠಾಧೀಶರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ