ಆ್ಯಪ್ನಗರ

ವರ್ಷಧಾರೆಗೆ ಬಳ್ಳಾರಿ ಜಿಲ್ಲೆ ತತ್ತರ, ಅಕ್ಷರಶಃ ಮಳೆನಾಡಾದ ಗಣಿನಾಡು

ಸತತ ಎರಡ್ಮೂರು ದಿನಗಳಿಂದ ಬಿಟ್ಟೂ ಬಿಡದೇ ಬಳ್ಳಾರಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಗಣಿನಾಡು ಮಳೆನಾಡಾಗಿ ಪರಿವರ್ತನೆಯಾಗಿದೆ. ಕೆರೆ, ಕಟ್ಟೆಗಳು ಭರ್ತಿಯಾಗಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

Vijaya Karnataka 19 Nov 2021, 11:09 pm
ಬಳ್ಳಾರಿ: ಸತತ ಎರಡು ಮೂರು ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಗಣಿನಾಡು ಮಳೆನಾಡಾಗಿ ಪರಿವರ್ತನೆಯಾಗಿದೆ. ಕೆರೆ, ಕಟ್ಟೆಗಳು ಭರ್ತಿಯಾಗಿ, ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
Vijaya Karnataka Web rain cold


ನಗರದ ಕನಕ ದುರ್ಗಮ್ಮ ದೇವಸ್ಥಾನ ರಸ್ತೆ ಮಾರ್ಗದ ರೈಲ್ವೆ ಕೆಳ ಸೇತುವೆಯಲ್ಲಿ ಮೊಣಕಾಲವರೆಗೂ ನೀರು ನಿಂತು ಸಂಚಾರಕ್ಕೆ ಅಡಚಣೆಯಾಯಿತು. ಎಸ್‌.ಎನ್‌. ಪೇಟೆ ಕೆಳಸೇತುವೆಯಲ್ಲಿ ಮಧ್ಯಾಹ್ನದವರೆಗೆ ಮಳೆ ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ತಾಲೂಕು ಕಚೇರಿ ಹಾಗೂ ಡಿಸಿ ಕಚೇರಿ ಆವರಣದಲ್ಲಿನ ಆನೇಕ ಕಚೇರಿಗಳ ಮುಂಭಾಗದಲ್ಲಿ ಮಳೆನೀರು ನಿಂತಿದ್ದರಿಂದ ಹೊಂಡವಾಗಿ ಮಾರ್ಪಾಟಾಗಿದ್ದು ಕಂಡುಬಂತು. ನಿಂತ ನೀರನ್ನು ಹೊರ ಹಾಕಲು ಕಚೇರಿ ಸಿಬ್ಬಂದಿ ಪರದಾಡಿದರು. ಇನ್ನು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಮಳೆ ನೀರಿನಿಂದಾಗಿ ವ್ಯಾಪಾರಸ್ಥರು, ಕೂಲಿಕಾರ್ಮಿಕರು ಸಮಸ್ಯೆ ಅನುಭವಿಸಿದರು. ಮಾರುಕಟ್ಟೆ ಆವರಣದಲ್ಲಿ ಹಾಕಿದ್ದ ಧಾನ್ಯಗಳು ಮಳೆಗೆ ತೊಯ್ದವು.

ಮನೆಗೆ ನುಗ್ಗಿದ ನೀರು

ನಗರದ ನಲ್ಲಚೆರುವು, ದುರ್ಗಮ್ಮ ದೇವಸ್ಥಾನ, ಮೋಕಾ ರಸ್ತೆ, ತಾಳೂರು ರಸ್ತೆ, ಹವಂಬಾವಿ ಹಾಗೂ ಗುಗ್ಗರಹಟ್ಟಿ ಪ್ರದೇಶಗಳಲ್ಲಿನ ಬಡಾವಣೆಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಇನ್ನಿಲ್ಲದ ಸಮಸ್ಯೆ ಎದುರಿಸಿದರು. ನಗರದ ವಿವಿಧ ಬಡಾವಣೆಯಲ್ಲಿ ಚರಂಡಿ ನೀರು ತುಂಬಿ ರಸ್ತೆಗೆ ಹರಿಯಿತು.

ರಾಜ್ಯದಲ್ಲಿ ಇನ್ನೂ ಕೆಲವು ದಿನ ಮಳೆ, ಹಲವು ಜಿಲ್ಲೆಗಳ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
ಬೆಳೆಗೆ ಹಾನಿ

ತಾಲೂಕಿನ ಕೊಳಗಲ್ಲು, ಕೊರ್ಲಗುಂದಿ, ಮೋಕಾ, ಯರ್ರಗುಡಿ, ಕಪ್ಪಗಲ್ಲು, ಸೋಮಸಮುದ್ರ, ಹಂದಿಹಾಳು, ಜಾಲಿಬೆಂಚೆ, ಸಂಜೀವರಾಯನಕೋಟೆ, ಮಿಂಚೇರಿ, ಶ್ರೀಧರಗಡ್ಡೆ, ತಾಳೂರು, ಹಡ್ಲಿಗಿ, ಬಸರಕೋಡು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಮೆಣಸಿನಕಾಯಿ, ಭತ್ತ, ಜೋಳ ಸೇರಿದಂತೆ ಇನ್ನಿತರೆ ಬೆಳೆಗೆ ಹಾನಿಯಾಗಿದೆ. ಭತ್ತದ ಫಸಲು ಕಟಾವು ಹಂತಕ್ಕೆ ಬಂದಿದ್ದು, ಧಾರಾಕಾರ ಮಳೆಯಿಂದ ಕೆಲವೆಡೆ ನೆಲಕ್ಕೊರಗಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.

ಮಳೆ ವಿವರ

ಬಳ್ಳಾರಿ 92.9 ಮಿ.ಮೀ, ಸಿರುಗುಪ್ಪ 55.4 ಮಿ.ಮೀ, ಕಂಪ್ಲಿ 14.2 ಮಿ.ಮೀ, ಹೆಚ್‌.ಬಿ.ಹಳ್ಳಿ 47.4 ಮಿ.ಮೀ, ಹರಪನಹಳ್ಳಿ 35 ಮಿ.ಮೀ, ಕೂಡ್ಲಿಗಿ 70.3 ಮಿ.ಮೀ, ಹೊಸಪೇಟೆ 58.6 ಮಿ.ಮೀ, ಕೊಟ್ಟರು 44.8 ಮಿ.ಮೀ, ಹಡಗಲಿ 70.6 ಮಿ.ಮೀ, ಸಂಡೂರು 86.6 ಮಿ.ಮೀ, ಕುರುಗೋಡು 76.6 ಮಿ. ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಇನ್ನು ನಾಲ್ಕು ದಿನಗಳವರೆಗೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಾಲಾ, ಕಾಲೇಜುಗಳಿಗೆ ರಜೆ

ಸತತ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯಾರ್ಥಿಗಳ ಸುರಕ್ಷತೆ ಹಿತದೃಷ್ಟಿಯಿಂದ ಶುಕ್ರವಾರ ಮತ್ತು ಶನಿವಾರ ಶಾಲಾ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ ಆದೇಶದಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ