ಶಶಿಧರ ಮೇಟಿ, ಬಳ್ಳಾರಿ
ಹೊರ ರಾಜ್ಯದ ಮಕ್ಕಳ ಕನ್ನಡಪ್ರೇಮಕ್ಕೆ ರಾಜ್ಯ ಸರಕಾರ ತಣ್ಣೀರು ಎರಚಿದೆ. ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಮುಂದುವರಿಸಿದ ಹೊರರಾಜ್ಯದ ಕನ್ನಡಿಗ ಮಕ್ಕಳಿಗೆ ಸ್ಕಾಲರ್ಶಿಪ್ ನೀಡಲು ಸರಕಾರ ಕೈಎತ್ತಿರುವುದು ಬೆಳಕಿಗೆ ಬಂದಿದೆ.
ನೆರೆಯ ರಾಜ್ಯಗಳಲ್ಲಿ 1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗಮಾಡಿರುವ ವಿದ್ಯಾರ್ಥಿಗಳಿಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳು ಸಿಗಲಿವೆ ಎಂಬ ಭರವಸೆ ಹುಸಿಯಾಗಿದೆ. ಹೊರರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿತು, ಕರ್ನಾಟಕದಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಬಾರದು ಎಂಬ ಹಿಂದುಳಿದ ವರ್ಗ ಮತ್ತು ಕಲ್ಯಾಣ ಇಲಾಖೆಯ ನಿರ್ಧಾರ, ಕನ್ನಡ ಮಕ್ಕಳನ್ನೇ ಅಣಕಿಸುವಂತಿದೆ. ವಿದ್ಯಾರ್ಥಿ ವೇತನ ದೊರೆಯದ ಬೇಸರದಲ್ಲೇ ಅನ್ಯ ರಾಜ್ಯದ ಮಕ್ಕಳು ಒಣಪ್ರತಿಷ್ಠೆಯಿಂದ ಕನ್ನಡಾಭಿಮಾನ ಮೆರೆಯುವಂತಾಗಿದೆ.
ಮುಖ್ಯಮಂತ್ರಿಗೂ ಮನವಿ: ಬಳ್ಳಾರಿಯಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ, ಆಂಧ್ರಪ್ರದೇಶದ ಡಿ.ಹಿರೇಹಾಳ್ ಗ್ರಾಮದ ಆದಿಶೇಷ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ. ‘‘ನಾನು ಬಳ್ಳಾರಿಯಲ್ಲಿ ಸ್ನಾತಕೋತ್ತರ ವ್ಯಾಸಂಗಮಾಡುತ್ತಿರುವೆ. ಕರ್ನಾಟಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ನೆಪವೊಡ್ಡಿ ಆಂಧ್ರ ಸರಕಾರ, ನನ್ನ ವಿದ್ಯಾರ್ಥಿ ವೇತನ ಮಂಜೂರಿಗೆ ನಿರಾಕರಿಸಿದೆ. ನಾನು ಆಂಧ್ರದಲ್ಲಿ ಕನ್ನಡ ಮಾಧ್ಯಮ ಓದಿರುವುದರಿಂದ ಕರ್ನಾಟಕ ಸರಕಾರ, ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ನನ್ನಂತಹ ಅನ್ಯರಾಜ್ಯದ ವಿದ್ಯಾರ್ಥಿಗಳಿಗೆ ನ್ಯಾಯಯುತ ವಿದ್ಯಾರ್ಥಿ ವೇತನ ಮಂಜೂರಿಗೆ ಕ್ರಮಕೈಗೊಳ್ಳಬೇಕು’’ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.
ಪ್ರಸ್ತಾವನೆ ತಿರಸ್ಕೃತ: ಅನ್ಯರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕುರಿತ ಪತ್ರವನ್ನು ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿಯವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ರವಾನಿಸಿದ್ದರು. ಇದನ್ನು ಪರಿಶೀಲಿಸಿದ ಇಲಾಖೆಯ ಆಯುಕ್ತರು, ಹೊರ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಂತೆ ಸರಕಾರದ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಸರಕಾರ ಈ ಪ್ರಸ್ತಾವನೆಯನ್ನು ಒಪ್ಪಿಲ್ಲ ಎಂದು ಹಿಂದುಳಿದ ವರ್ಗಗಳ ಆಯುಕ್ತರು, ಆದಿಶೇಷ ಅವರ ಮನವಿಗೆ ಹಿಂಬರಹ ನೀಡಿದೆ. ಇದು ರಾಜ್ಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹೊರರಾಜ್ಯದ ವಿದ್ಯಾರ್ಥಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.
........
1 ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮವನ್ನು ಇಷ್ಟ ಪಟ್ಟು ವ್ಯಾಸಂಗಮಾಡಿರುವೆ. ಉನ್ನತ ವ್ಯಾಸಂಗವನ್ನು ಕನ್ನಡ ಮಾಧ್ಯಮದಲ್ಲೇ ಮುಂದುವರಿಸಿರುವೆ. ಕರ್ನಾಟಕದಲ್ಲಿ ವ್ಯಾಸಂಗಮಾಡುತ್ತಿದ್ದರೂ ವಿದ್ಯಾರ್ಥಿ ವೇತನ ನಿರಾಕರಿಸಿದರೆ ನಾವು ಎಲ್ಲಿಗೆ ಹೋಗಬೇಕು? ಆಂಧ್ರಕ್ಕೆ ಹೋದರೆ, ನೀವು ಕನ್ನಡ ಓದುತ್ತಿದ್ದೀರಿ ಎನ್ನುತ್ತಾರೆ. ಕರ್ನಾಟಕದಲ್ಲಿ, ನೀವು ಆಂಧ್ರದವರು ಎನ್ನುತ್ತಾರೆ. ನಾವು ನ್ಯಾಯಕ್ಕಾಗಿ ಯಾರನ್ನು ಕೋರಬೇಕು?
-ಆದಿಶೇಷ, ಸ್ನಾತಕೋತ್ತರ ವಿದ್ಯಾರ್ಥಿ, ಡಿ.ಹಿರೇಹಾಳ್
ಹೊರ ರಾಜ್ಯದ ಮಕ್ಕಳ ಕನ್ನಡಪ್ರೇಮಕ್ಕೆ ರಾಜ್ಯ ಸರಕಾರ ತಣ್ಣೀರು ಎರಚಿದೆ. ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಮುಂದುವರಿಸಿದ ಹೊರರಾಜ್ಯದ ಕನ್ನಡಿಗ ಮಕ್ಕಳಿಗೆ ಸ್ಕಾಲರ್ಶಿಪ್ ನೀಡಲು ಸರಕಾರ ಕೈಎತ್ತಿರುವುದು ಬೆಳಕಿಗೆ ಬಂದಿದೆ.
ನೆರೆಯ ರಾಜ್ಯಗಳಲ್ಲಿ 1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗಮಾಡಿರುವ ವಿದ್ಯಾರ್ಥಿಗಳಿಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳು ಸಿಗಲಿವೆ ಎಂಬ ಭರವಸೆ ಹುಸಿಯಾಗಿದೆ. ಹೊರರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿತು, ಕರ್ನಾಟಕದಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಬಾರದು ಎಂಬ ಹಿಂದುಳಿದ ವರ್ಗ ಮತ್ತು ಕಲ್ಯಾಣ ಇಲಾಖೆಯ ನಿರ್ಧಾರ, ಕನ್ನಡ ಮಕ್ಕಳನ್ನೇ ಅಣಕಿಸುವಂತಿದೆ. ವಿದ್ಯಾರ್ಥಿ ವೇತನ ದೊರೆಯದ ಬೇಸರದಲ್ಲೇ ಅನ್ಯ ರಾಜ್ಯದ ಮಕ್ಕಳು ಒಣಪ್ರತಿಷ್ಠೆಯಿಂದ ಕನ್ನಡಾಭಿಮಾನ ಮೆರೆಯುವಂತಾಗಿದೆ.
ಮುಖ್ಯಮಂತ್ರಿಗೂ ಮನವಿ: ಬಳ್ಳಾರಿಯಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ, ಆಂಧ್ರಪ್ರದೇಶದ ಡಿ.ಹಿರೇಹಾಳ್ ಗ್ರಾಮದ ಆದಿಶೇಷ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ. ‘‘ನಾನು ಬಳ್ಳಾರಿಯಲ್ಲಿ ಸ್ನಾತಕೋತ್ತರ ವ್ಯಾಸಂಗಮಾಡುತ್ತಿರುವೆ. ಕರ್ನಾಟಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ನೆಪವೊಡ್ಡಿ ಆಂಧ್ರ ಸರಕಾರ, ನನ್ನ ವಿದ್ಯಾರ್ಥಿ ವೇತನ ಮಂಜೂರಿಗೆ ನಿರಾಕರಿಸಿದೆ. ನಾನು ಆಂಧ್ರದಲ್ಲಿ ಕನ್ನಡ ಮಾಧ್ಯಮ ಓದಿರುವುದರಿಂದ ಕರ್ನಾಟಕ ಸರಕಾರ, ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ನನ್ನಂತಹ ಅನ್ಯರಾಜ್ಯದ ವಿದ್ಯಾರ್ಥಿಗಳಿಗೆ ನ್ಯಾಯಯುತ ವಿದ್ಯಾರ್ಥಿ ವೇತನ ಮಂಜೂರಿಗೆ ಕ್ರಮಕೈಗೊಳ್ಳಬೇಕು’’ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.
ಪ್ರಸ್ತಾವನೆ ತಿರಸ್ಕೃತ: ಅನ್ಯರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕುರಿತ ಪತ್ರವನ್ನು ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿಯವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ರವಾನಿಸಿದ್ದರು. ಇದನ್ನು ಪರಿಶೀಲಿಸಿದ ಇಲಾಖೆಯ ಆಯುಕ್ತರು, ಹೊರ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಂತೆ ಸರಕಾರದ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಸರಕಾರ ಈ ಪ್ರಸ್ತಾವನೆಯನ್ನು ಒಪ್ಪಿಲ್ಲ ಎಂದು ಹಿಂದುಳಿದ ವರ್ಗಗಳ ಆಯುಕ್ತರು, ಆದಿಶೇಷ ಅವರ ಮನವಿಗೆ ಹಿಂಬರಹ ನೀಡಿದೆ. ಇದು ರಾಜ್ಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹೊರರಾಜ್ಯದ ವಿದ್ಯಾರ್ಥಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.
........
1 ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮವನ್ನು ಇಷ್ಟ ಪಟ್ಟು ವ್ಯಾಸಂಗಮಾಡಿರುವೆ. ಉನ್ನತ ವ್ಯಾಸಂಗವನ್ನು ಕನ್ನಡ ಮಾಧ್ಯಮದಲ್ಲೇ ಮುಂದುವರಿಸಿರುವೆ. ಕರ್ನಾಟಕದಲ್ಲಿ ವ್ಯಾಸಂಗಮಾಡುತ್ತಿದ್ದರೂ ವಿದ್ಯಾರ್ಥಿ ವೇತನ ನಿರಾಕರಿಸಿದರೆ ನಾವು ಎಲ್ಲಿಗೆ ಹೋಗಬೇಕು? ಆಂಧ್ರಕ್ಕೆ ಹೋದರೆ, ನೀವು ಕನ್ನಡ ಓದುತ್ತಿದ್ದೀರಿ ಎನ್ನುತ್ತಾರೆ. ಕರ್ನಾಟಕದಲ್ಲಿ, ನೀವು ಆಂಧ್ರದವರು ಎನ್ನುತ್ತಾರೆ. ನಾವು ನ್ಯಾಯಕ್ಕಾಗಿ ಯಾರನ್ನು ಕೋರಬೇಕು?
-ಆದಿಶೇಷ, ಸ್ನಾತಕೋತ್ತರ ವಿದ್ಯಾರ್ಥಿ, ಡಿ.ಹಿರೇಹಾಳ್